22/10/2022
#ಫಲಹಾರವ_ಮಾಡಯ್ಯ_ಶ್ರೀಗುರುರಾಯ
ಫಲಹಾರವ ಮಾಡಯ್ಯ ಶ್ರೀಗುರುರಾಯ
ಫಲಹಾರವ ಮಾಡಯ್ಯ |
ವೇದೋಕ್ತ ಕ್ರಿಯೆಗಳ ಮಾಡಿ ನಿರಂತರ
ಮೋದದಿಂದವುಗಳ ಫಲವನರ್ಪಿಸುವೆನು ||
ಹರಿಹರದ ಶ್ರೀ ಶಿವಾನಂದ ತೀರ್ಥ ಸ್ವಾಮಿಗಳು ತಮ್ಮ ಗುರುಗಳನ್ನು ಸ್ತುತಿಸುವಾಗ ಬರೆದ ಫಲಹಾರ ಪದ್ಯದ ಒಂದು ಚರಣವಿದು.
ಈ ಪದ್ಯದಲ್ಲಿ ಶ್ರೀಗುರುಗಳನ್ನು, ಫಲಹಾರವನ್ನು ಮಾಡಬೇಕಾಗಿ ಪ್ರಾರ್ಥಿಸಲಾಗಿದೆ. ಗುರುಗಳಿಗೆ ಯಾವ ಫಲವನ್ನು ಸಮರ್ಪಿಸುತ್ತಿದ್ದೇವೆ ಎಂದರೆ,
ವೇದದಲ್ಲಿ ( ಹಾಗೂ ಸ್ಮೃತಿ, ಪುರಾಣದಿಗಳಲ್ಲಿ) ಹೇಳಿರುವ ಕರ್ಮಗಳನ್ನು ಮಾಡಿದಾಗ ಉಂಟಾಗುವ ಪುಣ್ಯ ವಿಶೇಷವೇ ಫಲ. ಆ ಫಲವನ್ನೇ ಸದ್ಗುರುಗಳಿಗೆ ಅರ್ಪಿಸುತ್ತೇನೆ ಎನ್ನುವ ಅರ್ಥ ಇಲ್ಲಿದೆ.
ಇದರ ತಾತ್ಪರ್ಯವೇನೆಂದರೇ, ಯಾವ ಕರ್ಮವನ್ನು ಮಾಡಿದರೂ ಸಹ ಅದರಿಂದ ಬರುವ ಫಲದ ಮೇಲೆ ಅಪೇಕ್ಷೆಯನ್ನಿಡದೇ, ಕೇವಲ ಗುರು ಪ್ರೀತ್ಯರ್ಥವಾಗಿಯೇ ಕರ್ಮವನ್ನು ಮಾಡಬೇಕು ಎನ್ನುವುದಾಗಿದೆ. ಹೀಗೆ ಫಲಾಪೇಕ್ಷೆ ಇಲ್ಲದೆ ಕೇವಲ ಈಶ್ವರ/ಗುರು ಪ್ರೀತ್ಯರ್ಥವಾಗಿ ಕರ್ಮವನ್ನು ಮಾಡಿದರೆ ಅದರಿಂದ ಗುರುಪ್ರೀತಿಯು ಉಂಟಾಗಿ ಜ್ಞಾನ ಮಾರ್ಗದಲ್ಲಿ ನಡೆಯಲು ಅನುಕೂಲವಾಗುತ್ತದೆ ಎನ್ನುವುದೇ ಇಲ್ಲಿಯ ಸ್ವಾರಸ್ಯ.