15/09/2022
ನಮ್ಮೂರ ಗೌರಿಯ ಹಬ್ಬಕ್ಕೆ ಆಹ್ವಾನ
ಆಷಾಡ ಮಾಸ ಕಳೆದು ಶ್ರಾವಣ ಮಾಸ ಶುರುವಾದರೆ ಚಿಕ್ಕ ಚಿಕ್ಕ ಪಟ್ಟಣಗಳಿಂದ ದೊಡ್ಡ ದೊಡ್ಡ ನಗರಗಳವರೆಗೆ ಎಲ್ಲಡೆಯಲ್ಲಿಯೂ ಗಣೇಶ ಹಬ್ಬದ ಆಚರಣೆಯ ಕೆಲಸಗಳು ಶುರುವಾಗುತ್ತವೆ. ಎಲ್ಲಾ ವಯೋಮಾನದವರು ಸೇರಿ ಹಬ್ಬದ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಆದರೆ ನಾನಿಲ್ಲಿ ನಮ್ಮೂರ ಗೌರಿ ಬಗ್ಗೆ ನಿಮ್ಮೊಂದಿಗೆ ಹಲವು ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಗೌರಿ ಗಣೇಶರ ಕಥೆ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಸ್ವರ್ಣಗೌರಿ ವ್ರತದ ದಿನ ತವರು ಮನೆಗೆ ಬರುವ ಗೌರಿಯನ್ನು ಕರೆದುಕೊಂಡು ಹೋಗಲು ಬರುವ ಗಣೇಶನಿಗೆ ಹಲವು ತರದ ತಿನಿಸುಗಳೊಂದಿಗೆ ಓಲೈಸಿ, ಅವನನ್ನು ಮತ್ತು ಗೌರಿಯನ್ನು ಕೆಲವು ದಿನಗಳ ಕಾಲ ತವರಿನಲ್ಲಿ ಉಳಿಸಿಕೊಂಡು ಮತ್ತೆ ಶಿವನ ಮನೆಗೆ ಕಳಿಸುತ್ತಾರೆ. ನಮ್ಮೂರಿನ ಗೌರಿಯ ವಿಶೇಷವೆಂದರೆ ಗೌರಿಯ ಮೂರ್ತಿಯನ್ನು ಯಾವುದೇ ಮಾರುಕಟ್ಟೆಯಿಂದ ತರದೆ, ನಮ್ಮ ಊರಿನ ಆಚಾರಿ ಮನೆತನದವರು ಸ್ಥಳಿಯವಾಗಿ ದೊರೆಯುವ ಜೇಡಿಮಣ್ಣಿನಿಂದ ಮಾಡಿ ಅದರ ಮೇಲೆ ಕಡಲೆಹಿಟ್ಟು, ಬೆಣ್ಣೆ ಮೊದಲಾದ ವಸ್ತುಗಳಿಂದ ಮುಖಕ್ಕೆ ಬಣ್ಣವನ್ನು ನೀಡುತ್ತಾರೆ. ನಮ್ಮೂರಿನ ಗೌರಿಯ ಹಬ್ಬದ ಆಚರಣೆ ಯಾವಾಗ ಆರಂಭವಾಯಿತು ಎನ್ನುವುದರ ಬಗ್ಗೆ ಖಚಿತ ಮಾಹಿತಿಗಳಿಲ್ಲದಿದ್ದರೂ, ೨೦೦-೩೦೦ ವರ್ಷಕ್ಕಿಂತಲೂ ಹಳೆಯದು ಎನ್ನುವುದು ನಮ್ಮೂರ ಹಿರಿಯರ ಅಭಿಪ್ರಾಯ. ಗೌರಿಯನ್ನು ಮೆರವಣಿಗೆ ಕೊಂಡೊಯ್ಯಲು ಬಳಸುತ್ತಿದ್ದ ಅಡ್ಡಪಲ್ಲಕ್ಕಿ ೧೯೦೨ನೇ ಇಸವಿಯಲ್ಲಿ ಮಾಡಿದ್ದಾಗಿದ್ದು ಈ ವರ್ಷ ಹೊಸ ಅಡ್ಡಪಲ್ಲಕ್ಕಿಯನ್ನು ಮಾಡಿಸಲಾಗಿದೆ.
ಗೌರಿ ಹಬ್ಬ ಇನ್ನೂ ಕೆಲವು ದಿನಗಳು ಬಾಕಿ ಇರುವಂತೆಯೇ, ಊರಿನ ಯುವಕ ಸಂಘದವರೆಲ್ಲರೂ ಸೇರಿ ಆ ವರ್ಷ ಮಾಡಬೇಕಾಗಿರುವ ತಯಾರಿಗಳನ್ನು ಆರಂಭಿಸುತ್ತಾರೆ. ಹಬ್ಬದ ಹಿಂದಿನ ಎರಡು ದಿನಗಳಲ್ಲಿ, ಊರಿನ ದೇವಾಲಯದ ಆವರಣ ಮತ್ತು ಆಯಕಟ್ಟಿನ ಎಲ್ಲಾ ಜಾಗಗಳನ್ನು ಸ್ವಚ್ಚಗೊಳಿಸುತ್ತಾರೆ. ಹಬ್ಬದ ಹಿಂದಿನ ದಿನ ಆ ವರ್ಷ ಗೌರಿಯ ಮೂರ್ತಿಯನ್ನು ಮಾಡಿ ಪೂಜಿಸುವ ಹೊಣೆ ಹೊತ್ತ ಆಚಾರಿ ಮನೆಯವರು, ಗೌರಿಯ ಮೂರ್ತಿ ಮಾಡಲು ಬೇಕಾದ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿಕೊಳ್ಳುತ್ತಾರೆ. ಅಂದಿನ ರಾತ್ರಿ, ಗೌರಿಯ ಮೂರ್ತಿಯನ್ನು ನಿರ್ಮಿಸಿ ಸಿದ್ದಗೊಳಿಸುತ್ತಾರೆ. ಹಬ್ಬದ ದಿನ ಬೆಳಿಗ್ಗೆ ಒಳ್ಳೆಯ ಸಮಯದಲ್ಲಿ, ಗೌರಿಯ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇರಿಸಿ(ಯಾರೂ ನೋಡದಂತೆ ತೆರೆಯೊಂದಿಗೆ), ಊರಿನ ಕೆರೆಯ ಬಳಿಗೆ ಹೋಗಿ ಅಲ್ಲಿ ಗಂಗೆಯನ್ನು ಪೂಜಿಸಿ, ಗೌರಿಯ ತೆರೆಯನ್ನು ಸರಿಸಿ ಊರೊಳಗೆ ಕರೆತರಲಾಗುತ್ತದೆ. ಊರನ್ನು ಪ್ರವೇಶಿಸುವ ಮೊದಲು ಶಿವನ ದೇವಸ್ಥಾನದ ಮುಂದೆ ಪೂಜೆ ಮಾಡಿಸಿ, ನಂತರ ಎಲ್ಲರೂ ಇಡುಗಾಯಿ ಹಾಕುವ ಮೂಲಕ ಗೌರಿಯನ್ನು ಸ್ವಾಗತಿಸುತ್ತಾರೆ. ನಂತರ ಗೌರಿಯನ್ನು ದೇವಸ್ಥಾನದ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಮಹಾಮಂಗಳಾರತಿ ಮಾಡಲಾಗುತ್ತದೆ. ಗೌರಿ ಪ್ರತಿಷ್ಠಾಪನೆ ಆದಮೇಲೆ, ನಮ್ಮ ಊರಿನ ಹೆಣ್ಣುಮಕ್ಕಳಿಗೆ ಬಾಗಿಣ ಕೊಡಲು ಹೊರಡುತ್ತಾರೆ. ಹಾಗೆಯೇ ಹೊಸದಾಗಿ ಮದುವೆಯಾದ ದಂಪತಿಗಳು, ಗೌರಿಯ ದೇವಸ್ಥಾನಕ್ಕೆ ಬಂದು ಮೊದಲ ಬಾಗಿಣವನ್ನು ಅರ್ಪಿಸುತ್ತಾರೆ. ಬಾಗಿಣವನ್ನು ಗೌರಿಗೆ ಅರ್ಪಿಸುವ ಪದ್ದತಿ ಇರುವುದರಿಂದ ನಮ್ಮೂರಿಗೆ ಬರುವ ಬಾಗಿಣಗಳ ಸಂಖ್ಯೆಯೂ ಹೆಚ್ಚು. ಅಂದು ಸಂಜೆ ಊರಮುಂದಿನ ಕರಿಗಲ್ಲು ಎಂದೇ ಕರೆಯಲ್ಪಡುವ ವೀರಗಲ್ಲಿಗೆ ವಿಶೇಷ ಪೂಜೆ ಸಲ್ಲಿಸಿ, ಬಾಳೆ ನಾರಿನಿಂದ ಮಾಡಿದ ಕರಿ(ಹಗ್ಗ)ಯನ್ನು ಎಳೆದು ಅದನ್ನು ಮನೆಯ ಕೊಟ್ಟಿಗೆಯಲ್ಲಿ ಕಟ್ಟುತ್ತಾರೆ. ಹೀಗೆ ಗೌರಿ ಬಂದ ದಿನ ಅನೇಕ ಕಾರ್ಯಕ್ರಮಗಳಿಂದ ಸಂಪನ್ನವಾಗುತ್ತದೆ. ಮಾರನೇ ದಿನ ಅಂದರೆ ಚೌತಿಯಂದು ಗಣೇಶನನ್ನು ತಂದು ಅವನನ್ನು ಗೌರಿಯ ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಒಂದು ಗಮನಾರ್ಹ ವಿಷಯವೆಂದರೆ, ಗಣಪತಿಯು ಗಾತ್ರದಲ್ಲಿ ಗೌರಿಗಿಂತ ಚಿಕ್ಕದಿದ್ದು, ಇದು ತಾಯಿ ಮಗನ ಸಂಬಂಧವನ್ನು ಸೂಚಿಸುತ್ತದೆ. ಗೌರಿ ಬಂದ ದಿನದಿಂದ ವಿಸರ್ಜನೆ ಮುಗಿಯುವವರೆಗೆ, ಊರಲ್ಲಿ ಸಂಭ್ರಮವೇ ಮನೆಮಾಡಿರುತ್ತದೆ. ಗೌರಿಯನ್ನು ತಂದ ದಿನದಿಂದ ವಿಸರ್ಜನೆಯವರೆಗೆ ಮೂರು ನಾಲ್ಕು ಮನೆಗಳ ಜನರು ಪ್ರತಿದಿನದ ಪೂಜೆಯ ಜವಾಬ್ದಾರಿಯನ್ನು ಹೊತ್ತು, ಅಂದಿನ ಪೂಜೆ ಮತ್ತು ಪ್ರಸಾದದ ಕೆಲಸಗಳನ್ನು ನಿಭಾಹಿಸುತ್ತಾರೆ. ಗೌರಿ ವಿಸರ್ಜನೆಯು ಎರಡು ದಿನಗಳ ಹಬ್ಬವಾಗಿದ್ದು ಮೊದಲ ದಿನ, ಸಂಜೆಯಿಂದ ರಾತ್ರಿಯಿಡೀ ಉತ್ಸವಗಳು ನಡೆದರೆ, ಎರಡನೇ ದಿನ ಗೌರಿಯನ್ನು ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ನಿಗದಿತ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈ ಹಬ್ಬಕ್ಕೆ ಊರಿನ ಎಲ್ಲಾ ಹೆಣ್ಣುಮಕ್ಕಳು ಎಲ್ಲಿದ್ದರೂ ಬರುವುದು ವಾಡಿಕೆ. ಹಾಗೆಯೇ ಊರಿನ ಜನರ ಎಲ್ಲಾ ಬಂಧುಗಳು ಈ ಹಬ್ಬಕ್ಕೆ ಬಂದು ಈ ಹಬ್ಬದ ಮೆರುಗನ್ನು ಹೆಚ್ಚಿಸುತ್ತಾರೆ. ಮೊದಲೆಲ್ಲಾ ಒಂಭತ್ತು ದಿನ, ಹನ್ನೆರಡು ದಿನ ಹೀಗೆ ಗೌರಿಯ ವಿಸರ್ಜನೆ ನಡೆಯುತ್ತಿತ್ತು. ಈಗ ಕೆಲವು ವರ್ಷಗಳಿಂದ ಎಲ್ಲಾ ಹೆಣ್ಣುಮಕ್ಕಳು ಅವರ ಕುಟುಂಬದೊಂದಿಗೆ ಬರಲು ಅನುವಾಗುವಂತೆ ಶನಿವಾರ, ಭಾನುವಾರಗಳಂದು ಆಚರಿಸುತ್ತಾ ಬಂದಿದ್ದೇವೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಗೌರಿಯ ಮುಖವನ್ನು ತಾಯಿಗೆ ಮನೆಗೆ ಬರುವ ದಿನದಲ್ಲಿ ನಗುಮುಖದಂತೆಯೂ, ವಿಸರ್ಜನೆಯ ಸಮಯದಲ್ಲಿ ತವರಿನಿಂದ ವಾಪಾಸು ಹೋಗುವಾಗ ಅಳುಮುಖ ಇರುವಂತೆಯೂ ಮಾಡಲಾಗುತ್ತದೆ. ಹಾಗೆಯೇ ಗೌರಿಯ ಬಣ್ಣವನ್ನು ನಾಲ್ಕೈದು ದಿನಕ್ಕೆ ಬದಲಾಯಿಸುತ್ತಾರೆ. ಆಗ ಪ್ರತಿ ಬಾರಿಯೂ ಹೊಸ ಮುಖದಂತೆಯೇ ಭಾಸವಾಗುತ್ತದೆ. ವಿಸರ್ಜನೆಯ ಹಬ್ಬದ ದಿನ ಸಂಜೆ ಹಲವಾರು ಜನಪದ ತಂಡಗಳಿಂದ ಪ್ರದರ್ಶನಗಳು ಇದ್ದು, ನಂತರ ವೇದಿಕೆ ಕಾರ್ಯಕ್ರಮವಿದ್ದು ಅಲ್ಲಿ ಪೂಜ್ಯರಿಂದ ಗೋಷ್ಠಿಗಳು ನಡೆಯುತ್ತವೆ. ನಂತರ ಕೆಲವು ಮನರಂಜನಾ ಕಾರ್ಯಕ್ರಮಗಳು ಕೂಡಾ ನಡೆಯುತ್ತವೆ. ಈಗ ಕೆಲವು ವರ್ಷಗಳಿಂದ ಹಬ್ಬಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಊರಿನ ದೇವಾಲಯದ ಪಕ್ಕದಲ್ಲಿ ದಾಸೋಹದ ವ್ಯವಸ್ಥೆಯನ್ನು ಮಾಡಿ ಎಲ್ಲರೂ ಸಂತೃಪ್ತಿಯಿಂದ ಊಟ ಮುಗಿಸಿ, ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವು ಮಾಡಲಾಗುತ್ತದೆ. ಈ ಎಲ್ಲಾ ಕಾರ್ಯಕಮಗಳ ಆಯೋಜನೆಯಲ್ಲಿ ನಮ್ಮ ಊರಿನ ಎಲ್ಲರೂ ಪಾಲ್ಗೊಂಡರೆ, ಅದರಲ್ಲೂ ಯುವಕರು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿ ಹಬ್ಬ ಸಂಪ್ರದಾಯಿಕವಾಗಿ ವಿಜೃಂಭಣೆಯಿಂದ ನಡೆಯಲು ಕಾರಣವಾಗುತ್ತಾರೆ. ಈ ವಿಜೃಂಭಣೆಯ ಹಬ್ಬ ಈ ವರ್ಷ ಈ 17 ,18 ನಡೆಯಲಿದ್ದು ಎಲ್ಲರನ್ನೂ ಅತ್ಮೀಯವಾಗಿ ಅಹ್ವಾನಿಸುತ್ತೇನೆ.
ಬನ್ನಿ ನಮ್ಮೂರ ಹಬ್ಬದ ಸೊಬಗ ಸವಿಯಲು......
ಜಗದೀಶ ಎಸ್ ಬಿ
ಸಾಣೇನಹಳ್ಳಿ