17/07/2026
🛕🛕🛕🛕🛕🛕🛕🛕🛕🛕
*ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಕ್ಷೇತ್ರ ಪೆರ್ಣಂಕಿಲ*
*ಕ್ಷೇತ್ರದ ನೂತನ ಮಹಾರಥ ಮತ್ತು ಅಂಗಣದ ಚಪ್ಪರ ಮುಹೂರ್ಥ*
ಇಂದು ಶ್ರೀ ಕ್ಷೇತ್ರ ಪೆರ್ಣಂಕಿಲದ ಎರಡನೇ ಹಂತದ ಜೀರ್ಣೋದ್ಧಾರದ ಅಂಗವಾಗಿ ಹೊರಾಂಗಣಕ್ಕೆ ತಗಡು ಚಪ್ಪರ ಮುಹೂರ್ಥ ಮತ್ತು ನೂತನ ಮಹಾರಥ ನಿರ್ಮಾಣಕ್ಕೆ ಚಾಲನೆ ಕಾರ್ಯಕ್ರಮ ನೆರವೇರಿತು. ಉಡುಪಿ ಪೇಜಾವರ ಮಠದ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮತ್ತು ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಈಶ ಪ್ರಿಯ ತೀರ್ಥ ಸ್ವಾಮೀಜಿಯವರು ಜತೆಯಾಗಿ ಚಾಲನೆ ನೀಡಿದರು. ಸುಮಾರು ಎರಡು ಕೋಟಿ ರೂಪಾಯಿಯ ಎರಡು ಕಾಮಗಾರಿಗಳು ಮುಂದಿನ ರಥೋತ್ಸವದ ಒಳಗೆ ನೆರವೇರಲಿವೆ.
ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿದ್ವಾನ್ ಶ್ರೀ ಪೆರ್ಣಂಕಿಲ ಹರಿದಾಸ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಪೆರ್ಣಂಕಿಲ ಶ್ರೀಶ ನಾಯಕ್, ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ನೀಲಾವರದ ಉದ್ಯಮಿಗಳಾದ ನಾಗರಾಜ ಶೆಟ್ಟಿಯವರು ಉಪಸ್ಥಿತರಿದ್ದರು. ಹರಿದಾಸ ಭಟ್ಟರು ಸ್ವಾಗತಿಸಿ ಶ್ರೀಶ ನಾಯಕರು ಪ್ರಸ್ಥಾವನೆಗೈದರು. ಅದಮಾರು ಶ್ರೀಗಳು ಪೆರ್ಣಂಕಿಲ ಕ್ಷೇತ್ರದ ಭಕ್ತನು ತಾನು. ಪೇಜಾವರ ಶ್ರೀಗಳ ಯೋಚನಾ ಲಹರಿಯನ್ನು ಕೊಂಡಾಡಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವರೆ ಅವರ ಮಾರ್ಗದರ್ಶನ ಅದ್ಭುತ ಎಂದರು. ಪೇಜಾವರ ಶ್ರೀಗಳು ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮಿಸಿದ ಕರಸೇವಕರ ಕಾರ್ಯವನ್ನು ಶ್ಲಾಘಿಸಿ ಇತರ ದೇಗುಲಗಳ ಅಭಿವೃದ್ಧಿಯಲ್ಲಿ ಮಾದರಿಯಾಗುವಂತೆ ಶ್ರಮಿಸಿದ್ದು ಅವಿಸ್ಮರಣೀಯ ಎಂದರು. ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ನೂತನ ಕಾಮಗಾರಿಗಳನ್ನು ಯೋಜಿಸಿದ್ದು ದೇವರ ಕೃಪೆಯಿಂದ ಮತ್ತು ಭಕ್ತಜನರ ಸಹಕಾರದಿಂದ ಯಶಸ್ವಿಯಾಗಿ ನೆರವೇರುತ್ತದೆ ಎನ್ನುವ ಭರವಸೆಯಿದೆ. ಸೇವೆಯ ಸದಾವಕಾಶವನ್ನು ಬಳಸಿಕೊಂಡು ದೇವರಿಗೆ ಸಮರ್ಪಿಸಿಕೊಳ್ಳಿರಿ ಎಂದು ಆಶಿರ್ವಚನಗೈದರು. ಉದ್ಯಮಿಗಳಾದ ನೀಲಾವರ ನಾಗರಾಜ ಶೆಟ್ಟಿಯವರು ಸಮಯೋಚಿತವಾಗಿ ಮಾತನಾಡಿ ಸಹಕರಿಸುವ ಭರವಸೆ ನೀಡಿದರು.
ರಥ ಶಿಲ್ಪಿ ಗಣೇಶ್ ಆಚಾರ್ಯ ಮುತ್ತೂರು ಮತ್ತು ಚಪ್ಪರ ನಿರ್ಮಾಣ ಗುತ್ತಿಗೆದಾರರಾದ ಮೋಹನ್ ಭಾಗವತ್ ಕಡಿಯಾಳಿ ಉಪಸ್ಥಿತರಿದ್ದರು. ಉಮೇಶ್ ನಾಯಕ್ ಪೆರ್ಣಂಕಿಲ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯನಿರ್ವಹಣಾಧಿಕಾರಿಗಳಾದ ವಿಷ್ಣುಮೂರ್ತಿ ಆಚಾರ್ಯ, ಮಠದ ಲೆಕ್ಕಾಧಿಕಾರಿ ಇಂದುಶೇಖರ, ವಕೀಲರಾದ ಸತೀಶ್ ಪೂಜಾರಿ ಪೆಲತ್ತೂರು ಕ್ಷೇತ್ರದ ಅರ್ಚಕ ವರ್ಗ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
🙏🙏🙏🙏🙏🙏🙏🙏🙏🙏