23/05/2018
ಗೆಳೆಯರೆ,
ನಮ್ಮ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಜನ ಪಾಳೆಗಾರರು ಆಳಿಹೋಗಿದ್ದಾರೆ. ಇತಿಹಾಸದಲ್ಲಿ ದಾಖಲಾಗಿದ್ದಾರೆ. ಜರಿಮಲೆ, ಗುಡೇಕೋಟೆ ಪ್ರಸಿದ್ಧ ಐತಿಹಾಸಿಕ ಸ್ಥಳಗಳಾಗಿವೆ. ಆದರೆ ಅವುಗಳ ಬಗ್ಗೆ ಮತ್ತಷ್ಟು ಸಂಶೋಧನೆ, ಉತ್ಖನನ ನಡೆಯಬೇಕಿದೆ.
ನಾನು 1990ರಲ್ಲಿ ಕೂಡ್ಲಿಗಿಗೆ ಬಂದಾಗ ತಾಲೂಕಿನ ಬಗ್ಗೆ ಅಷ್ಟೊಂದು ಯೋಚಿಸಿರಲಿಲ್ಲ. ಆದರೆ ನಿಧಾನವಾಗಿ ತಾಲೂಕು ತನ್ನೊಳಗಿನದನ್ನೆಲ್ಲ ನನ್ನೊಂದಿಗೆ ಮ್ತಾತನಾಡುತಿದೆಯೇನೋ ಅನಿಸತೊಡಗಿತು. ಬಹುತೇಕ ತಾಲೂಕಿನ ಎಲ್ಲ ಗ್ರಾಮಗಳನ್ನೂ ಸುತ್ತಿರುವೆ. ಅಲ್ಲಿಯ ವಿಶೇಷತೆಗಳನ್ನೂ ಗಮನಿಸಿರುವೆ. ನನಗೆ ಅತ್ಯಂತ ಆಸಕ್ತಿದಾಯಕವಾಗಿರುವುದು ಇತ್ತೀಚೆಗೆ ತಾಲೂಕಿನ ಪ್ರತಿಯೊಂದು ಗ್ರಾಮಗಳ ಹೆಸರುಗಳು. ಪ್ರತಿ ಗ್ರಾಮದ ಹಿಂದೆ ಒಂದೊಂದು ಕತೆ ಇದೆ, ಐತಿಹ್ಯವಿದೆ. ಯಾವುದೇ ಒಂದು ಗ್ರಾಮದ ಹೆಸರು ಬರಬೇಕಾದರೆ ಅದಕ್ಕೊಂದು ಹಿನ್ನೆಲೆಯಿರುತ್ತದೆ. ಆ ಹಿನ್ನೆಲೆಯಲ್ಲಿ ನಾನು ತಾಲೂಕಿನ ಎಲ್ಲ ಗ್ರಾಮಗಳನ್ನೂ ವಿಶೇಷವಾಗಿ ಗಮನಿಸುತ್ತಿರುವೆ.
ಈ ರೀತಿ ಗಮನಿಸಿದಾಗ ನನಗೆ ಕಂಡುಬಂದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಈಗಾಗಲೇ ತಮಗೆಲ್ಲ ತಿಳಿದಿರುವಂತೆ ಇಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿರುವುದರಿಂದಲೂ, ಹಲವಾರು ದಶಕಗಳಿಂದಲೂ ಅತಿಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ, ನಾಯಕ ಜನಾಂಗದವರು ವಾಸಿಸುತ್ತಿರುವುದರಿಂದಲೂ ಇಲ್ಲಿನ ಬಹುತೇಕ ಗ್ರಾಮಗಳ ಹೆಸರುಗಳು ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿವೆ.
ನಾನು ಗಮನಿಸಿದಂತೆ ತಾಲೂಕಿನಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಹಟ್ಟಿ ಎಂಬ ಹೆಸರಿನಿಂದ ಕೊನೆಯಾಗುವ ಗ್ರಾಮಗಳಿವೆ, ಹಾಗೆಯೇ ಹಳ್ಳಿ, ಪುರ ಎಂಬ ಹೆಸರಿನಿಂದಲೂ ಕೊನೆಯಾಗುವ ಗ್ರಾಮಗಳಿವೆ. ಉದಾಹರಣೆಗೆ, ಯರ್ರೋಬಯ್ಯನಹಟ್ಟಿ, ಬೋರಯ್ಯನಹಟ್ಟಿ, ಗೊಲ್ಲರಹಟ್ಟಿ, ಕಾಮಯ್ಯನಹಟ್ಟಿ, ಕೆರೆಕಾವಲರಹಟ್ಟಿ, ಮ್ಯಾಸರಹಟ್ಟಿ, ಎಂ.ವಡ್ರಟ್ಟಿ, ಪಿಚ್ಚಾರಹಟ್ಟಿ, ಸಂಕಲಾಪುರದಹಟ್ಟಿ ರಾಮಸಾಗರಹಟ್ಟಿ ಹೀಗೇ ಮುಂದುವರೆಯುತ್ತದೆ. ಈ ಹೆಸರುಗಳಿಂದ ಕೊನೆಯಾಗುವ ಗ್ರಾಮಗಳು ತಮ್ಮ ಹೆಸರಿನೊಂದಿಗೆ ವಿಶೇಷತೆಯನ್ನು ಹೊಂದಿರುತ್ತವೆ.ಹಟ್ಟಿ ಎಂದರೆ ಪುಟ್ಟ ಗ್ರಾಮ ಎಂದರ್ಥ. ಆ ಗ್ರಾಮದ ದೇವರ ಹೆಸರೋ, ಅಲ್ಲಿ ವಾಸಿಸುತ್ತಿದ್ದ ಪ್ರಮುಖ ಮನೆತನದ ವೀರನ ಹೆಸರೋ ಅದಕ್ಕೆ ಜೋಡಣೆಯಾಗಿರುತ್ತದೆ.
ಇದಲ್ಲದೆ ಹಳ್ಳಿ ಎಂಬುದರಿಂದ ಕೊನೆಯಾಗುವ ಗ್ರಾಮಗಳೂ ಇವೆ. ಅಪ್ಪೇನಹಳ್ಳಿ, ಚಿಲುಮೆಹಳ್ಳಿ, ಕೆಂಚಮಲ್ಲನಹಳ್ಳಿ, ಹೊಸಹಳ್ಳಿ, ಶಾಂತನಹಳ್ಳಿ, ಬಿಷ್ಣಹಳ್ಳಿ, ಉಲ್ಲಾನಹಳ್ಳಿ ಹೀಗೆ. ಪುರ ಎಂಬ ಹೆಸರಿನಿಂದ ಕೊನೆಯಾಗುವಂತಹವೂ ಸಾಕಷ್ಟಿವೆ. ರಾಯಾಪುರ, ಕಸಾಪುರ, ಸಿದ್ದಾಪುರ, ಚಂದ್ರಶೇಖರಪುರ, ಇಮಡಾಪುರ, ತಿಮ್ಮಲಾಪುರ, ಶಿವಪುರ, ಗಜಾಪುರ ಹೀಗೇ. ಇಲ್ಲಿ ಪುರ ಎಂದರೆ ಪಟ್ಟಣ ಎಂಬರ್ಥವಿದೆ. ಬಹುಶ: ಪಾಳೆಯಗಾರರ ಕಾಲದ ಪ್ರಮುಖ ಸ್ಥಳಗಳಾಗಿರುವ ಸಾಧ್ಯತೆಗಳಿವೆ.
ನಾಗರು ಎಂಬ ಹೆಸರಿನಿಂದ ಆರಂಭಗೊಳ್ಳುವ ಗ್ರಾಮಗಳು ನನಗೆ ವಿಶೇಷವೆನಿಸಿದವು. ನಾಗರಹುಣಸೆ ಹಾಗೂ ನಾಗರಕಟ್ಟೆ. ಇಲ್ಲಿ ನಾಗರು ಎಂಬ ಜನಾಂಗವನ್ನು ಪ್ರತಿನಿಧಿಸುವುದಾದರೂ ಬಹುಶ: ನಾಗದೇವತೆಗಳನ್ನು ಪೂಜಿಸುವ ಪ್ರಮುಖ ಸ್ಥಳಗಳೆಂಬ ಹಿನ್ನೆಲೆಯಲ್ಲಿ ಈ ಗ್ರಾಮಗಳ ಹೆಸರುಗಳು ಬಂದಿರಲೂಬಹುದು.
ಈಗ ಕೆಲವು ಗ್ರಾಮಗಳ ಹೆಸರುಗಳನ್ನು ಪರಿಶೀಲಿಸೋಣ. ಗುಡೇಕೋಟೆ ಪ್ರಮುಖವಾದ ಸ್ಥಳ. ಈ ಹೆಸರಿನ ಹಿನ್ನೆಲೆ ಗಮನಿಸಿದಾಗ ಗುಡ್ಡವನ್ನು ಈ ಸ್ಥಳ ಹೊಂದಿರುವುದರಿಂದಾಗಿ, ಕೋಟೆಯನ್ನು ಹೊಂದಿರುವುದರಿಂದಾಗಿ ಗುಡ್ಡದ ಕೋಟೆ ಗುಡೇಕೋಟೆ ಎಂಬ ಹೆಸರು ಬಂದಿರಬಹುದಾಗಿದೆ.
ಯರ್ರೋಬಯ್ಯನಹಟ್ಟಿ ಒಂದು ಗ್ರಾಮ. ಇಲ್ಲಿ ಯರ್ರೋಬಯ್ಯ ಎಂಬುದು ವ್ಯಕ್ತಿಯ ಹೆಸರು. ಈ ಗ್ರಾಮದಲ್ಲಿ ಹಿಂದೆ ಒಂದು ಪ್ರಮುಖ ಮನೆತನದ ವೀರನ ಅಥವಾ ಪ್ರಮುಖನ ಹೆಸರನ್ನೇ ಗ್ರಾಮಕ್ಕೆ ಇಟ್ಟೀರುವ ಸಾಧ್ಯತೆ ಇದೆ. ಹೀಗಾಗಿ ಇದು ಯರ್ರೋಬಯ್ಯನ ಹಟ್ಟಿ ಎಂಬ ಹೆಸರು ಬಂದಿರಬಹುದಾಗಿದೆ. ಬೋರಯ್ಯನಹಟ್ಟಿ ಎಂಬ ಹೆಸರೂ ಇದೇ ರೀತಿ ಬಂದಿರುವ ಸಾಧ್ಯತೆಗಳಿವೆ.
ಶ್ರೀಕಂಠಾಪುರ ಗ್ರಾಮದ ಹೆಸರೂ ಸಹ ದೇವರ ಹೆಸರಿನಿಂದ ಬಂದುದಾಗಿದೆ. ಶ್ರೀಕಂಠ ಎಂಬುದು ಶಿವನ ಹೆಸರು. ಶಿವನ ದೇವಾಲಯ ಇರುವ ಗ್ರಾಮವಾಗಿದ್ದುದರಿಂದ ಆ ಹೆಸರನ್ನಿರಿಸಿರಬಹುದಾಗಿದೆ.
ನನಗೆ ತುಂಬ ಆಸಕ್ತಿದಾಯಕವಾಗಿ ಕಾಣಿಸಿದ ಹೆಸರೆಂದರೆ ಕುದುರೆಡವು. ಈ ಕುರಿತು ಪರಿಶೀಲಿಸಿದಾಗ, ಕುದಿರ್ ಎಂದರೆ ಧಾನ್ಯವನ್ನು ಸಂಗ್ರಹಿಸುವ ಮಣ್ಣಿನ ಕಣಜ ಎಂಬರ್ಥವಿದೆ. ಎಡೆ ಎಂದರೆ ಸ್ಥಳ ಎಂದರ್ಥ್ ಹೀಗಾರಿ ಕುದಿರ್ + ಎಡೆ = ಕುದಿರೆಡವು ಎಂಬ ಹೆಸರು ಬಂದಿದೆ. ಈಗಲೂ ಈ ಗ್ರಾಮದಲ್ಲಿ ನಾನು ಪರಿಶೀಲಿಸಿದಂತೆ ಮಣ್ಣಿನ ಕಣಜಗಳಿವೆ(ವಡೇವು). ಇದು ತುಂಬ ಆಸಕ್ತಿದಾಯಕ ಹೆಸರು.
ಇನ್ನೂ ಹಂಚಿಕೊಳ್ಳುವ ವಿಷಯಗಳು ಬಹಳ ಇವೆ. ಇವತ್ತಿಗೆ ಇಷ್ಟು ಸಾಕು. ಮುಂದಿನ ದಿನಗಳಲ್ಲಿ ಮತ್ತೆ ಬೇರೆ ಬೇರೆ ಗ್ರಾಮಗಳ ಕುರಿತು ಹಂಚಿಕೊಳ್ಳುತ್ತೇನೆ.
ಏನೇ ಇರಲಿ ನಮ್ಮ ತಾಲೂಕಿನ ಇತಿಹಾಸವನ್ನು ಕೆದಕಿದಷ್ಟು ಅನೇಕ ವಿಷಯಗಳು ಹೊರಬಹುತ್ತವಲ್ಲ, ಇಂತಹ ಸ್ಥಳದಲ್ಲಿ ನಾನಿದ್ದೀನಲ್ಲ. ಅದೇ ನನಗೆ ಹೆಮ್ಮೆ. ಕೂಡ್ಲಿಗಿ ತಾಲೂಕಿನ ಮಣ್ಣಿಗೆ ನನ್ನ ನಮನಗಳು.
ಧನ್ಯವಾದಗಳು,
ƘօԵɾҽՏհ ցҽժժɑӀɑցɑԵԵҽ