23/05/2026
#ಪವಿತ್ರಾತ್ಮ__ದೇವರ_ಪಾವನ_ಉಸಿರು
ಅದು ನಾನು ಧರ್ಮೋಪದೇಶದ ತರಗತಿಗೆ ಸೇರಿದ ಆರಂಭಿಕ ದಿನಗಳು. ಮೂಲ ವಿಚಾರಗಳು ಒಂದಿಷ್ಟು ಬರುತ್ತಿದ್ದವೇ ಹೊರತಾಗಿ ಹೆಚ್ಚೇನೂ ಬರುತ್ತಿರಲಿಲ್ಲ. ಅಂತಹ ಸಮಯದಲ್ಲಿ ಧರ್ಮೋಪದೇಶ ತರಗತಿ ನಡೆಸುತ್ತಿದ್ದ ಶಿಕ್ಷಕಿ ಕುತೂಹಲಕಾರಿ ಎನಿಸುವ ಸಂಗತಿಯೊಂದನ್ನು ಬೋಧಿಸತೊಡಗಿದರು. ಅದು ಪರಮ ತ್ರಿತ್ವದ ಕುರಿತಾಗಿತ್ತು. ಮೂವರು ವ್ಯಕ್ತಿಗಳಂತೆ, ಅದಾಗ್ಯೂ ಒಬ್ಬರೇ ದೇವರಂತೆ. ಇದು ಹೇಗೆ ಸಾಧ್ಯ ಎನ್ನುವುದೇ ತಲೆ ಕೆಡಿಸುವ ಸಂಗತಿಯಾಗಿತ್ತು ನನ್ನ ಪಾಲಿಗೆ. ಆದರೆ ಸಮಯ ಕಳೆದಂತೆ ಬುದ್ಧಿ ಬೆಳೆದಂತೆ ನಿಧಾನವಾಗಿ ಎಲ್ಲವೂ ಅರಿವಾಗತೊಡಗಿತು. ಮೂವರು ವ್ಯಕ್ತಿಗಳಿದ್ದರೂ ಅವರು ಒಂದೇ ಅಂಶ ಎನ್ನುವುದು ಅರಿವಾಯಿತು. ಅದರಲ್ಲೂ ಈ ಮೂರು ಜನರಲ್ಲಿ ಪವಿತ್ರಾತ್ಮರ ಬಗ್ಗೆ ಇನ್ನೊಂದು ಬಗೆಯ ಕುತೂಹಲ ನನಗೆ.
ಏಕೆಂದರೆ ಬೈಬಲ್ ಗ್ರಂಥವನ್ನು ತೆರೆದರೆ ಅದರಲ್ಲಿನ ಹಳೆ ಒಡಂಬಡಿಕೆಯಲ್ಲಿ ಪಿತ ದೇವರು ನಮ್ಮ ಪೂರ್ವಿಕರಾದ ಅದಾಮನಿಂದ ಹಿಡಿದು ಅಬ್ರಾಹಾಮರ ತನಕ, ಮುಂದೆ ಮೋಶೆ ಆರೋನ ದಾವಿದ ಹೀಗೆ ಹಲವಾರು ಜನರೊಡನೆ ಮಾತನಾಡಿದರ ಬಗ್ಗೆ ಓದಲು ಸಿಗುತ್ತದೆ.
ಅದೇ ರೀತಿ ಹೊಸ ಒಡಂಬಡಿಕೆಯನ್ನು ಗಮನಿಸಿದರೆ ಅದರಲ್ಲಿ ಯೇಸುವಿನ ಬಗ್ಗೆ ಓದಲು ಸಿಗುತ್ತದೆ. ಆದರೆ ನಮಗೆ ಪವಿತ್ರಾತ್ಮರ ಬಗ್ಗೆ ದೊರೆಯುವ ಮಾಹಿತಿ, ಪಿತ ದೇವರಿಗೂ ಯೇಸುವಿಗೂ ಹೋಲಿಸಿದರೆ ಕಡಿಮೆ ಎನ್ನಬಹುದು. ಅದರ್ಥ ಪವಿತ್ರಾತ್ಮರು ನಗಣ್ಯ ಅಂತಲ್ಲ. ಬದಲಾಗಿ ಪಿತ ಪುತ್ರರಿಗೆ ಸರಿ ಸಮಾನವಾದ ಗೌರವಾದದಗಳಿಗೆ ಪವಿತ್ರಾತ್ಮರೂ ಸಹ ಬಾದ್ಯಸ್ಥರು.
ಈಗ ನಮ್ಮನ್ನು ಕಾಡುವ ಪ್ರಶ್ನೆ ಎಂದರೆ ಈ ಪವಿತ್ರಾತ್ಮರು ಯಾರು?
ಪವಿತ್ರಾತ್ಮರು ಪರಮ ತ್ರಿತ್ವದ ಮೂರನೇ ವ್ಯಕ್ತಿಯಾಗಿದ್ದಾರೆ. ಪಿತ ದೇವರು ಸಕಲ ಸೃಷ್ಟಿಯ ಸೃಷ್ಟಿಕರ್ತರಾದರೆ, ಅವರ ಏಕಮಾತ್ರ ಪ್ರಿಯಪುತ್ರರಾದ ಯೇಸು ಲೋಕ ರಕ್ಷಕರಾದರೆ, ಪವಿತ್ರಾತ್ಮರು ದೇವರ ಶ್ವಾಸ ಅಥವ ಉಸಿರಾಗಿದ್ದಾರೆ ಎನ್ನಬಹುದು. ಅದಕ್ಕೆ ನಿದರ್ಶನ ನಮಗೆ ಯೇಸುವಿನ ಪುನುರುತ್ಥಾನದ ಬಳಿಕದ ಘಟನಾವಳಿಯಲಿ ಓದಲು ಸಿಗುತ್ತದೆ. ಯಹೂದಿಗಳ ಭಯದಿಂದ ಕೋಣೆಯ ಬಾಗಿಲು ಹಾಕಿಕೊಂಡು ಕೂತಿದ್ದ ಆಪೋಸ್ತಲರ ನಡುವೆ ಬರುವ ಯೇಸು "ಇಗೋ ತಗೆದುಕೊಳ್ಳಿ ಪವಿತ್ರಾತ್ಮರನ್ನು" ಎನ್ನುತ್ತಾ ಅವರ ಮೇಲೆ ತಮ್ಮ ಶ್ವಾಸವನ್ನು ಬಿಡುತ್ತಾರೆ. (ಯೊಹಾನ್ನ- 20:22) ಇಲ್ಲಿ ನಮಗೆ ಅರಿವಾಗುವುದು ಪವಿತ್ರಾತ್ಮರು ದೇವರ ಪಾವನ ಉಸಿರಿನ ಸಂಕೇತ ಎನ್ನುವುದು
ಇಲ್ಲಿ ಇನ್ನೊಂದು ಪ್ರಶ್ನೆ ಬರಬಹುದು. ಯೇಸು ಹಾಗೂ ಪಿತದೇವರು ಇದ್ದಾಗ ಪವಿತ್ರಾತ್ಮರ ಅಗತ್ಯವಾದರೂ ಏನು ಎಂಬುದು. ಅದಕ್ಕೆ ಉತ್ತರ ಸುಲಭವಾಗಿ ಹೇಳೋದಾದರೆ
ಪವಿತ್ರಾತ್ಮರು ಇಲ್ಲದೇ ಹೋದರೆ ದೇವರ ಅಸ್ತಿತ್ವವೇ ಪೂರ್ಣವಾಗುವುದಿಲ್ಲ. ಏಕೆಂದರೆ ಅವರು ತ್ರಯೇಕ ದೇವರು. ಪಿತ ದೇವರು ಹೇಗೆ ಸೃಷ್ಟಿಕರ್ತರೋ, ಪುತ್ರ ದೇವರು ಹೇಗೆ ಲೋಕ ರಕ್ಷಕರೋ , ಅಂತೆಯೇ ಪವಿತ್ರಾತ್ಮರು ಸಕಲ ಪವಿತ್ರತೆಯ ಬುಗ್ಗೆಯಾಗಿದ್ದಾರೆ. ಎಲ್ಲ ಅಪವಿತ್ರತೆಯನ್ನು ತೊಡೆದು ಹಾಕಿ ಪವಿತ್ರಗೊಳಿಸಲು ಪವಿತ್ರಾತ್ಮರ ಅಗತ್ಯವಿದೆ. ಜೊತೆಗೆ ಅವರು ಎಲ್ಲ ವರಗಳ ಕೃಪೆ ಸುರಿಸುವವರಾಗಿದ್ದಾರೆ
ಮಾನವನ ರಕ್ಷಣಾ ಚರಿತ್ರೆಯಲ್ಲಿ ಪವಿತ್ರಾತ್ಮರು ಅದೃಶ್ಯ ರೂಪದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ. ಏಕೆಂದರೆ ದೇವಮಾತೆ ಮರಿಯಮ್ಮನವರು ಪುರುಷ ಸಂಗ ಇಲ್ಲದೇ ಹೋದಾಗ್ಯೂ ಗರ್ಭ ಧರಿಸುವಂತೆ ಮಾಡಿದ್ದು ಪವಿತ್ರಾತ್ಮರ ಬಲವೇ ಹೊರತು ಬೇರೆನಲ್ಲ. ಹಾಗಲ್ಲದೇ ಇದ್ದಿದ್ದರೆ ಬಹುಶಃ ಮೇರಿ ಮಾತೆ ತನ್ನ ಕನ್ಯತ್ವ ಕುಂದಿಸದೇ ಯೇಸುವಿಗೆ ತಾಯಿ ಆಗಲು ಸಾಧ್ಯವೇ ಇರುತ್ತಿರಲಿಲ್ಲ. ಅಲ್ಲಿಗೆ ನಮಗೆ ರಕ್ಷಣೆಯೇ ಸಿಗುತ್ತಿರಲಿಲ್ಲ. ನಮ್ಮ ಪಾಪಗಳಲ್ಲಿಯೇ ನಾವು ಸಾಯಬೇಕಿತ್ತು. ಆದರೆ ಪವಿತ್ರಾತ್ಮರು ಯೇಸುವು ಮನುಷ್ಯ ರೂಪ ತಾಳಲು ಕಾರಣೀಭೂತರಾಗಿದ್ದಾರೆ ಎಂದರೆ ಖಂಡಿತ ತಪ್ಪಾಗಲಾರದು.
ಇದಿಷ್ಟು ಮಾತ್ರವಲ್ಲ ಯೇಸು, ಯೋರ್ದಾನ್ ನದಿಯಲ್ಲಿ ಸ್ನಾನಿಕ ಯೊಹಾನ್ನರ ಕೈಯಿಂದ ದೀಕ್ಷಾಸ್ನಾನವನ್ನು ಪಡೆದು ದಡಕ್ಕೆ ಬಂದಾಗ ಮತ್ತದೇ ಪವಿತ್ರಾತ್ಮರು ಯೇಸುವಿನ ಮೇಲೆ ಪಾರಿವಾಳದ ರೂಪದಲ್ಲಿ ಹಾರಿ ಬಂದು ಕೂತರು. (ಮತ್ತಾಯ-3: 16) ನಂತರ ಅವರ ಪ್ರೇರಣೆಯಿಂದಲೇ ಯೇಸು ಮರಳುಗಾಡಿಗೆ ಹೋಗಿ ಅಲ್ಲಿ ತಮ್ಮ ಜೀವನದ ಅಮೂಲ್ಯ 40 ಹಗಲು ರಾತ್ರಿಗಳನ್ನು ನಿರಂತರ ಧ್ಯಾನದಲ್ಲಿ ಕಳೆದರು. ಆ ಮೂಲಕ ಅವರು ತಮ್ಮ ಬಹಿರಂಗ ಜೀವನ ಆರಂಭಕ್ಕೂ ಮುನ್ನ ಪವಿತ್ರಾತ್ಮರ ಬಲವನ್ನು ಪಡೆದುಕೊಂಡರು.
ಬರೀ ಇದಿಷ್ಟು ಮಾತ್ರವಲ್ಲ ಪವಿತ್ರಸಭೆಯ ಹುಟ್ಟಿಗೂ ಪವಿತ್ರಾತ್ಮರೇ ಕಾರಣ ಎನ್ನಬಹುದು. ಏಕೆಂದರೆ ಪವಿತ್ರಾತ್ಮರ ಬಲ ಇಲ್ಲದೇ ಹೋಗಿದ್ದರೆ ಕ್ರೈಸ್ತ ಧರ್ಮ ಅಸ್ತಿತ್ವಕ್ಕೇ ಬರುತ್ತಿರಲಿಲ್ಲ. ಯೇಸುವಿನ ಮರಣದ ನಂತರ ಉತ್ಸಾಹವನ್ನು ಕಳೆದುಕೊಂಡು ಒಂದು ರೀತಿ ನಿಶ್ತೇಜರಾಗಿದ್ದ ಧರ್ಮದೂತರನ್ನು ಬಡಿದೆಬ್ಬಿಸಿದ್ದು ಮತ್ತದೇ ಪವಿತ್ರಾತ್ಮರು. ಏಕೆಂದರೆ ಪಂಚಶತ್ತಾತಮದ ದಿನ ಅಗ್ನಿ ರೂಪದಲ್ಲಿ ಪವಿತ್ರಾತ್ಮರು ಧರ್ಮದೂತರ ಮೇಲೆ ಇಳಿದ ಬಳಿಕವಷ್ಟೇ ಧರ್ಮದೂತರು ಮೈಕೊಡವಿ ಎದ್ದು ನಿಂತು ಯೇಸು ಕಲಿಸಿದ ಬೋಧನೆಯನ್ನು ಹಾಗೂ ಯೇಸುವೇ ಲೋಕೋದ್ಧಾರಕ ಎಂಬ ಸುವಾರ್ತೆಯನ್ನು ಜಗತ್ತಿನ ಮೂಲೆ ಮೂಲೆಗೂ ಹೋಗಿ ಬೋಧಿಸಿದ್ದು. ಹೀಗಾಗಿಯೇ ಪಂಚಶತ್ತಾತಮದ ದಿನವನ್ನು ಪವಿತ್ರಸಭೆಯ ಹುಟ್ಟಿದ ದಿನ ಎನ್ನಲಾಗುತ್ತದೆ. ಮಾತ್ರವಲ್ಲ ಇದೇ ಪವಿತ್ರಾತ್ಮರ ಪ್ರೇರಣೆಯಿಂದಲೇ ಅಪೋಸ್ತಲರಾದಿಯಾಗಿ ಸ್ತೆಫಾನನ ತನಕ,ಆರಂಭಿಕ ಭಕ್ತ ವಿಶ್ವಾಸಿಗಳಿಂದ ಜಗದ್ಗುರುಗಳ ತನಕ ಎಲ್ಲರೂ ನಗು ನಗುತ್ತಾ ತಮ್ಮ ಜೀವದ ಬಲಿದಾನಗೈದದ್ದು.
ಪವಿತ್ರಾತ್ಮರ ಕೆಲಸ ಇಷ್ಟಕ್ಕೇ ಮುಗಿಯಲಿಲ್ಲ. ಬದಲಾಗಿ ಇಂದಿಗೂ ಪವಿತ್ರಸಭೆಯ ಏಳಿಗೆಗೆ ಪವಿತ್ರಾತ್ಮರು ಶ್ರಮಿಸುತ್ತಿದ್ದಾರೆ. ಪವಿತ್ರಸಭೆಯನ್ನು ತಮ್ಮ ವರಗಳಿಂದ ತುಂಬುತ್ತಿದ್ದಾರೆ. ಜಗದ್ಗುರುಗಳಿಂದ ಸಾಮಾನ್ಯ ವಿಶ್ವಾಸಿಗಳ ತನಕ ಎಲ್ಲರಿಗೂ ಇದೇ ಪವಿತ್ರಾತ್ಮರು ದಾರಿದೀಪವನ್ನು ಹಿಡಿದು ಸ್ವರ್ಗ ಸಾಮ್ರಾಜ್ಯದ ಮೆಟ್ಟಲು ಹತ್ತಲು ಸಹಾಯ ಮಾಡುತ್ತಿದ್ದಾರೆ. ದೀಕ್ಷಾಸ್ನಾನದ ಮೂಲಕ ನಮ್ಮ ಮೇಲೆ ಇಳಿದ ಪವಿತ್ರಾತ್ಮರು ನಮ್ಮ ಜೀವನದ ಕಡೆ ಗಳಿಗೆಯ ತನಕ ನಮ್ಮನ್ನು ಮುನ್ನಡೆಸುತ್ತಿದ್ದಾರೆ.
ಹೀಗೆ ಪವಿತ್ರಾತ್ಮರು ಆದಿಯಿಂದ ಜಗತ್ತಿನ ಅಂತ್ಯದವರೆಗೆ ಈ ಸೃಷ್ಟಿಯಲ್ಲಿದ್ದು ದೇವರ ಅನ್ಯೊನ್ಯತೆಯಲ್ಲಿ ಒಗ್ಗೂಡಿಸುತ್ತಾರೆ. ಇಂತಹ ಪವಿತ್ರಾತ್ಮರಿಗಾಗಲಿ ಸ್ತುತಿ ಸ್ತ್ರೋತ್ರ ಮಹಿಮೆ ನಿತ್ಯ ನಿರಂತರಕೂ ಯುಗ ಯುಗಾಂತರಕೂ ಆಮೇನ್.
-ರೋಹನ್ ಪಿಂಟೊ
ಗೇರುಸೊಪ್ಪ