15/10/2023
https://m.facebook.com/story.php?story_fbid=647757474159157&id=100067747295172&mibextid=9R9pXO
#ರಾವ_ಬಹದ್ದೂರ್ #ಎಲೆ_ಮಲ್ಲಪ್ಪಶೆಟ್ಟರು
==========================
ಬೆಂಗಳೂರು ನಗರಕ್ಕೆ ಕಾವೇರಿ ನೀರು ಸಿಗುವ ಮುನ್ನ ಕುಡಿಯುವ ನೀರಿನ ಮೂಲಗಳಾಗಿ ಇದ್ದದ್ದು ಒಂದು ತಿಪ್ಪಗೊಂಡನಹಳ್ಳಿ ಕೆರೆ, ಮತ್ತೊಂದು ಹೆಸರಘಟ್ಟ ಕೆರೆ.
ಬೆಳೆಯುತ್ತಿದ್ದ ಬೆಂಗಳೂರಿಗೆ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾದಾಗ ಹೆಬ್ಬಾಳ-ನಾಗವಾರ ಕಣಿವೆಯಲ್ಲಿ ಬರುವ ಆವಲಹಳ್ಳಿ-ಮೇಡಹಳ್ಳಿ- ಕುರುಡುಸೊಣ್ಣೇನಹಳ್ಳಿಗಳ ನಡುವಿನ ಪ್ರದೇಶದಲ್ಲಿ
(ಹಿಂದೆ ಇದು ಗಂಗರ ಕಾಲದಲ್ಲಿ ಇದ್ದ ಒಂದು ಅಗ್ರಹಾರ - ಹೆಸರು 'ಎರೆಯಪ್ಪಮಂಗಲ') ಮಹಾದಾನಿ ಎಲೆಮಲ್ಲಪ್ಪಶೆಟ್ಟರು ಕೆರೆಯೊಂದನ್ನು ಕಟ್ಟಿಸುತ್ತಾರೆ, ಈಗಲೂ ಅದು ಸುಭದ್ರವಾಗಿಯೇ ಇದೆ.
ಕೆರೆ ಕಟ್ಟಿಸುವ ಸಮಯದಲ್ಲಿ ಅದರ ಕೂಲಿ ಕಾರ್ಮಿಕಳಾಗಿ ಬಂದಿದ್ದ ಗರ್ಭಿಣಿ ಹೆಂಗಸೊಬ್ಬಳಿಗೆ ಹೆರಿಗೆ ನೋವು ಬಂದು , ಹೆರಿಗೆ ಕಷ್ಟವಾಗಿ ಆಕೆ ಮರಣಿಸಿದ ಪ್ರಸಂಗವು ಶೆಟ್ಟರಿಗೆ ಬಹಳ ನೋವುಂಟುಮಾಡುತ್ತದೆ, ಅದರ ಪರಿಣಾಮವೇ ಅವರು ಸೆನೋಟಾಪ್ ರಸ್ತೆ (ಈಗಿನ ನೃಪತುಂಗ ರಸ್ತೆ)ಯ ಈಗಿನ ಐಜಿಪಿ ಆಫೀಸ್ ಇರುವ ಜಾಗದಲ್ಲಿ ದೊಡ್ಡದೊಂದು ಹೆರಿಗೆ ಆಸ್ಪತ್ರೆ ಕಟ್ಟಿಸುವಂತಾಗಿದ್ದು.
ಮುಂದೆ ವಾಣಿವಿಲಾಸ್ ಆಸ್ಪತ್ರೆ ಕಟ್ಟುವ ಯೋಜನೆ ಪ್ರಾರಂಭವಾದಾಗ ಶೆಟ್ಟರು ಅದಕ್ಕೂ ಧನಸಹಾಯ ಮಾಡುತ್ತಾರೆ ಹಳೇ ಹೆರಿಗೆ ಆಸ್ಪತ್ರೆ ಅದರಲ್ಲಿ ವಿಲೀನವಾಗುತ್ತದೆ.
ಎಲೆಮಲ್ಲಪ್ಪ ಶೆಟ್ಟರ ಕುರಿತು ನಾನು ಈಗಾಗಲೇ ಹಲವು ಸಲ ಈ ವೇದಿಕೆಯಲ್ಲಿ ಬರೆದಿದ್ದೇನೆ. ಈ ದಿನ ಮಿತ್ರರಾದ ಶ್ರೀ Mallikarjuna D G ರವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುವಾಗ ಅಚಾನಕ್ಕಾಗಿ ಶೆಟ್ಟರ ಪ್ರಸ್ತಾಪ ಬಂತು , ಶೆಟ್ಟರ ಕುಟುಂಬವು ಇವರಿಗೂ ಬಂಧುಗಳೆಂಬ ವಿಷಯ ತಿಳಿಯಿತು, ಮಲ್ಲಿಕಾರ್ಜುನರ ಮಾವನ ಸೋದರಿ ಶ್ರೀಮತಿ ಜಯಾ ರಾಜಶೇಖರ್ ಶೆಟ್ಟರ ಕುಟುಂಬದ ಸೊಸೆಯೆಂದು ತಿಳಿದುಬಂತು, ಅವರು ಶೆಟ್ಟರ ಜೀವನ ಚರಿತ್ರೆಯನ್ನೂ ಬರೆದಿದ್ದಾರಂತೆ. ಇದೇ ವೇಳೆ ಮಲ್ಲಿಕಾರ್ಜುನರು ಶೆಟ್ಟರಿಗೆ ಸಂಬಂಧಿಸಿದ ಎರಡು ಬರಹಗಳನ್ನು ನನಗೆ ವಾಟ್ಸಪ್ ಮಾಡಿದರು, ಅವನ್ನು ನಿಮಗಾಗಿ ಇಲ್ಲಿ ಕೊಟ್ಟಿದ್ದೇನೆ:
1.ಇಷ್ಟು ವರ್ಷ ಬದುಕಿದ್ದು ಸಾರ್ಥಕವಾಯ್ತು
=============================
ಶ್ರೀಮತಿ ಜಿ.ವಿ.ಜಯಾ ರಾಜಶೇಖರ್ ಅವರು ಬರೆದು, ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ವೀರಶೈವ ಅಧ್ಯಯನ ಸಂಸ್ಥೆ ಪ್ರಕಟಿಸಿದ (೧೯೮೭) ‘ಎಲೆ ಮಲ್ಲಪ್ಪ ಶೆಟ್ಟರು’ ಎಂಬ ಜೀವನಚರಿತ್ರೆ ಓದಿದ ಎಸ್.ಜಿ.ನರಸಿಂಹಯ್ಯನವರು ಗ್ರಂಥಕರ್ತೃ ವನ್ನು ನೋಡಿ ತಮ್ಮ ಮೆಚ್ಚುಗೆ ಹೇಳಲು ಅಪೇಕ್ಷಿಸಿದರು. ತಮ್ಮ ಅಪೇಕ್ಷೆಯನ್ನು ಎಸ್.ಜಿ.ಬಸವಯ್ಯ ಎಂಬುವರಿಗೆ ಅವರು ತಿಳಿಸಿದರು. ಬಸವಯ್ಯನವರು ಲೇಖಕಿಯ ಕುಟುಂಬವರ್ಗಕ್ಕೆ ಪರಿಚಿತರು. ಆದ್ದರಿಂದ ಅವರು ಲೇಖಕಿಗೆ ಪೋನ್ ಮಾಡಿ, “ನಿಮ್ಮ ‘ಎಲೆ ಮಲ್ಲಪ್ಪ ಶೆಟ್ಟರು’ ಪುಸ್ತಕ ಓದಿದ ಎಸ್.ಜಿ.ನರಸಿಂಹಯ್ಯ ಎಂಬ ವಯೋವೃದ್ಧರು ನಿಮ್ಮನ್ನು ನೋಡಬೇಕೆಂದು ಬಯಸುತ್ತಿದ್ದಾರೆ. ಅವರನ್ನು ನಿಮ್ಮ ಮನೆಗೆ ಕರೆತರಲೇ, ನಿಮಗೆ ಯಾವಾಗ ಅನುಕೂಲವಾಗುತ್ತದೆ, ತಿಳಿಸಿ” ಎಂದು ಕೇಳಿದರು. ನರಸಿಂಹಯ್ಯನವರ ವಯಸ್ಸು ೯೦ ಎಂದು ಕೇಳಿ ತಿಳಿದ ಮೇಲೆ ಲೇಖಕಿ, “ಆ ಹಿರಿಯರಿಗೆ ಶ್ರಮ ಬೇಡ, ಅವರ ಅಡ್ರೆಸ್ ಕೊಡಿ, ನಾನೇ ಒಂದು ದಿನ ಅವರ ಮನೆಗೆ ಹೋಗಿ ದರ್ಶನಮಾಡುತ್ತೇನೆ” ಎಂದು ಉತ್ತರಿಸಿದರು. ‘ಆಗಲಿ’ ಎಂದು ಬಸವಯ್ಯನವರು ಮತ್ತೆ ೨ ದಿನಗಳ ಅನಂತರ ಪೋನ್ ಮಾಡಿ, “ಅವರು ನಿಮ್ಮ ಮನೆಗೇ ಬಂದು ನಿಮ್ಮನ್ನು ನೋಡಬೇಕಂತೆ, ಅನಂತರ ನೀವು ಅವರ ಮನೆಗೆ ಹೋಗಬಹುದು” ಎಂದು ತಿಳಿಸಿದರು. “ಆ ವಯೋವೃದ್ಧರಿಗೆ ಶ್ರಮವಾಗುವುದು ಬೇಡ ಎನ್ನುವ ಕಾರಣಕ್ಕಾಗಿ ನಾನೇ ಬರುತ್ತೇನೆ ಎಂದಿದ್ದೆ; ಅವರು ಅಷ್ಟು ಬಯಸಿ ಬರುವುದಾದರೆ ತುಂಬ ಸಂತೋಷ” ಎಂಬುದಾಗಿ ಜಯಾ ಹೇಳಿದರು.ಒಂದು ದಿನ ಗೊತ್ತುಮಾಡಿ ಎಸ್.ಜಿ.ಬಸವಯ್ಯನವರು ಎಸ್.ಜಿ.ನರಸಿಂಹಯ್ಯನವರನ್ನು ತಮ್ಮ ಕಾರಿನಲ್ಲಿ ಜಯಾ ರಾಜಶೇಖರ್ ಅವರ ಮನೆಗೆ ಕರೆತಂದರು. ತೆಳ್ಳಗೆ ಎತ್ತರಕ್ಕೆ ಇದ್ದ ಗೌರವರ್ಣದ ವ್ಯಕ್ತಿ ನರಸಿಂಹಯ್ಯನವರು ಲೇಖಕಿ ಒಳಗಿನಿಂದ ಹೊರಗೆ ಬರುವ ವರೆಗೆ ಕಾಡು ಕುರ್ಚಿಯಲ್ಲಿ ಕುಳಿತಿದ್ದರು. ಜಯಾ ಅವರು ಹೊರಕ್ಕೆ ಬಂದ ಕೂಡಲೇ, ಕುಳಿತಿದ್ದವರು ಮೇಲೆದ್ದರು. ‘ಕುಳಿತುಕೊಳ್ಳಿ’ ಎಂದು ಹೇಳಿದರೂ ಕೇಳದೆ, ತಾವು ತಂದಿದ್ದ ಬಾಳೆಯ ಹಣ್ಣಿನ ಚಿಪ್ಪು ಮತ್ತು ಹೂವನ್ನು ಮಮತೆಯಿಂದ ಅವರ ಕೈಯಲ್ಲಿಟ್ಟರು. ಬಳಿಕ ಅವರ ಎರಡೂ ಕೈಗಳನ್ನು ಹಿಡಿದು ತಮ್ಮ ಕಣ್ಣಿಗೆ ಒತ್ತಿಕೊಂಡರು. “ಎಂಥಾ ಪುಣ್ಯಾತ್ಮನ ಚರಿತ್ರೆ ಬರೆದಿದ್ದೀಯಾ ತಾಯೀ; ಅದನ್ನೋದಿ ತುಂಬ ಸಂತೋಷವಾಯ್ತು. ನಾನು ಇಷ್ಟು ವರ್ಷ ಬದುಕಿದ್ದು ಸಾರ್ಥಕವಾಯ್ತು” ಎಂದು ಹೇಳುತ್ತ ಅಳತೊಡಗಿದರು.
ಸ್ವಲ್ಪ ಹೊತ್ತಾದ ಮೇಲೆ ತಮ್ಮನ್ನು ತಾವು ನಿಯಂತ್ರಿಸಿಕೊಂಡರು. ಮೈಗೆ ಆಗುವುದಿಲ್ಲವೆಂದು ಹೇಳಿ ಹಾಲು ಮಾತ್ರ ಸೇವಿಸಿದರು. ಅವರು ಎಲೆ ಮಲ್ಲಪ್ಪ ಶೆಟ್ಟರಿಂದ ಜೀರ್ಣೋದ್ಧಾರವಾದ ಕಾಡುಮಲ್ಲೇಶ್ವರ ದೇವಸ್ಥಾನದ ಧರ್ಮದರ್ಶಿಗಳಾಗಿದ್ದವರು. ಸ್ವಲ್ಪ ಹೊತ್ತು ಮಾತಾಡಿ ಹೊರಡುವಾಗ, “ತಾಯೀ, ನಮ್ಮ ಮನೆಗೆ ನನ್ನ ಜೀವ ಇರುವಾಗಲೇ ಒಂದು ಸಲ ಬನ್ನಿ, ತಡಮಾಡಬೇಡಿ. ಹಣ್ಣಾಗಿದ್ದೇನೆ. ಇನ್ನೆಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ದಯೆಯಿಟ್ಟು ಬೇಗ ಬನ್ನಿ” ಎಂಬುದಾಗಿ ಬೇಡಿಕೊಂಡರು. ಖಂಡಿತ ಬರುವುದಾಗಿ ಲೇಖಕಿ ಸಮಾಧಾನ ಹೇಳಿದರು. ಮಲ್ಲೇಶ್ವರದ ತೆಂಗಿನ ಮರದ ರಸ್ತೆಯಲ್ಲಿರುವ ಎಸ್.ಜಿ.ನರಸಿಂಹಯ್ಯನವರ ಮನೆಗೆ ಲೇಖಕಿ ಜಯಾ ರಾಜಶೇಖರ್ ವಿಳಾಸ ಹುಡುಕಿಕೊಂಡು ಒಂದು ದಿನ ಹೋದರು. ಅವರನ್ನು ಕಂಡ ಕೂಡಲೇ ನರಸಿಂಹಯ್ಯನವರಲ್ಲಿ ಸಂತೋಷ ಉಕ್ಕಿ ಕಣ್ಣೀರು ಧಾರೆಯಾಗಿ ಹರಿಯಿತು. “ನಿಮ್ಮಂತಹ ಹೆಣ್ಣುಮಗಳು ನನ್ನ ಮನೆಗೆ ಬಂದು ಈ ನೆಲ ಪಾವನ ಮಾಡಿದಿರಿ. ಲಕ್ಷ್ಮಿ ಸರಸ್ವತಿ ಪಾರ್ವತಿ ಮೂರೂ ಜನ ನನ್ನ ಮನೆಗೆ ಬಂದ ಹಾಗಾಯಿತು. ಇದೆಲ್ಲಾ ನಾನು ಶಿವಪಂಚಾಕ್ಷರಿ ಈಗ ಓದುತ್ತಿದ್ದುದರ ಫಲ” ಎಂದು ಹೇಳಿ, ಅಲ್ಲೇ ಇಟ್ಟುಕೊಂಡಿದ್ದ ಆ ಪುಸ್ತಕ ತೋರಿಸಿದರು.
ಲೇಖಕಿ ವಿನಯದಿಂದ ನರಸಿಂಹಯ್ಯನವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಹಿಂದಿರುಗಿದರು. ಬಳಿಕ ಕೆಲವೇ ದಿನಗಳಲ್ಲಿ ನರಸಿಂಹಯ್ಯನವರು ಶಿವಸನ್ನಿಧಿ ಸೇರಿದರು.
ಕೃಪೆ:
ಅಂತಃಕರಣ (ಬಿ.ಎಸ್.ಕೇಶವರಾವ್)
ಉದಾರಚರಿತರು ಉದಾತ್ತಪ್ರಸಂಗಗಳು (ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ)
2. ‘ಅದು ಹೋಗಬೇಕಾದ ಜಾಗಕ್ಕೆ ಹೋಯಿತು’
===============================
ಪರೋಪಕಾರಿಗಳಾಗಿದ್ದ ಬೆಂಗಳೂರು ಎಲೆ ಮಲ್ಲಪ್ಪ ಶೆಟ್ಟರು ಮಹಾ ಶ್ರೀಮಂತರು ,ಆದರೆ ಕೊನೆಗಾಲಕ್ಕೆ ಕಷ್ಟಗಳಿಗೆ ಸಿಕ್ಕಿದರು, ಬಡತನ ಆಡಿಸಿತು. ಇವರ ಕೊಡುಗೈ ದಾನದ ದುರುಪಯೋಗ ತಪ್ಪಿಸಲು ಮನೆಯವರು ಶೆಟ್ಟರು ಹೆಚ್ಚಾಗಿ ಕಾಲ ಕಳೆಯುತ್ತಿದ್ದ ಮಹಡಿಯ ಮೇಲಕ್ಕೆ ಅಪರಿಚಿತರನ್ನೆಲ್ಲಾ ಬಿಡದ ಹಾಗೆ ಕಾವಲು ಹಾಕಿದ್ದರು. ಒಂದು ದಿನ ಶೆಟ್ಟರ ಆರೋಗ್ಯ ಸಾಕಷ್ಟು ಚೆನ್ನಾಗಿರಲಿಲ್ಲ. ಮಹಡಿಯ ಮೇಲೆ ತಮ್ಮ ಕೋಣೆಯಲ್ಲಿ ಮಲಗಿ ವಿಶ್ರಮಿಸುತ್ತಿದ್ದರು.
ಒಬ್ಬ ಬ್ರಾಹ್ಮಣ ಗೃಹಸ್ಥನು ಕಾವಲುಗಾರನ ಕಣ್ಣು ತಪ್ಪಿಸಿ ಹೇಗೋ ನುಸುಳಿಕೊಂಡು ಶೆಟ್ಟರ ಮಹಡಿ ಕೋಣೆಗೆ ಬಂದನು. “ಯಾರಪ್ಪ ನೀನು? ಯಾಕೆ ಬಂದೆ?” ಎಂದು ಶೆಟ್ತರು ಪ್ರಶ್ನಿಸಿದರು. ಆತನು ಅಳುತ್ತಾ ಮಾತ್ನಾಡದೆ ಅವರ ಕಾಲು ಹಿಡಿದುಕೊಂಡನು. “ಬೇಡಪ್ಪ, ಬೇಡ.. ಕಾಲು ಹಿಡಿಯಬೇಡ, ಕೂತುಕೋ. ಏನು ವಿಚಾರ ಹೇಳು?” ಎಂದು ಪ್ರಶ್ನಿಸಿ ತಮ್ಮ ಮಂಚದ ಬದಿಗೆ ಆತನನ್ನು ಕೂರಿಸಿಕೊಂಡರು. “ಏನು ಹೇಳಲಿ ಶೆಟ್ಟರೆ, ಮಾತನಾಡಲು ನನಗೆ ಬಾಯಿ ಬರುತ್ತಿಲ್ಲ, ನಿಮ್ಮ ಸ್ಥಿತಿ ತಿಳಿದಿದ್ದೂ ವಿಧಿಯಿಲ್ಲದೆ ಬಂದಿದ್ದೇನೆ” ಎಂದು ಅಲವತ್ತುಕೊಂಡನು. “ವಿಷಯವೇನೆಂದು ಹೇಳಲೇ ಇಲ್ಲವಲ್ಲ?” ಎಂದರು ಶೆಟ್ತರು.
ಬ್ರಾಹ್ಮಣ ಗೃಹಸ್ಥ ಅಳುತ್ತಾ ಹೇಳಿದನು, “ನಾನು ಬಡವ, ಹಿಂದೆ ಎಷ್ಟೋ ಸಲ ತಾವು ನನಗೆ ಸಹಾಯ ಮಾಡಿದ್ದೀರಿ. ತಮಗೆ ನನ್ನಂತವರು ಎಷ್ಟೋ ಜನ, ತಮಗೆ ಮರೆತು ಹೋಗಿರುತ್ತದೆ. ತಾವು ಕೊಡುಗೈ ದೊರೆ, ತಮಗೆ ತೊಂದರೆಯಿದ್ದೂ ಬೇಡುವ ಅನಿವಾರ್ಯ ನನಗೆ ಬಂದಿದೆ. ನನ್ನ ಮಗಳ ಮದುವೆ ನಿಶ್ಚಯವಾಗಿದೆ. ಕಷ್ಟಪಟ್ಟು ಹೊಂದಿಸಿರುವ್ ಸಂಬಂಧ, ಹಣಾದ ಕೊರತೆಯಿಂದ ನಿಂತುಹೋಗುವ ಭಯ ಬಂದಿದೆ. ತಾವು ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು”
ಮಲ್ಲಪ್ಪ ಶೆಟ್ಟರು ಚಿಂತಾಕ್ರಾಂತರಾದರು. “ನನ್ನಲ್ಲಿ ಕೊಡ್ಲು ಏನೂ ಉಳಿದಿಲ್ಲವಲ್ಲಪ್ಪ” ಎಂದರು. ‘ಕಷ್ಟ’ಎಂದು ಬೇಡಲು ಬಂದವರಿಗೆ ಏನೂ ಕೊಡಲಾಗದಂತೆ ಕೈ ಕಟ್ಟಿ ಹಾಕಿದೆಯಲ್ಲ ಶಿವನೇ ಎಂದು ಕೊರಗಿದರು. ಹೀಗೆನ್ನುತ್ತಾ ತಮ್ಮ ಕೈಯೆರಡಾನ್ನೂ ತಮಗೆ ತಿಳಿಯದಂತೆ ಎದೆಯ ಮೇಲಿಟ್ಟುಕೊಂಡರು. ಅವರ ಕೈಗಳಿಗೆ ಶಿವಪೂಜೆಯ ಕರಡಿಗೆ ಸೋಕಿತು. ಅವರಿಗೆ ಕೂಡಲೇ ಮಿಂಚು ಹೊಳೆದಂತಾಯಿತು!
ತತ್ ಕ್ಷಣ ಎದ್ದು ಕುಳಿತರು. “ಇಲ್ಲೇ ಕುಳಿತಿರಿ, ಈಗಲೇ ಬಂದು ಬಿಡುತ್ತೇನೆ” ಎಂದು ಹೇಳಿ ಬೇಗ ಬೇಗ ಮೆಟ್ಟಿಲಿಳಿದು ಬಚ್ಚಲುಮನೆಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡರು. ದೇವರ ಮನೆಗೆ ಹೋದರು. ಅಲ್ಲಿ ಮಡಿಯಾಗಿದ್ದ ಒಂದು ಕೆಂಪು ವಸ್ತ್ರ ತೆಗೆದುಕೊಂಡರು. ತಮ್ಮ ಬಂಗಾರದ ಕರಡಿಗೆಯಲ್ಲಿದ್ದ ಲಿಂಗವನ್ನು ಆ ವಸ್ತ್ರದಲ್ಲಿ ಸುತ್ತಿ ಕಟ್ಟಿ ಕೊರಳಿಗೆ ಕಟ್ಟಿಕೊಂಡರು. ಬಂಗಾರದ ಕರಡಿಗೆ ತೆಗೆದುಕೊಂಡು ಪುನಃ ಮಹಡಿ ಏರಿದರು.
ಆ ಬಂಗಾರದ ಕರಡಿಗೆ ಆ ಕಾಲದಲ್ಲಿ ಬಳಕೆಯಲ್ಲಿದ್ದ ತೊಟ್ಟಿಲು ಆಕಾರದಲ್ಲಿದ್ದು, ಸುಮಾರು ಒಂದೂವರೆ ಸೇರು ತೂಕ ತೂಗುತ್ತಿತ್ತು. ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿ ಬ್ರಾಹ್ಮಣ ಗೃಹಸ್ಥನ ಕೈಯ್ಯಲ್ಲಿಟ್ಟು ಹೇಳಿದರು, “ಅಪ್ಪ ಯಾರಿಗೂ ತೋರಿಸದೆ ತೆಗೆದುಕೊಂಡು ಹೋಗು, ಯಾರಾದರೂ ನೋಡಿದರೆ ಕಿತ್ತುಕೊಂಡಾರು. ಜೋಪಾನ, ಬೇಗ ಹೊರಟುಬಿಡು. ಮಗಳ ಮದುವೆ ಚೆನ್ನಾಗಿ ನಡೆಯಲಿ, ದಂಪತಿಗಳು ನೂರ್ಕಾಲ ಚೆನ್ನಾಗಿರಲಿ”
ಮುಂದೆ ಕೆಲ ದಿನಗಳು ಕರಡಿಗೆ ಕಾಣೆಯಾದ ವಿಷಯ ಮನೆಯವರಿಗೆ ತಿಳಿಯದ ಹಾಗೆ ಸದಾ ವಲ್ಲಿಯನ್ನು ಹೊದ್ದು ಓಡಾಡಿದರು. 15 ದಿನಗಳ ಮೇಲೆ ವಸ್ತ್ರದ ಲಿಂಗ ಕಟ್ಟಿಕೊಂಡಿದ್ದದ್ದು ಮಗಳ ಕಣ್ಣಿಗೆ ಬಿತ್ತು. “ಇದೇಕೆ ಅಪ್ಪಾಜಿ, ವಸ್ತ್ರದಲ್ಲಿ ಲಿಂಗ ಕಟ್ಟಿಕೊಂಡಿದ್ದೀರಿ, ಕರಡಿಗೆ ಎಲ್ಲಿ?” ಎಂದು ಕೇಳಿದಳು. ಶೆಟ್ಟರು ನಗುತ್ತಾ “ಅದು ಹೋಗಬೇಕಾದ ಜಾಗಕ್ಕೆ ಹೋಯಿತು” ಎಂದರು.
ಆಧಾರ: ಜಯಾ ರಾಜಶೇಖರ್ ಬರೆದಿರುವ ‘ಎಲೆ ಮಲ್ಲಪ್ಪ ಶೆಟ್ತರು’ ಪುಸ್ತಕದ ಪುಟ 48-522.
ಆಕರ: ಸುದರ್ಶನ್ ರೆಡ್ಡಿ ಡಿ.ಎನ್. 💐