ಬಾಲಕರ ಶ್ರೀಶಾರದಾ ಮಹೋತ್ಸವ ಟ್ರಸ್ಟ್ (ರಿ )
ನಡೆದು ಬಂದ ಹಾದಿ ಒಂದು ಹಿನ್ನೋಟ
1967ನೇ ಇಸವಿ ನವರಾತ್ರಿಯ ಪರ್ವಕಾಲದಲ್ಲಿ ಉದಯವಾದ ನಮ್ಮ ಸಂಸ್ಥೆಯು ಪ್ರಾರಂಭದಲ್ಲಿ ಉರ್ವ ಚಿಲಿಂಬಿಯ "ಗುರುಕೃಪಾ" ವಠಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಭಿಮನ್ಯು ಶಾಖೆಯ ಮೂಲಕ ಅಸ್ತಿತಕ್ಕೆ ಬಂತು. ಶಾಖೆಗೆ ಬರುವ ಹಲವು ಕಿರಿಯ ಮಕ್ಕಳು ಸೇರಿಕೊಂಡು ಶ್ರೀ ಶಾರದಾಮಾತೆಯನ್ನು ಆರಾಧಿಸಿಕೊಂಡು ಬರುವ ದಿವ್ಯ ಇರಾದೆಯೊಂದಿಗೆ ಆರಂಭವಾದ ಈ ಸಂಸ್ಥೆ ಗುರುಕೃಪಾ ಕಂಪೌಂಡಿನ ಹಟ್ಟಿಯಲ್ಲಿ ಜನ್ಮ ತಾಳಿತು. ಇದು
ಆಗಿನ ಮಕ್ಕಳಲ್ಲಿ ಹುದುಗಿರುವ ಶ್ರದ್ಧಾ ಭಕ್ತಿಗೆ ಸಾಕ್ಷಿಯಾಗಿದೆ. ಆರಂಭದಲ್ಲಿ ಶ್ರೀ ಶಾರದಾ ಮಾತೆಯ ಪೊಟೋವನ್ನಿಟ್ಟು ಪೂಜಾ ಕೈಂಕರ್ಯವನ್ನು ಮಾಡಿಕೊಂಡು ಆರಾಧಿಸಿದ ಆ ಕಿರಿಯ ಮಕ್ಕಳಲ್ಲಿ ಭಕ್ತಿಯನ್ನು ಹುರಿದುಂಬಿಸಲಾಯಿತು. ದೇವರ ನಾಮಗಳ ಪಾರಾಯಣ, ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯೆಯ ಅಧಿನಾಯಕಿ ಶಾರದಾ ಮಾತೆಯನ್ನು ಆರಾಧಿಸಲಾರಂಭಿಸಿದರು. ಚಿಕ್ಕ ಮಕ್ಕಳ ಈ ಶ್ರದ್ಧಾಭಕ್ತಿ ಬೆನ್ನೆಲುಬಾಗಿ ನಿಂತವರು ಸ್ಥಳೀಯ
ಹಿರಿಯರು, ಮಕ್ಕಳು ಸರಿಯಾದ ದಾರಿಯಲ್ಲಿಮುನ್ನಡೆಯಲು ಪ್ರೇರಕ ಶಕ್ತಿಯಾದರು.ಹಿರಿಯರ ನಿರಂತರ ಪ್ರೋತ್ಸಾಹ, ಬೆಂಬಲದೊಂದಿಗೆ ಚಿಲಿಂಬಿಯಲ್ಲಿ ಶ್ರೀ ಶಾರದಾ ಮಾತೆಯ ದಿವ್ಯಮೂರ್ತಿಯನ್ನು ಪ್ರತಿಷ್ಠಾಪಿಸಿ ಶಾರದಾ ದೇವಿಯ ಆರಾಧನೆಯನ್ನು ನವರಾತ್ರಿಯ ವೇಳೆಯಲ್ಲಿ ಹಮ್ಮಿಕೊಳ್ಳಲಾಯಿತು. ಹಿರಿಯರ ಸಲಹೆಯಂತೆ ಚಿಕ್ಕ ಮಕ್ಕಳು ಪ್ರಾರಂಭಿಸಿದ ಶಾರದಾ ದೇವಿಯಆರಾಧನೆಯನ್ನು "ಬಾಲಕರ ಶಾರದೆ" ಎಂದು ಹೆಸರಿಸಲಾಯಿತು. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು, "ಬಾಲಕರ ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಸಮಿತಿ"ಯನ್ನು ರಚಿಸಲಾಯಿತು. ನೂರಾರು ಹಿರಿಯ ಕಿರಿಯ ಸದಸ್ಯರನ್ನು ಹೊಂದಿದ ಈ ಸಮಿತಿ ಮುಂದಕ್ಕೆ ಒಂದು ಶಕ್ತಿಯಾಗಿ ಬೆಳೆದು ನಿಂತು ಒಂದು ಸಂಸ್ಥೆಯಾಗಿ ರೂಪುಗೊಂಡು, ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಗವದ್ಧಕ್ತರಲ್ಲಿ ವಿದ್ಯೆ ಶ್ರದ್ಧಾಭಕ್ತಿ ಬೆಳೆಸುವಲ್ಲಿ ಯಶಸ್ಸು ಪಡೆದಿದೆ ಎಂದು ಹೇಳಿದರೆ ತಪ್ಪಾಗಲಾರದು.
ಶ್ರೀ ಶಾರದಾ ಮಾತೆಯನ್ನು ನಿತ್ಯ ಪೂಜಿಸಿ ಆರಾಧಿಸಬೇಕೆಂಬ ಉದ್ದೇಶದಿಂದ 1996ರ ಇಸವಿಯಲ್ಲಿ ಹಿರಿಯರ ನೆರವಿನಿಂದ ಉರ್ವಚಿಲಿಂಬಿಯಲ್ಲಿ ಶ್ರೀ ಶಾರದಾ ದೇವಿಯ ಮಂದಿರವನ್ನು ನಿರ್ಮಿಸಿ “ಶಾರದಾ ನಿಕೇತನ" ಎಂದು ಹೆಸರಿಸಲಾಯಿತು. ನಂತರದ ದಿನಗಳಲ್ಲಿ " ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಟ್ರಸ್ಟ"ನ್ನುರಚಿಸಿ ಮಹಿಳೆಯರ ಕೌಶಲ್ಯ ಶಕ್ತಿಯನ್ನು, ಸಂಘಟನಾ ಶಕ್ತಿಯನ್ನು ಪ್ರೇರೇಷಿಸಲು "ಶ್ರೀ ಶಾರದಾ ಮಹಿಳಾ ಮಂಡಳಿ" ಯನ್ನು ಕೂಡ ಆರಂಭಿಸಲಾಯಿತು.ಹಿರಿಯರ "ಸಲಹಾ ಸಮಿತಿ" ಯನ್ನು ರಚಿಸಲಾಯಿತು. ಸಮಿತಿಯಿಂದ ನಮ್ಮ ಊರಿಗೆ ಅನುಕೂಲವಾಗಲೆಂದು ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಯಿತು. ಪುಟ್ಟಮಕ್ಕಳಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸ್ವಂತ ಕಟ್ಟಡದಲ್ಲಿ "ಶ್ರೀ ಶಾರದಾ ವಿದ್ಯಾನಿಕೇತನ ನರ್ಸರಿ ಶಾಲೆ"ಯನ್ನು ಆರಂಭಿಸಲಾಯಿತು. ನಮ್ಮ ಇಂದಿನ ಪೀಳಿಗೆಯವರಿಗೆ ಧಾರ್ಮಿಕ ವಿಚಾರದಲ್ಲಿ ಸಂಸ್ಕೃತಿಯ ಅರಿವು ಮೂಡಿಸಲು ಭಜನಾ ಕಾರ್ಯಕ್ರಮ, ಲಲಿತಾ ಸಹಸ್ರನಾಮ, ಪಾರಾಯಣ, ಭರತನಾಟ್ಯ, ಸಂಗೀತ ತರಬೇತಿ ನೀಡಿ ಮಕ್ಕಳನ್ನು ಯೋಗ್ಯ ನಾಗರಿಕರನ್ನಾಗಿ ನಿರ್ಮಿಸುವ ಗುರುತರ ಹೊಣೆಗಾರಿಕೆಯನ್ನು ಹೊಂದಿದ್ದೇವೆ. ಇದಲ್ಲದೆ ಆಸಕ್ತ ಮಕ್ಕಳಿಗೆ ಸದ್ರಿ ನಿಲಯದಲ್ಲಿ ಡಾನ್ಸ್ ತರಬೇತಿ, ಚೆಸ್ ತರಬೇತಿ, ಚಿತ್ರಕಲಾಸ್ಪರ್ಧೆ ಮತ್ತು ಶಿಬಿರ , ಛದ್ಮವೇಷ ಕಲಾಶಿಬಿರ,ಬಡ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಬಾಲಪ್ರತಿಭಾ ಪುರಸ್ಕಾರ, ಸ್ಕ್ಯಾಲರ್ಶಿಪ್ ವಿತರಣೆ, ಪರಿಸರದ ಪರಿಸರದ ಜಾಗ್ರತಿಗಾಗಿ ಸ್ವಚ್ಛತಾ ಅಭಿಯಾನ ಮತ್ತು ವನಮಹೋತ್ಸವ ಕಾರ್ಯಕ್ರಮ ನಿರಂತರವಾಗಿ ಮಾಡುತಿದ್ದೇವೆ.
ಅದಲ್ಲದೆ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ, ಉಚಿತ ವೈದ್ಯಕೀಯ ಮತ್ತು ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ, ಉಚಿತ ಕೋವಿಡ್ ವ್ಯಾಕ್ಸಿನೇಷನ್ ಶಿಬಿರ, ಮಹಿಳೆಯರಿಗಾಗಿ ಯೋಗ ಕಾರ್ಯಾಗಾರ, ಸಬಲೀಕರಣ ಮತ್ತು ತರಬೇತಿ ಶಿಬಿರ, ಜನಸಂಪರ್ಕ ಅಭಿಯಾನದ ಮೂಲಕ ಕಸದಿಂದ ರಸ ಶಿಬಿರ, ಸ್ವಾವಲಂಬಿಗಳಾಗಲು ಉಚಿತ ಲಘು ಕೌಶಲ್ಯ ಆಧಾರಿತ ಕ್ಯಾಂಡಲ್ ತಯಾರಿಕೆ ,ಸೋಪ್ ತಯಾರಿಕೆ, ಕೃತಕ ಆಭರಣ ತಯಾರಿಕೆ, ತುಳುನಾಡ ಸಂಸ್ಕ್ರತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮವನ್ನು ಕೈಗೊಂಡಿರುತ್ತೇವೆ. ಒಟ್ಟಿನಲ್ಲಿ ನಮ್ಮ ಯುವಕ ಯುವತಿಯರಲ್ಲಿ ದೇಶೀಯತೆಯು ಅರಿವು ಮೂಡಿಸಿ ನಮ್ಮ ಸಂಸ್ಕೃತಿಯ ಹರಿಕಾರರನ್ನಾಗಿ ಮಾಡುವುದೇ ನಮ್ಮ ಘನ ಉದ್ದೇಶವಾಗಿದೆ.
ನಿರಂತರವಾಗಿ ವಿವಿಧ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರೀ ಶಾರದಾ ದೇವಿಯ ನಿರಂತರ ಆರಾಧನೆ ಮಾಡಿಕೊಂಡು ಬರುವ ನಮ್ಮ ಸಮಿತಿಯು ಇದೀಗ 55ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ಸ್ಮರಣೀಯ ಸಂಗತಿ. ನಮ್ಮ ಟ್ರಸ್ಟ್ ಹತ್ತು ಹಲವು ಕಾರ್ಯಕ್ರಮಗಳಿಗೆ ಹಿರಿಯ, ಕಿರಿಯ ಸದಸ್ಯರುಗಳ ಪಾಲುಗೊಳ್ಳುವಿಕೆಯ ಸೇವೆಯನ್ನು ಅತ್ಯಂತ ಗೌರವದಿಂದ ಈ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇವೆ.
ನಮ್ಮ ಯೋಚನೆಗಳು, ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಹತ್ತು ಹಲವು ಮಹನೀಯರ ಬೆಂಬಲ, ಪ್ರೋತ್ಸಾಹವನ್ನು ಸ್ಮರಿಸುತ್ತೇವೆ. "ಸರ್ವೇಜನಃ ಸುಖಿನೋ ಭವಂತು"
send fund to bank
ACCOUNT NAME: BALAKARA SARVAJANIKA SRI SHARADA MAHOTSAVA SAMITHI
Account no: 12740100009154
BANK: BANK OF BARODA, LADYHILL BRANCH,
IFSC CODE: BARB0LADYHI (FIFTH CHARACTER IS ZERO)
https://www.balakarasharadechilimbi.org
facebook: balakara sharade chilimbi
mail:[email protected]
ಅಧ್ಯಕ್ಶರು ಮತ್ತು ಸದಸ್ಯರು,
ಬಾಲಕರ ಸಾರ್ವಜನಿಕ ಶ್ರೀ ಶಾರದಾ ನಿಕೇತನ ಟ್ರಸ್ಟ್ (ರಿ.)