21/08/2026
#ಮೂಯೆ ಮುಕದ್ದಸ್ನ ಬರಕತ್ಗಳು #
ಹಝ್ರತ್ ಶಾಹ್ ವಲೀಯುಲ್ಲಾಹ್ ಮುಹದ್ದಿಸ್ ದೆಹ್ಲವಿ (ರಹ್ಮತುಲ್ಲಾಹಿ ಅಲೈಹಿ) ಅವರು ತಮ್ಮ “ಅನ್ಫಾಸುಲ್ ಆರಿಫೀನ್” ಎಂಬ ಕಿತಾಬಿನಲ್ಲಿ ಮೂಯೆ ಮುಬಾರಕ್ನ ಬರಕತ್ಗಳನ್ನು ಈ ರೀತಿಯಾಗಿ ವಿವರಿಸಿದ್ದಾರೆ:
ಒಮ್ಮೆ ನನಗೆ ತೀವ್ರವಾದ ಜ್ವರ ಬಂದು, ಕಾಯಿಲೆ ಬಹಳ ದಿನಗಳವರೆಗೆ ಮುಂದುವರಿಯಿತು. ಕೊನೆಗೆ ನಾನು ಜೀವನದ ಮೇಲೆಯೇ ನಿರಾಶನಾದೆ. ಆ ಸಮಯದಲ್ಲಿ ನನಗೆ ಒಂದು ರೀತಿಯ ನಿದ್ರಾವಸ್ಥೆ ಆವರಿಸಿತು. ಆಗ ನಾನು ಹಝ್ರತ್ ಶೈಖ್ ಅಬ್ದುಲ್ ಅಝೀಝ್ ಅವರನ್ನು ನನ್ನ ಮುಂದೆ ನೋಡಿದೆ. ಅವರು ಹೀಗೆ ಹೇಳಿದರು:
“ಮಗನೇ! ಹಝ್ರತ್ ಪೈಗಂಬರ್ ﷺ ನಿನ್ನ ಆರೋಗ್ಯ ವಿಚಾರಿಸಲು ಬರುತ್ತಿದ್ದಾರೆ. ಬಹುಶಃ ಅವರು ನಿನ್ನ ಕಾಲುಗಳ ಕಡೆಗಿನ ದಿಕ್ಕಿನಿಂದ ಬರಬಹುದು. ಆದ್ದರಿಂದ, ಹಝೂರ್ ﷺ ಅವರ ಕಡೆಗೆ ನಿನ್ನ ಕಾಲುಗಳು ಇರುವಂತೆ ಮಂಚವನ್ನು ಇಡಬೇಡ.”
ಇದನ್ನು ಕೇಳಿದ ನಂತರ ನನಗೆ ಸ್ವಲ್ಪ ಚೇತರಿಕೆ ಉಂಟಾಯಿತು. ಮಾತನಾಡುವ ಶಕ್ತಿ ಇರಲಿಲ್ಲ. ಅಲ್ಲಿದ್ದವರು ನನ್ನ ಸನ್ನೆಯಿಂದ ಮಂಚದ ದಿಕ್ಕನ್ನು ಬದಲಿಸಿದರು. ಅದೇ ಸಮಯದಲ್ಲಿ ಆನ್ಹಝ್ರತ್ ﷺ ತಶ್ರೀಫ್ (ಆಗಮನ) ಆಯಿತು ಮತ್ತು ಹೀಗೆ ಹೇಳಿದರು:
“ಕೈಫ ಹಾಲುಕ ಯಾ ಬನೀ?”
(ಮಗನೇ! ನಿನ್ನ ಸ್ಥಿತಿ ಹೇಗಿದೆ?)
ಈ ಮಾತಿನ ಸವಿಯು ನನ್ನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ನನ್ನಲ್ಲಿ ಅಳಲು, ದುಃಖ ಮತ್ತು ಆತಂಕದ ವಿಚಿತ್ರವಾದ ಸ್ಥಿತಿ ಉಂಟಾಯಿತು. ಆನ್ಹಝ್ರತ್ ﷺ ನನ್ನನ್ನು ತಮ್ಮ ಬಗಲಿಗೆ ಈ ರೀತಿಯಾಗಿ ಸೇರಿಸಿಕೊಂಡರು: ಅವರ ದಾಡಿ ಮುಬಾರಕ್ ನನ್ನ ತಲೆಯ ಮೇಲಿತ್ತು ಮತ್ತು ಅವರ ಜುಬ್ಬಾ ಮುಬಾರಕ್ ನನ್ನ ಕಣ್ಣೀರಿನಿಂದ ಒದ್ದೆಯಾಯಿತು.
ನಂತರ ನಿಧಾನವಾಗಿ ಆ ವಜ್ದ್ ಮತ್ತು ಆತಂಕದ ಸ್ಥಿತಿ ಶಾಂತಿಗೆ ಬದಲಾಯಿತು. ಅದೇ ಸಮಯದಲ್ಲಿ ನನ್ನ ಹೃದಯದಲ್ಲಿ, ಬಹಳ ಕಾಲದಿಂದಲೂ ಮೂಯೆ ಮುಬಾರಕ್ ಪಡೆಯಬೇಕೆಂಬ ಆಸೆ ಇದೆ; ಈ ಸಮಯದಲ್ಲಿ ತಬರ್ರುಕ್ ಆಗಿ ಅದನ್ನು ದಯಪಾಲಿಸಿದರೆ ಎಷ್ಟು ದೊಡ್ಡ ಕೃಪೆಯಾಗುತ್ತದೆ ಎಂಬ ಆಲೋಚನೆ ಮೂಡಿತು.
ನನ್ನ ಈ ಆಲೋಚನೆಯನ್ನು ಆನ್ಹಝ್ರತ್ ﷺ ಅರಿತುಕೊಂಡರು. ತಮ್ಮ ದಾಡಿ ಮುಬಾರಕ್ ಮೇಲೆ ಕೈಯಾಡಿಸಿ ಎರಡು ಪವಿತ್ರ ಕೂದಲುಗಳನ್ನು ನನ್ನ ಕೈಯಲ್ಲಿ ಇಟ್ಟರು.
ನಂತರ ನನ್ನ ಹೃದಯದಲ್ಲಿ, “ಈ ಎರಡು ಪವಿತ್ರ ಕೂದಲುಗಳು ನಾನು ಎಚ್ಚರಗೊಂಡ ನಂತರವೂ ನನ್ನ ಬಳಿ ಉಳಿಯುತ್ತವೆಯೇ?” ಎಂಬ ಸಂದೇಹ ಮೂಡಿತು. ಈ ಆಲೋಚನೆಯನ್ನು ಅರಿತು ಆನ್ಹಝ್ರತ್ ﷺ ಹೀಗೆ ನುಡಿದರು:
“ಈ ಎರಡು ಕೂದಲುಗಳು ಆಲಮೆ-ಹುಶ್ ಅಥವಾ ಎಚ್ಚರದ ಸ್ಥಿತಿಯಲ್ಲಿಯೂ ಸಹ ಉಳಿಯುತ್ತವೆ.”
ಅದಾದ ನಂತರ ಆನ್ಹಝ್ರತ್ ﷺ ನನಗೆ ಸಂಪೂರ್ಣ ಆರೋಗ್ಯ ಮತ್ತು ದೀರ್ಘಾಯುಷ್ಯದ ಶುಭವಾರ್ತೆ ನೀಡಿದರು. ಅದೇ ಸಮಯದಲ್ಲಿ ನನ್ನ ಕಾಯಿಲೆಯಿಂದ ಚೇತರಿಕೆ ಉಂಟಾಯಿತು.
ನಾನು ದೀಪವನ್ನು ತರಿಸಲು ಹೇಳಿದೆ. ಆದರೆ ನನ್ನ ಕೈಯಲ್ಲಿ ಆ ಎರಡು ಪವಿತ್ರ ಕೂದಲುಗಳು ಕಾಣಿಸಲಿಲ್ಲ. ಇದರಿಂದ ನಾನು ದುಃಖಿತನಾಗಿ ಬರ್ಗಾಹೆ ಆಲಿಯ ಕಡೆಗೆ ಮನಸ್ಸು ಹರಿಸಿದೆ. ಆಗ ಆನ್ಹಝ್ರತ್ ﷺ ಮತ್ತೆ ಅದೇ ರೂಪದಲ್ಲಿ ಅಗಮಿಸಿ ಹೀಗೆ ಹೇಳಿದರು:
“ಮಗನೇ! ಬುದ್ಧಿ ಮತ್ತು ವಿವೇಕದಿಂದ ನಡೆ. ಆ ಎರಡು ಕೂದಲುಗಳನ್ನು ಸುರಕ್ಷತೆಗಾಗಿ ನಿನ್ನ ತಲೆಯ ಕೆಳಗೆ ಇಡಲಾಗಿತ್ತು. ಅಲ್ಲಿಂದ ತೆಗೆದುಕೋ.”
ಚೇತರಿಸಿಕೊಂಡ ತಕ್ಷಣ ನಾನು ಅವುಗಳನ್ನು ಅಲ್ಲಿಂದ ತೆಗೆದುಕೊಂಡು, ಅತ್ಯಂತ ಗೌರವ ಮತ್ತು ತಅಝೀಮ್ನೊಂದಿಗೆ ಒಂದು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಂಡೆ.
ಇದಾದ ನಂತರ ಇದ್ದಕ್ಕಿದ್ದಂತೆ ಜ್ವರ ಕಡಿಮೆಯಾಯಿತು. ಆದರೆ ಅತ್ಯಂತ ದುರ್ಬಲತೆ ಮತ್ತು ನಿಶಕ್ತಿಯು ಉಂಟಾಯಿತು. ನನ್ನ ಬಂಧುಗಳು ನನಗೆ ಮರಣ ಸಮೀಪಿಸಿದೆ ಎಂದು ಭಾವಿಸಿ ಅಳತೊಡಗಿದರು. ನನ್ನಲ್ಲಿ ಮಾತನಾಡುವ ಶಕ್ತಿಯೂ ಇರಲಿಲ್ಲ. ನಾನು ತಲೆಯ ಸನ್ನೆಯಿಂದ ಮಾತ್ರ ಸೂಚಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಶಕ್ತಿ ಸಂಪೂರ್ಣವಾಗಿ ಮರಳಿ, ನನಗೆ ಪೂರ್ಣ ಆರೋಗ್ಯ ದೊರೆಯಿತು.
ಇದೇ ಸಂದರ್ಭದಲ್ಲಿ ಅವರು ಈ ಮಾತನ್ನೂ ಹೇಳುತ್ತಿದ್ದರು:
ಈ ಎರಡು ಪವಿತ್ರ ಕೂದಲುಗಳ ವಿಶೇಷತೆಗಳಲ್ಲಿ ಒಂದೇನೆಂದರೆ, ಅವು ಪರಸ್ಪರ ಹೆಣೆದುಕೊಂಡಂತೆ ಇರುತ್ತವೆ. ಆದರೆ ದುರೂದ್ ಶರೀಫ್ ಓದಿದಾಗ ಅವು ಒಂದಕ್ಕೊಂದು ಬೇರ್ಪಟ್ಟು ನೇರವಾಗಿ ನಿಲ್ಲುತ್ತವೆ.
ಮತ್ತೊಂದು ವಿಶೇಷತೆಯೆಂದರೆ, ಒಂದು ಬಾರಿ ತಬರ್ರುಕಾತ್ನ ಪ್ರಭಾವವನ್ನು ನಿರಾಕರಿಸುವ ಮೂವರು ವ್ಯಕ್ತಿಗಳು ಪರೀಕ್ಷೆ ಮಾಡಲು ಬಯಸಿದರು. ನಾನು ಅವರ ಈ ಅಸಭ್ಯ ಪ್ರಯತ್ನಕ್ಕೆ ಒಪ್ಪಲಿಲ್ಲ. ಆದರೆ ಚರ್ಚೆ ಬಹಳ ಸಮಯ ಮುಂದುವರಿದಾಗ, ಕೆಲವು ಬಂಧುಗಳು ಆ ಪವಿತ್ರ ಕೂದಲುಗಳನ್ನು ಸೂರ್ಯನ ಮುಂದೆ ತೆಗೆದುಕೊಂಡು ಹೋದರು.
ಅದೇ ಸಮಯದಲ್ಲಿ ಒಂದು ಮೋಡದ ತುಂಡು ಕಾಣಿಸಿಕೊಂಡಿತು. ಸೂರ್ಯನು ಬಹಳ ತೀವ್ರವಾಗಿ ಉರಿಯುತ್ತಿದ್ದನು ಮತ್ತು ಮೋಡಗಳಿರುವ ಕಾಲವೂ ಆಗಿರಲಿಲ್ಲ.
ಈ ಘಟನೆ ನೋಡಿ ನಿರಾಕರಿಸುತ್ತಿದ್ದವರಲ್ಲಿ ಒಬ್ಬನು ತೌಬಾ ಮಾಡಿದನು. ಉಳಿದವರು, “ಇದು ಕೇವಲ ಆಕಸ್ಮಿಕ ಘಟನೆ” ಎಂದರು.
ಬಂಧುಗಳು ಮತ್ತೊಮ್ಮೆ ಆ ಪವಿತ್ರ ಕೂದಲುಗಳನ್ನು ಸೂರ್ಯನ ಮುಂದೆ ತೆಗೆದುಕೊಂಡು ಹೋದರು. ಮತ್ತೆ ಅದೇ ರೀತಿಯಾಗಿ ಒಂದು ಮೋಡದ ತುಂಡು ಕಾಣಿಸಿಕೊಂಡಿತು. ಇದನ್ನು ನೋಡಿ ಎರಡನೇ ನಿರಾಕರಿಸುವವನೂ ತೌಬಾ ಮಾಡಿದನು.
ಆದರೆ ಮೂರನೆಯವನು, “ಇದು ಕೂಡ ಆಕಸ್ಮಿಕವಾಗಿಯೇ ಸಂಭವಿಸಿದೆ” ಎಂದನು.
ಇದನ್ನು ಕೇಳಿ ಮೂರನೇ ಬಾರಿಯೂ ಮೂಯೆ ಮುಬಾರಕ್ ಅನ್ನು ಸೂರ್ಯನ ಮುಂದೆ ತೆಗೆದುಕೊಂಡು ಹೋದರು. ಮೂರನೇ ಬಾರಿಯೂ ಮೋಡದ ತುಂಡು ಕಾಣಿಸಿಕೊಂಡಿತು. ಆಗ ಮೂರನೇ ನಿರಾಕರಿಸುವವನೂ ತೌಬಾ ಮಾಡಿದವರಲ್ಲಿ ಸೇರಿಕೊಂಡನು.
ಮತ್ತೊಮ್ಮೆ ಅವರು ಹೀಗೆ ಹೇಳಿದರು:
ಒಮ್ಮೆ ನಾನು ಈ ಮೂಯೆ ಮುಬಾರಕ್ ಅನ್ನು ಝಿಯಾರತ್ಗಾಗಿ ಹೊರಗೆ ತಂದೆ. ಬಹಳ ದೊಡ್ಡ ಜನಸಮೂಹ ಸೇರಿತ್ತು. ತಬರ್ರುಕ್ ಇಟ್ಟಿದ್ದ ಪೆಟ್ಟಿಗೆಯ ಬೀಗವನ್ನು ತೆರೆಯಲು ಅನೇಕ ಬಾರಿ ಪ್ರಯತ್ನಿಸಲಾಯಿತು. ಆದರೆ ಅದು ತೆರೆಯಲೇ ಇಲ್ಲ.
ನಾನು ನನ್ನ ಹೃದಯದ ಕಡೆಗೆ ಗಮನ ಹರಿಸಿದಾಗ, ಒಬ್ಬ ವ್ಯಕ್ತಿ ನಾಪಾಕ್ ಸ್ಥಿತಿಯಲ್ಲಿದ್ದಾನೆ ಎಂಬುದು ತಿಳಿಯಿತು. ಆ ವ್ಯಕ್ತಿಯ ನಾಪಾಕಿಯ ಕಾರಣದಿಂದ ಈ ನೆಮತ್ ನಮಗೆ ದೊರೆಯುತ್ತಿಲ್ಲ ಎಂಬುದು ತಿಳಿಯಿತು.
ಆ ವ್ಯಕ್ತಿಯ ದೋಷವನ್ನು ಬಹಿರಂಗಪಡಿಸದೆ, ಎಲ್ಲರಿಗೂ ಪುನಃ ಪವಿತ್ರತೆ/ತಹಾರತ್ ಮಾಡಿಕೊಳ್ಳುವಂತೆ ನಾನು ಆದೇಶಿಸಿದೆ. ಆ ನಾಪಾಕ್ ವ್ಯಕ್ತಿಯೂ ಜನಸಮೂಹದಿಂದ ಹೊರಟು ಹೋದನು. ಅದೇ ಸಮಯದಲ್ಲಿ ಬೀಗವು ಬಹಳ ಸುಲಭವಾಗಿ ತೆರೆದುಕೊಂಡಿತು ಮತ್ತು ಎಲ್ಲರೂ ಮೂಯೆ ಮುಬಾರಕ್ನ ಝಿಯಾರತ್ ಮಾಡಿದರು.
ಕೊನೆಯಲ್ಲಿ, ಹಝ್ರತ್ ವಾಲಿದ್-ಎ-ಮಾಜಿದ್ ಅವರು ತಮ್ಮ ಅಂತಿಮ ಜೀವನದಲ್ಲಿ ತಬರ್ರುಕಾತ್ಗಳನ್ನು ಹಂಚುವ ಸಂದರ್ಭದಲ್ಲಿ, ಈ ಎರಡು ಪವಿತ್ರ ಕೂದಲುಗಳಲ್ಲಿ ಒಂದನ್ನು ಕಾತಿಬುಲ್-ಹುರುಫ್ (ನನಗೆ)ಅವರಿಗೆ ದಯಪಾಲಿಸಿದರು. ಈ ನೆಮತ್ಗಾಗಿ ಪರ್ವರ್ದಿಗಾರ್-ಎ-ಆಲಂನಿಗೆ ಎಲ್ಲಾ ಸ್ತುತಿ ಮತ್ತು ಕೃತಜ್ಞತೆಗಳು.
(ಸಾನಿ ಬಗ್ದಾದ್ @ ಮುಕ್ಕುಂದಾ ಶರೀಫ್)