14/05/2021
*ವಿಶ್ವಮಾನವತೆ ಬೆಳಗಲಿ*
●●●●●●●●●●●●●●●●●
ಧರ್ಮದ ಮೂಲ
ದಯವೆಂದು ಸಾರಿ
ಅಂದೇ ಜಗದ ಕಣ್ಣು
ತೆರೆಸಿದ ವಿಶ್ವಜ್ಯೋತಿ ನೀನು||
ನಿಜದ ನಿಲುವಿನಲಿ
ಬದುಕು ಸಾಗಿಸಿ
ನುಡಿದಂತೆ ನಡೆದು
ನುಡಿ,ನಡೆ ಒಂದಾಗಿ ಅರುಹಿದ
ನಿಜ ಶರಣ ನೀನು ||
ಸಮಸಮಾಜದ ಸಮತಲದಲಿ
ಸರ್ವರೂ ಸಮಾನರೆಂದು ಹೇಳಿ
ಜಾತಿಯ ಗೀಳನು ಸೀಳಿ
ಸಮತೆ ಸಾರಿದ ಸರ್ವಶ್ರೇಷ್ಠ ಮಾನವತಾವಾದಿ ನೀನು ||
ಢಾಂಬಿಕರ ಡೊಂಕುಗಳನು
ಖಂಡಿಸಿ,ಧಂಡಿಸಿ ಮೂಢರ ಮತಿಗೆ
ನಿಜಭಕ್ತಿಯ,ಕಾಯಕ ಶಕ್ತಿಯ
ತೋರಿದ ಮಹಾಮಹಿಮ ನೀನು ||
ಇಂದು ಹುಸಿಮಾತುಗಳನೆ ಉಸಿರಾಗಿಸಿಕೊಂಡು,ಧರ್ಮ-ಜಾತಿಗಳ ಅಮಲಿನಲಿ ನನ್ನದೆ ಮೇಲು-ಮಿಗಿಲು
ಎಂದು ಹೊರಳಾಡುವವರಿಗೆ ಎಲ್ಲಿಯ ಅಂತರಂಗ ಶುದ್ಧಿ ಎಲ್ಲಿಯ ಬಹಿರಂಗ ಶುದ್ಧಿ ||
ಸರ್ವಕಾಲಕೂ ಸಲ್ಲುವ ನಿನ್ನ
ತತ್ವಾದರ್ಶಗಳು ಇನ್ನಾದರೂ
ನಮ್ಮಲ್ಲಿ ಮನೆ ಮಾಡಿರುವ
ದ್ವೇಷ-ಅಸೂಯೆ ಅಂದಕಾರವನು
ಅಳಿಸಲಿ ಸರ್ವರಲಿ ವಿಶ್ವಮಾನವತೆಯನು ಬೆಳೆಸಲಿ
●●●●●●●●●●●●●●●●●●
(೨)
🌺 *ವಿಶ್ವಗುರು ಬಸವಣ್ಣ* 🌺
●●●●●●●●●●●●●●●●●●
ಮಾದರಸನ ಮಗನಾಗಿ
ಕಾಯಕದ ಹರಿಕಾರನಾಗಿ
ಲೋಕದ ಡೊಂಕನು ತಿದ್ದಿದ
ವಿಶ್ವ ಜ್ಯೋತಿಯಾಗಿ
ಜಗವ ಬೆಳಗಿದ ಬಸವಣ್ಣ||
ಶರಣರಿಗೆ ಸತಿಯಾಗಿ
ಅಂತರಂಗಕ್ಕೆ ಶುಧ್ದಿಯಾಗಿ
ಜಾತಿ-ಭೇದಕ್ಕೆ ಬದ್ದ ವೈರಿಯಾಗಿ
ಸಮಾಜದ ಕೊಳೆ ತೊಳೆದ
ವಿಶ್ವಗುರು-ಬಸವಣ್ಣ||
ಕರದೊಳ್ ಲಿಂಗವನಿರಿಸಿ
ಹೃದಯದಲಿ ಸಂಗಮನಿರಿಸಿ
ನೂಸಲಿಗೆ ವಿಭೂತಿ ಧರಿಸಿ
ದೇಹವ ದೇಗುಲ ಮಾಡಿ
ಕಾಯಕ ಧರ್ಮವೇ ಸತ್ಯ
ಉಳಿದುದೆಲ್ಲವೂ ಮಿಥ್ಯ
ಎಂದು ಸಾರಿದ ಕಾಯಕಯೋಗಿ ಬಸವಣ್ಣ||
ಬಿಜ್ಜಳನ ವಿತ್ತ ಭಂಡಾರಿ
ಕಲ್ಯಾಣದ ಭಕ್ತಿ ಭಂಡಾರಿ
ಮಹಾ ಮನೆಯ ರೂವಾರಿ
೧೨ನೆ ಶತಮಾನದ ಕ್ರಾಂತಿಕಾರಿ ಬಸವಣ್ಣ||
ಲಿಂಗವ ಮೆಚ್ಚಿ
ವಚನದ ದೀಪವ ಹಚ್ಚಿ
ನಿತ್ಯದಾಸೋಹದ ಮಂತ್ರ ಸ್ತುತಿಸಿ
ಧರ್ಮದ ಮೂಲ ದಯವೆಂದು ಜಪಿಸಿ
ಶರಣ ಸಂಸ್ಕೃತಿಗೆ ಶರಣು ಶರಣೆಂದ
ಮಹಾಶರಣ ಬಸವಣ್ಣ||
✍️ *ಮಲ್ಲಿಕಾರ್ಜುನ ಅರಬಿ*
🌸🌸🌸🌸🌸🌸🌸🌸🌸
( *ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು* )