Panchamasali Jagadguru Peetha,Harihar

Panchamasali Jagadguru Peetha,Harihar Panchamasali Jagadguru Peetha is a Socio Spiritual Organisation.
(2)

21/05/2026
13/05/2026

ಪರಮಪೂಜ್ಯ ಶ್ರೀ ಶ್ರೀ ರವಿಶಂಕರ ಗುರೂಜಿಗಳವರ 70ನೇ ಜನ್ಮದಿನದ ಈ ಪವಿತ್ರ ಸಂದರ್ಭದಲ್ಲಿ, ನನ್ನ ಹೃತ್ಪೂರ್ವಕ ಪ್ರಣಾಮಗಳು, ಆತ್ಮೀಯ ಶುಭಾಶಯಗಳು ಹಾಗೂ ಅನಂತ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಗುರೂಜಿಗಳೇ, ನೀವು ಸದಾ ನಮ್ಮ ಬದುಕಿನ ಪ್ರೇರಣೆ, ಆಶ್ರಯ, ಧೈರ್ಯ ಮತ್ತು ಆತ್ಮಜಾಗೃತಿಯ ದಿವ್ಯ ದೀಪವಾಗಿದ್ದೀರಿ. ನಿಮ್ಮ ಕರುಣಾಮಯ ಸಾನ್ನಿಧ್ಯವು ಲಕ್ಷಾಂತರ ಹೃದಯಗಳಿಗೆ ಶಾಂತಿ, ಪ್ರೀತಿ ಮತ್ತು ನವಚೈತನ್ಯವನ್ನು ನೀಡುತ್ತಿದೆ.

ನಿಮ್ಮ ನಗು ವಿಶ್ವಕ್ಕೆ ಆಶೀರ್ವಾದವಾಗಲಿ, ನಿಮ್ಮ ಉಸಿರು ಮಾನವತೆಯ ಆಶಾಕಿರಣವಾಗಲಿ.
ನಿಮ್ಮ ದಿವ್ಯ ಜೀವನವು ಇನ್ನೂ ಅನೇಕ ಕೋಟಿ ಆತ್ಮಗಳಿಗೆ ಬೆಳಕಾಗಲಿ.

12/05/2026
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ (ಹರಪೀಠ) ದಿಂದ ಉಚ್ಛಾಟಿತಗೊಂಡ ಪ್ರಧಾನ ಧರ್ಮದರ್ಶಿಗೆದಾಸೋಹ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ...
11/05/2026

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ (ಹರಪೀಠ) ದಿಂದ ಉಚ್ಛಾಟಿತಗೊಂಡ ಪ್ರಧಾನ ಧರ್ಮದರ್ಶಿಗೆ
ದಾಸೋಹ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಶ್ರೀ ಪ್ರಕಾಶ ಪಾಟೀಲ ಅವರು ಬರೆದ ಬಹಿರಂಗ ಪತ್ರ

ಧರ್ಮವೆಂಬುದು ಕೇವಲ ಅಧಿಕಾರದ ಆಸನವಲ್ಲ; ಅದು ಆಚಾರ, ಆತ್ಮನಿಷ್ಠೆ, ಗುರುಭಕ್ತಿ ಮತ್ತು ಸಮಾಜದ ವಿಶ್ವಾಸದ ಮೇಲಿರುವ ದಿವ್ಯ ಹೊಣೆಗಾರಿಕೆ.
ಗುರುಪೀಠವೆಂಬುದು ಅನಾದಿಕಾಲದಿಂದಲೂ ಶರಣ ಸಂಸ್ಕೃತಿಯ ತಪೋಭೂಮಿ. ಅಲ್ಲಿ ವ್ಯಕ್ತಿಗಿಂತ ಮೌಲ್ಯ ದೊಡ್ಡದು, ಸ್ಥಾನಕ್ಕಿಂತ ಶಿಸ್ತು ದೊಡ್ಡದು, ಅಧಿಕಾರಕ್ಕಿಂತ ಅಧ್ಯಾತ್ಮ ದೊಡ್ಡದು.

ಈ ಹಿನ್ನೆಲೆಯಲ್ಲಿಯೇ, ಹರಿಹರ ಹರಪೀಠದ ಶಿಸ್ತು, ಪರಂಪರೆ ಮತ್ತು ಧಾರ್ಮಿಕ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಉಚ್ಛಾಟಿತಗೊಂಡ ಪ್ರಧಾನ ಧರ್ಮದರ್ಶಿಗೆ, ಹರಪೀಠದ ದಾಸೋಹ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಶ್ರೀ ಪ್ರಕಾಶ ಪಾಟೀಲ ಅವರು ತತ್ವನಿಷ್ಠ, ಕಾನೂನುಬದ್ಧ ಹಾಗೂ ಧರ್ಮಸಮ್ಮತವಾದ ಬಹಿರಂಗ ಪತ್ರವನ್ನು ಬರೆದು ತಮ್ಮ ಸ್ಪಷ್ಟವಾಗಿ ಪ್ರಶ್ನೆಗಳನ್ನು ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

10/05/2026

ಕುಡಿದ ಮತ್ತಿನಲ್ಲಿ ದೂರು ನೀಡಿರುವ ಉಚ್ಚಾಟಿತ ಕಿಂಗ್ ಪಿನ್ ಕಾರ್ಯದರ್ಶಿ ಹಾಗೂ ಉಚ್ಚಾಟಿತ ಗುಳುಂಪತಿ.

10/05/2026

ಉಚ್ಚಾಟಿತ ಗುಳುಂಪತಿಯು ಸಹಚರರನ್ನು ಕಟ್ಟಿಕೊಂಡು ತನ್ನ ಅವ್ಯವಹಾರಕ್ಕೆ ಪೀಠವನ್ನು ಟ್ರಸ್ಟ್ ಮುಖಾಂತರ ದೂರುಪಯೋಗಿಸಿಕೊಂಡಿರುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.

ಹಸ್ತಮಸ್ತಕ ಸಂಯೋಗ — ನಾದಬ್ರಹ್ಮದ ದಿವ್ಯಸ್ಪರ್ಶಅಥಣಿ- ಅದು ಕೇವಲ ಒಂದು ಪಟ್ಟಣವಲ್ಲ; ಜಂಗಮಚೈತನ್ಯದ ನಾಡಿ ತಟ್ಟುವ ಪುಣ್ಯಕ್ಷೇತ್ರ. ಮುಂಜಾವಿನ ಮಂ...
08/05/2026

ಹಸ್ತಮಸ್ತಕ ಸಂಯೋಗ — ನಾದಬ್ರಹ್ಮದ ದಿವ್ಯಸ್ಪರ್ಶ

ಅಥಣಿ- ಅದು ಕೇವಲ ಒಂದು ಪಟ್ಟಣವಲ್ಲ; ಜಂಗಮಚೈತನ್ಯದ ನಾಡಿ ತಟ್ಟುವ ಪುಣ್ಯಕ್ಷೇತ್ರ. ಮುಂಜಾವಿನ ಮಂಜು ಇನ್ನೂ ಕರಗದ ಹೊತ್ತಿನಲ್ಲಿ ಪೇಟೆಯ ಬೀದಿಗಳು ಹೂವು, ಕಾಯಿ, ಕರ್ಪೂರ, ಬಾಳೆಗೊನೆಗಳ ಮಂಗಳಸಿಂಗಾರದಿಂದ ತುಂಬಿ ತುಳುಕುತ್ತಿದ್ದವು. ಪ್ರತಿಯೊಂದು ಮನೆಯ ಬಾಗಿಲಲ್ಲೂ ಶಿವನಾಮದ ಸ್ಪಂದನೆ, ಪ್ರತಿಯೊಂದು ಗಾಳಿಯ ಅಲೆಗಳಲ್ಲೂ ಭಕ್ತಿಯ ಪರಿಮಳ. ಮಹಾತಪಸ್ವಿ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ತಪೋಭೂಮಿಯಾದ ಶ್ರೀ ಗಚ್ಚಿನಮಠದಲ್ಲಿ ಮಹಾಶಿವರಾತ್ರಿಯ ಸಡಗರವು ಕೇವಲ ಉತ್ಸವವಾಗಿರಲಿಲ್ಲ. ಅದು ಶಿವತತ್ತ್ವವೇ ಮಾನವರೂಪದಲ್ಲಿ ಅವತರಿಸಿದಂತ ಅನುಭವ.

ಇಂದಿಗೂ ಕಣ್ಣುಮುಚ್ಚಿದರೆ ಆ ದಿನದ ಪ್ರತಿಯೊಂದು ದೃಶ್ಯ ನನ್ನೊಳಗೆ ಮರುಜೀವ ಪಡೆಯುತ್ತದೆ. ಆ ಮಹಾಶಿವರಾತ್ರಿ ನನ್ನ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ದಿವ್ಯಕ್ಷಣ. ಆ ದಿನದಿಂದ ನನ್ನ ಜೀವನ ಕೇವಲ ನನ್ನದೇ ಆಗಿರಲಿಲ್ಲ; ಅದು ಗುರುಪರಂಪರೆಯ, ಯೋಗಪರಂಪರೆಯ, ಹರಪಥದ ಮಹಾಯಾತ್ರೆಯ ಭಾಗವಾಯಿತು.

ಗುರುಜೋಳಿಗೆಗೆ ಸಮರ್ಪಿತವಾದ ಬಾಲ್ಯ…..

ಪ್ರಾತಃಕಾಲದ ಬ್ರಹ್ಮಮುಹೂರ್ತ. ಪೂರ್ವಾಶ್ರಮದ ತಂದೆತಾಯಿಗಳು ನನ್ನನ್ನು ಜನ್ಮಸ್ಥಳ ತಾಂವಶಿಯಿಂದ ಅಥಣಿಯ ಶ್ರೀ ಗಚ್ಚಿನಮಠಕ್ಕೆ ಕರೆದುಕೊಂಡು ಬಂದಿದ್ದರು. ನನ್ನನ್ನು ಶ್ರೀ ಗಚ್ಚಿನಮಠದ ಮರಿದೇವರಾಗಿ ಮೌನಯೋಗಿ ಶ್ರೀ ಮರುಳಶಂಕರ ಮಹಾಶಿವಯೋಗಿಗಳವರ ಜೋಳಿಗೆಗೆ ಸಮರ್ಪಿಸುವ ದಿನ ಅದು. ಬಾಲಮನಸ್ಸಿಗೆ ಆ ಕ್ಷಣದ ಆಳ ತಿಳಿದಿರಲಿಲ್ಲ; ಆದರೆ ಇಂದು ನೆನೆಸಿಕೊಂಡರೆ ಅದು ಸಾಮಾನ್ಯ ಸಮರ್ಪಣೆ ಅಲ್ಲ. ಒಂದು ಆತ್ಮವನ್ನು ಗುರುಕೃಪೆಯ ಅಗ್ನಿಯಲ್ಲಿ ಅರ್ಪಿಸಿದ ದಿವ್ಯಸಂಸ್ಕಾರ.
ನನ್ನ ತಲೆ ಮುಂಡನ ಮಾಡಿಸಲಾಯಿತು. ಅಭ್ಯಂಜನ ಸ್ನಾನ ಮಾಡಿಸಲಾಯಿತು. ಬಿಳಿವಸ್ತ್ರದ ಕೌಪೀನ ಧರಿಸಿ, ಅಪಾದಮಸ್ತಕದವರೆಗೆ ಭಸ್ಮ ಲೇಪಿಸಲಾಯಿತು. ಆಗ ನನಗೆ ಏನಾಗುತ್ತಿದೆ ಎಂಬುದು ಅರ್ಥವಾಗಿರಲಿಲ್ಲ; ಆದರೆ ಸುತ್ತಲಿನವರ ಕಣ್ಣುಗಳಲ್ಲಿ ಭಕ್ತಿ, ಭಾವುಕತೆ, ಗೌರವದ ಅಲೆಗಳು ಸ್ಪಷ್ಟವಾಗಿದ್ದವು. ವಚನ, ವೇದಮಂತ್ರಗಳ ಘೋಷಗಳ ಮಧ್ಯೆ ನನ್ನನ್ನು ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಲಿಂಗಶರೀರ ಲೀನವಾದ ಮಹಾಸಮಾಧಿಯ ಐಕ್ಯಮಂಟಪದೊಳಗೆ ಕರೆದುಕೊಂಡು ಹೋದರು.

ಮಹಾಸಮಾಧಿಯೊಳಗಿನ ಆ ದಿವ್ಯ ಮೌನ…..

ಆ ಸಮಾಧಿಯೊಳಗಿನ ವಾತಾವರಣವೇ ಬೇರೆ ಲೋಕದ ಅನುಭವ. ದೀಪಜ್ಯೋತಿಗಳ ಮೃದುಪ್ರಕಾಶ, ಧೂಪದ ಪರಿಮಳ, ಮಂತ್ರಗಳ ಘಂಭೀರ ನಾದ, ಯೋಗಿಗಳ ಮೌನ- ಇವೆಲ್ಲ ಸೇರಿ ಆ ಸ್ಥಳವನ್ನು ಭೂಲೋಕದ ಕೈಲಾಸವನ್ನೇ ಮಾಡಿದ್ದವು. ಅಲ್ಲಿ ಮಹಾಲಿಂಗ ಚೈತನ್ಯಕ್ಕೆ ಮಹಾರುದ್ರಾಭಿಷೇಕ ಆರಂಭವಾಯಿತು. ಪಂಚಾಮೃತಗಳ ಹರಿವು ಲಿಂಗದ ಮೇಲೆ ಬೀಳುವಾಗ ಅದು ಕೇವಲ ಅಭಿಷೇಕವಾಗಿರಲಿಲ್ಲ; ಶಿವತತ್ತ್ವವೇ ಜೀವಂತವಾಗಿ ನನ್ನೊಳಗೆ ಹರಿದುಬರುತ್ತಿರುವಂತೆ ಅನಿಸುತ್ತಿತ್ತು.

ಒಂದು ಮಗು- ಒಂದು ಹೊಸ ಜನ್ಮ…..

ದೀರ್ಘಕಾಲ ಪೂಜೆ ನಡೆದ ನಂತರ ನನ್ನನ್ನು ಗದ್ದುಗೆ ಮುಂಭಾಗದ ಹಸಿಮಣೆಯ ಮೇಲೆ ಕೂಡಿಸಿದರು. ನಂತರ ಪಂಚಾಭಿಷೇಕ ಜಲದಿಂದ ನನ್ನ ಮಹಾಮಸ್ತಕಾಭಿಷೇಕ ಆರಂಭವಾಯಿತು. ಹತ್ತಾರು ಪುರೋಹಿತರು ಮಂತ್ರೋಚ್ಚಾರಣೆ ಮಾಡುತ್ತಿದ್ದರು. ಪೂರ್ವಾಶ್ರಮದ ಬಂಧುಬಳಗ, ಭಕ್ತರು, ಮಠದ ಸದ್ಭಕ್ತರು ಎಲ್ಲರೂ ಏಕದೃಷ್ಟಿಯಿಂದ ನೋಡುತ್ತಿದ್ದರು. ವಿಶೇಷವಾಗಿ ನನ್ನ ತಂದೆತಾಯಿಗಳ ಕಣ್ಣುಗಳಲ್ಲಿ ಆನಂದಾಶ್ರುಗಳ ನದಿಯೇ ಹರಿಯುತ್ತಿತ್ತು. ಆ ದೃಶ್ಯ ನನ್ನ ಕಣ್ಣಾಲಿಯನ್ನೂ ತೇವಗೊಳಿಸಿತು. ಆಗ ಏಕೆ ಅಳುತ್ತಿದ್ದೆ ಎಂಬುದು ನನಗೆ ಗೊತ್ತಿರಲಿಲ್ಲ; ಬಹುಶಃ ಒಂದು ಮಗು ತನ್ನ ಹಳೆಯ ಜೀವನದ ಸಂಕೋಲೆಗಳನ್ನು ಬಿಟ್ಟು ಗುರುಪಥದಲ್ಲಿ ಹೊಸ ಜನ್ಮ ತಳೆಯುತ್ತಿದ್ದಿರಬಹುದು.

ಭಿಕ್ಷಾಟನೆಯ ಮೊದಲ ಹೆಜ್ಜೆ……

ಸ್ನಾನ ಮುಗಿದ ನಂತರ ಮತ್ತೆ ಶ್ವೇತವಸ್ತ್ರದ ಕೌಪೀನ, ಬಿಳಿ ಪಂಜೆ ಉಡಿಸಿ, ಮೇಲಾಗಿ ಕಾವಿ ಕಾಷಾಯ ಹೊದಿಸಲಾಯಿತು. ಮೌನಯೋಗಿ ಶ್ರೀ ಮರುಳಶಂಕರ ಮಹಾಶಿವಯೋಗಿಗಳವರು ತಮ್ಮ ಲಿಂಗಹಸ್ತದಿಂದ ಒಂದು ಕೈಯಲ್ಲಿ ಕಾವಿ ಜೋಳಿಗೆ, ಇನ್ನೊಂದು ಕೈಯಲ್ಲಿ ಬಿದಿರಿನ ಬೆತ್ತ ಹಿಡಿಯಿಸಿದರು. ಗಚ್ಚಿನಮಠದ ವಟಾರದಲ್ಲಿರುವ ಐದು ಮನೆಗಳಿಗೆ ಭಿಕ್ಷಾಟನೆ ಮಾಡಿಸಿದರು.
ಆ ದಿವ್ಯಮುಖದ ಮೊದಲ ದರ್ಶನ
ಭಿಕ್ಷಾನ್ನಗಳೊಂದಿಗೆ ಮರಳಿ ಮಠಕ್ಕೆ ಬಂದ ಮೇಲೆ ನನ್ನನ್ನು ನೇರವಾಗಿ ಪೂಜಾಮಂದಿರದೊಳಗೆ ಕರೆದುಕೊಂಡು ಹೋದರು.ಅಲ್ಲಿ ಶ್ರೀ ಮರುಳಶಂಕರ ಮಹಾಶಿವಯೋಗಿಗಳವರು ಅಷ್ಟವಿಧಾರ್ಚನೆ, ಷೋಡಶೋಪಚಾರಗಳೊಂದಿಗೆ ಇಷ್ಟಲಿಂಗ ಮಹಾಪೂಜೆ ಆರಂಭಿಸಿದರು. ಆ ಪೂಜಾಮಂದಿರದಲ್ಲಿ ನನ್ನ ದೃಷ್ಟಿ ಸೆಳೆದದ್ದು ಒಬ್ಬ ವಯೋವೃದ್ಧ ಸನ್ಯಾಸಿ. ತೊಂಬತ್ತರ ಹರೆಯ ದಾಟಿದ ದೇಹ, ಆದರೆ ಮುಖದಲ್ಲಿ ಅದ್ಭುತ ದಿವ್ಯತೇಜ. ಅಗಲವಾದ ಹಣೆ. ಸೂರ್ಯನಂತ ಪ್ರಕಾಶಿಸುವ ಕಣ್ಣುಗಳು. ಆದರೆ ಅದೇ ಸಮಯದಲ್ಲಿ ಅಸೀಮ ಕರುಣೆ. ಅವರ ಮುಗುಳುನಗೆಯಲ್ಲಿ ಅನಿರ್ವಚನೀಯ ಶಾಂತಿ ಇತ್ತು. ಅವರ ಸುತ್ತಲೂ ಹರಗುರು ಚರಮೂರ್ತಿಗಳ ದಿವ್ಯಸಾನ್ನಿಧ್ಯವೇ ಮೌನವಾಗಿ ತಂಗಿದಂತ ಅನುಭವ.

ಹಸ್ತಮಸ್ತಕ ಸಂಯೋಗ…..

ಇಷ್ಟಲಿಂಗ ಮಹಾಪೂಜೆ ಪೂರ್ಣವಾಯಿತು. ಪಕ್ಕದಲ್ಲಿದ್ದ ಆ ವಯೋವೃದ್ಧ ಸನ್ಯಾಸಿಗಳು ಗುರುಗಳ ಪಾದಪೂಜೆ ಮಾಡಲು ಅಪ್ಪಣೆ ಮಾಡಿದರು. ಸೇವಾಮೂರ್ತಿಯು ಕ್ರಿಯಾಪಾದೋದಕ ಮಾಡುವ ವಿಧಾನವನ್ನು ತಿಳಿಸಿಕೊಟ್ಟನು. ಮಹಾಮಂಗಳದೊಂದಿಗೆ ಪಾದೋದಕವನ್ನು ಇಷ್ಟಲಿಂಗಕ್ಕೆ ಸಮರ್ಪಿಸಿ ಸ್ವೀಕರಿಸಿದೆನು. ನಂತರ ಗುರುಗಳವರು ಶೇಷಪ್ರಸಾದ ಕರುಣಿಸಿದರು. ಗುರುಗಳೊಂದಿಗೆ ಪ್ರಸಾದ ಸ್ವೀಕರಿಸಿದ ಆ ಕ್ಷಣವೂ ನನ್ನೊಳಗೆ ಅಚ್ಚೊತ್ತಿದಂತಿದೆ.
ಪ್ರಸಾದದ ನಂತರ ಆ ವಯೋವೃದ್ಧ ಸನ್ಯಾಸಿಗಳ ಪಾದಕ್ಕೆರಗಿ ನಮಸ್ಕರಿಸಿದೆ. ಅವರು ನನ್ನ ಶಿರದ ಮೇಲೆ ಹಸ್ತವಿಟ್ಟು ಹಸ್ತಮಸ್ತಕ ಸಂಯೋಗ ಮಾಡಿದರು.
ಆ ಕ್ಷಣದಲ್ಲಿ ನನ್ನೊಳಗೆ ಎಂದೂ ಅನುಭವಿಸದ ಶಾಂತಿ ನೆಲೆಸಿತು. ಮೌನಾನಂದದ ಒಂದು ಅಲೆ ಸಂಪೂರ್ಣ ಅಸ್ತಿತ್ವವನ್ನು ಆವರಿಸಿತು. ಇಂದಿಗೂ ಆ ಕ್ಷಣವನ್ನು ನೆನೆಸಿಕೊಂಡರೆ ಅದು ಸಾಮಾನ್ಯ ಆಶೀರ್ವಾದವಲ್ಲ- ಗುರುಶಕ್ತಿಯ ನೇರ ಸ್ಪರ್ಶವೆಂದು ಅನಿಸುತ್ತದೆ.
“ಅವರು ನಿನಗೆ ನಮಸ್ಕರಿಸುತ್ತಿಲ್ಲ!”
ಮಹಾಶಿವರಾತ್ರಿ ಇಡೀ ದಿನ ಸಂಭ್ರಮದಿಂದ ಕಳೆಯಿತು. ಸಹಸ್ರಾರು ಭಕ್ತರು ಕಾಣಿಕೆ ನೀಡಿ ನಮಸ್ಕರಿಸುತ್ತಿದ್ದರು. ಪ್ರತಿಯೊಬ್ಬರೂ ಪಾದಸ್ಪರ್ಶಿಸಿದಾಗ ನನಗೆ ತುಂಬ ಮುಜುಗರವಾಗುತ್ತಿತ್ತು. ಆಗ ಗುರುಗಳು ಮೃದುವಾಗಿ ಹೇಳಿದರು:
“ಅವರು ನಿನಗೆ ನಮಸ್ಕರಿಸುತ್ತಿಲ್ಲ;
ನಿನ್ನ ಲಾಂಛನಕ್ಕೆ,
ನಿನ್ನೊಳಗಿರುವ ಗುರುಪರಂಪರೆಯ ಚೈತನ್ಯಕ್ಕೆ ನಮಸ್ಕರಿಸುತ್ತಿದ್ದಾರೆ!” ಆ ಮಾತಿನ ನಂತರ ಆ ಅನುಭವವೂ ನಿಧಾನವಾಗಿ ಸಹಜವಾಯಿತು.

ನಾದಯೋಗಿಯ ತಬಲಾ ನಿನಾದ.…..

ಸಂಜೆಯಾಗುತ್ತಿದ್ದಂತೆ ಮಠದ ಮುಂಭಾಗದಲ್ಲಿ ಸಂಗೀತಕಛೇರಿ ಆರಂಭವಾಯಿತು. ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರು ಸೇರಿದಂತೆ ನಾಡಿನ ಅನೇಕ ಮಹಾನ್ ಸಂಗೀತಸಾಧಕರು ಉಪಸ್ಥಿತರಿದ್ದರು. ವಚನಗಾನ, ಭಕ್ತಿಗೀತೆ, ನಾದಾರಾಧನೆ-ಇಡೀ ವಾತಾವರಣವೇ ಮುರುಘೇಶ ಬಸವೇಶಮಯ.ಆದರೆ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ್ದು ಒಂದು ಅಪೂರ್ವ ದೃಶ್ಯ.
ಒಂದು ಕಡೆ ಶ್ರೀ ಮರುಳಶಂಕರ ಮಹಾಶಿವಯೋಗಿಗಳವರು ಹಾರ್ಮೋನಿಯಂ ನುಡಿಸುತ್ತಿದ್ದರು. ಪಕ್ಕದಲ್ಲೇ ಆ ವಯೋವೃದ್ಧ ಸನ್ಯಾಸಿಗಳು ತಬಲಾ ನುಡಿಸುತ್ತಿದ್ದರು. ಅವರ ತಬಲಾವಾದನ ವೈಖರಿ ಸಾಮಾನ್ಯ ಸಂಗೀತವಾಗಿರಲಿಲ್ಲ; ಅದು ನಾದಯೋಗದ ಪರಮಾವಸ್ಥೆ. ಅವರ ಬೆರಳುಗಳು ತಬಲೆಯನ್ನು ಸ್ಪರ್ಶಿಸಿದಾಗ ನನ್ನ ನರನಾಡಿಗಳಲ್ಲೇ ಓಂಕಾರದ ಕಂಪನ ಮೂಡುತ್ತಿರುವಂತೆ ಅನಿಸುತ್ತಿತ್ತು. ಹಂಪಿಯ ಕಲ್ಲುಕಂಭಗಳಲ್ಲಿ ಸಪ್ತಸ್ವರಗಳು ಮೂಡುವಂತೆ, ಆ ಮಂಟಪದ ಕಂಬಗಳೂ ನಾದಬ್ರಹ್ಮಕ್ಕೆ ಸ್ಪಂದಿಸುತ್ತಿರುವಂತೆ ಭಾಸವಾಗುತ್ತಿತ್ತು.
ಇಡೀ ರಾತ್ರಿ ಶಿವನಾಮ, ವಚನಗಾನ, ಭಜನೆ, ನಾದಾರಾಧನೆ ನಿರಂತರವಾಗಿ ಸಾಗಿತು. ಅದು ನನ್ನ ಬದುಕಿನಲ್ಲಿ ಮೊದಲ ಬಾರಿಗೆ ನಿದ್ರೆ ಮಾಡದೆ ಆಚರಿಸಿದ ಮಹಾಶಿವರಾತ್ರಿ.
“ಮಾತೆಂಬುದು ಜ್ಯೋತಿರ್ಲಿಂಗ”
ಬೆಳಗಿನ ಐದು ಗಂಟೆಗೆ ಮಹಾಮಂಗಳಾರತಿ ನಡೆಯಿತು. ಆರತಿಯ ನಂತರ ಸದ್ಭಕ್ತರು ಸಾಲಾಗಿ ಬಂದು ಚುರುಮುರಿ, ಕೊಬ್ಬರಿ, ಬೆಲ್ಲದ ಪ್ರಸಾದವನ್ನು ಶ್ರೀ ಮರುಳಶಂಕರ ಮಹಾಶಿವಯೋಗಿಗಳವರ ಹಾಗೂ ಆ ವಯೋವೃದ್ಧ ಸನ್ಯಾಸಿಗಳ ಲಿಂಗಹಸ್ತದಿಂದ ಸ್ವೀಕರಿಸುತ್ತಿದ್ದರು.
ಕೊನೆಯಲ್ಲಿ ನನ್ನ ಸರದಿ ಬಂತು.
ಮೊದಲು ಶ್ರೀ ಮರುಳಶಂಕರ ಮಹಾಶಿವಯೋಗಿಗಳವರ ಪಾದಕ್ಕೆರಗಿ ಆಶೀರ್ವಾದ ಪಡೆದೆ. ನಂತರ ಆ ವಯೋವೃದ್ಧ ಸನ್ಯಾಸಿಗಳ ಪಾದಕ್ಕೆರಗಿದೆ. ನನ್ನ ಶಿರದ ಮೇಲೆ ಕರವನ್ನಿಟ್ಟು ಅವರು ಆಶೀರ್ವದಿಸಿದರು.
ನಂತರ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ವಿರಕ್ತಪರಂಪರೆಯ ಮೂಲಪುರುಷ ಅಲ್ಲಮಪ್ರಭುವಿನ ವಚನವನ್ನು ಭಾವಪರವಶರಾಗಿ ಉಚ್ಚರಿಸಿದರು:
“ಮಾತೆಂಬುದು ಜ್ಯೋತಿರ್ಲಿಂಗ,
ಸ್ವರವೆಂಬುದು ಪರತತ್ವ;
ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ.
ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ, ಕೇಳಾ ಮರುಳೆ”

ಆಗ ಆ ವಚನದ ಆಳ ನನಗೆ ಅರಿವಿರಲಿಲ್ಲ. ಆದರೆ ನಂತರ ತಿಳಿಯಿತು. ಯೋಗಿಗಳ ಮಾತುಗಳು ಶಬ್ದಗಳಲ್ಲ; ಅವು ಕಾಲದ ಗರ್ಭದಲ್ಲಿ ಬಿತ್ತಲ್ಪಟ್ಟ ದೈವಸಂಕಲ್ಪದ ಬೀಜಗಳು.

ನಂತರ ಆ ಮಹಾತ್ಮರನ್ನು ಮತ್ತೆಂದು ನೋಡಲಿಲ್ಲ. ಹಲವು ಬಾರಿ ಗುರುಗಳ ಬಳಿ ಹೋಗಿ ಅವರು ಯಾರು ಎಂದು ಕೇಳುತ್ತಿದ್ದೆ. ಆಗ ಗುರುಗಳು ವಿಶ್ವಗುರು ಬಸವಣ್ಣನವರ ವಚನವನ್ನು ಉದ್ಗರಿಸಿದರು:
“ಎನ್ನ ಕಾಯವ ದಂಡಿಗೆಯ ಮಾಡಯ್ಯಾ
ಎನ್ನ ಶಿರವ ಸೋರೆಯ ಮಾಡಯ್ಯಾ
ಎನ್ನ ನರವ ತಂತಿಯ ಮಾಡಯ್ಯಾ
ಎನ್ನ ಬೆರಳ ಕಡ್ಡಿಯ ಮಾಡಯ್ಯಾ
ಬತ್ತೀಸ ರಾಗವ ಪಾಡಯ್ಯಾ
ಉರದಲೊತ್ತಿ ಬಾರಿಸು
ಕೂಡಲಸಂಗಮದೇವಾ’

ನಂತರ ಗುರುಗಳು ಹೇಳಿದರು:
“ಆ ವಚನದಂತೆ ಬದುಕಿದ ಅಪರೂಪದ ನಾದಯೋಗಿಗಳು ಅವರು. ದೇವಭೂಮಿ ಋಷಿಕೇಶದ ಪರಮಪೂಜ್ಯ ಶ್ರೀ ಸ್ವಾಮಿ ಶಿವಾನಂದರಿಂದ ಸನ್ಯಾಸದೀಕ್ಷೆ ಸ್ವೀಕರಿಸಿ ‘ಸ್ವಾಮಿ ನಾದಬ್ರಹ್ಮಾನಂದ’ ಎಂಬ ಅಭಿದಾನದಿಂದ ಪ್ರಸಿದ್ಧರಾದ ನಾದಲೋಕದ ಮಹಾಸಾಧಕರು. ಅವರು ಈಗ ‘ದಿವ್ಯಜೀವನ ಸಂಘ’ ಆಶ್ರಮದಲ್ಲಿ ನೆಲೆಸಿದ್ದಾರೆ. ಇದು ಕರ್ನಾಟಕದ ಅವರ ಕೊನೆಯ ಯೋಗಯಾತ್ರೆಯಾಗಿತ್ತು.”

ಗುರುಗಳ ಆ ಮಾತುಗಳನ್ನು ಕೇಳಿದ ಕ್ಷಣದಲ್ಲಿ ನನ್ನೊಳಗೆ ಅಮೂಲ್ಯ ರತ್ನವೊಂದು ಕಣ್ಮರೆಯಾದ ಭಾವನೆ ಮೂಡಿತು. ಕೆಲವರು ಬದುಕಿನಲ್ಲಿ ಕ್ಷಣಕಾಲ ಮಾತ್ರ ಕಾಣಿಸಿಕೊಳ್ಳುತ್ತಾರೆ; ಆದರೆ ಅವರ ಒಂದು ಸ್ಪರ್ಶವೇ ಒಂದು ಜನ್ಮದ ದಿಕ್ಕನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಆ ಕ್ಷಣದಿಂದ ಪೂಜ್ಯ ಸ್ವಾಮಿ ನಾದಬ್ರಹ್ಮಾನಂದಜೀಯವರ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆಂಬ ದಾಹ ನನ್ನೊಳಗೆ ನಿಧಾನವಾಗಿ ಅಲ್ಲ. ಯಜ್ಞಾಗ್ನಿಯಂತೆ ಹೊತ್ತಿ ಉರಿಯತೊಡಗಿತು.

ಅವರ ಕಣ್ಣುಗಳಲ್ಲಿ ಕಂಡ ಆ ದಿವ್ಯನಿಶ್ಶಬ್ದ, ಅವರ ತಬಲೆಯ ನಾದದಲ್ಲಿ ಅನುಭವಿಸಿದ ಆ ಪರಮಸ್ಪಂದನ, ಅವರ ಹಸ್ತಮಸ್ತಕ ಸಂಯೋಗದಲ್ಲಿ ದೊರೆತ ಆ ಮೌನಾನಂದ - ಇವೆಲ್ಲವೂ ನನ್ನ ಅಂತರಂಗದಲ್ಲಿ ಅಳಿಸಲಾಗದ ಗುರುತು ಮೂಡಿಸಿಬಿಟ್ಟಿದ್ದವು. ಕೆಲವೊಮ್ಮೆ ಒಂದು ಕ್ಷಣದ ದರ್ಶನವೇ ಒಂದು ಜೀವಮಾನವಿಡೀ ಆತ್ಮವನ್ನು ಹಿಂಬಾಲಿಸುತ್ತದೆ; ನಾದಬ್ರಹ್ಮಾನಂದಜೀಯವರ ಸಾನ್ನಿಧ್ಯವೂ ನನ್ನ ಪಾಲಿಗೆ ಅಂಥದೇ ಆಗಿತ್ತು.

ಆ ಅಂತರಾಳದ ಹಂಬಲವನ್ನು ಒಂದು ದಿನ ಗುರುಗಳ ಬಳಿ ಅಭಿವ್ಯಕ್ತಪಡಿಸಿದೆನು. ಗುರುಗಳು ಕ್ಷಣಕಾಲ ಮೌನವಾಗಿ ನನ್ನನ್ನು ನೋಡಿದರು. ಅವರ ಕಣ್ಣಲ್ಲಿ ವಿಚಿತ್ರ ಕರುಣೆ ಮತ್ತು ಅಲೌಕಿಕ ನಿಶ್ಚಿತತೆ ಹೊಳೆಯುತ್ತಿತ್ತು. ನಂತರ ಮೃದುವಾಗಿ ಹೇಳಿದರು:“ಸೂಕ್ತ ಸಮಯದಲ್ಲಿ-ಕಾಲವೇ ಉತ್ತರಿಸುತ್ತದೆ.”
ಆ ಒಂದು ವಾಕ್ಯ ಆಗ ಅಷ್ಟಾಗಿ ಅರ್ಥವಾಗಿರಲಿಲ್ಲ. ಆದರೆ ಇಂದು ಅರಿವಾಗಿದೆ. ಮಹಾಯೋಗಿಗಳ ಮಾತುಗಳು ಭವಿಷ್ಯದ ದಾರಿಯಲ್ಲಿ ಬೆಳಗುವ ದೀಪಗಳು.

ಋಷಿಕೇಶದಲ್ಲಿ ನಡೆದ ಆ ಪುನರ್ಮಿಲನ….

ಹಲವು ವರ್ಷಗಳು ಕಳೆಯಿತು. ಒಂದು ದಿನ ಅನಿರೀಕ್ಷಿತವಾಗಿ ದೇವಭೂಮಿ ಋಷಿಕೇಶವೇ ನನ್ನನ್ನು ಕರೆಯತೊಡಗಿತು. ಗಂಗೆಯ ನಿನಾದ, ಹಿಮಾಲಯದ ಮೌನ, ಋಷಿಗಳ ಸಂಚರಿಸಿದ ಆಕಾಶ-ಎಲ್ಲವೂ ಒಳಗಿಂದಲೇ ಕರೆಯುತ್ತಿರುವಂತೆ ಅನಿಸಿತು. ಕೊನೆಗೆ ವಿಧಿಯ ಆಮಂತ್ರಣಕ್ಕೆ ತಲೆಬಾಗಿ ‘ದಿವ್ಯ ಜೀವನ ಸಂಘ’ ಆಶ್ರಮದ ಪವಿತ್ರ ಭೂಮಿಗೆ ಪಾದಾರ್ಪಣೆ ಮಾಡಿದೆನು.
ಆ ಕ್ಷಣದಲ್ಲಿ ನನ್ನೊಳಗೆ ವಿಚಿತ್ರ ಅನುಭವವೊಂದು ಮೂಡಿತು. ನಾನು ಹೊಸ ಸ್ಥಳಕ್ಕೆ ಬಂದಂತೆ ಅನಿಸಲಿಲ್ಲ; ಬಹುಕಾಲದ ನಂತರ ನನ್ನ ಆತ್ಮವೇ ತನ್ನ ಹಳೆಯ ನೆಲೆಗೆ ಮರಳಿದಂತ ಭಾಸವಾಯಿತು.
ನೇರವಾಗಿ ಪರಮಪೂಜ್ಯ ಸ್ವಾಮಿ ಶಿವಾನಂದ ಮಹಾರಾಜರ ಮಹಾಸಮಾಧಿಯ ಅಡಿಗೆ ಎಡೆಯಾಗಿ ಧ್ಯಾನಕ್ಕೆ ಕುಳಿತೆನು. ಅಲ್ಲಿ ಮೌನಕ್ಕೂ ನಾದವಿತ್ತು. ಗಂಗೆಯ ಅಲೆಗಳಿಗೂ ಮಂತ್ರಸ್ವರವಿತ್ತು. ಕಣ್ಣು ಮುಚ್ಚಿದ ಕ್ಷಣವೇ ಉಸಿರು ನಿಧಾನವಾಗಿ ಓಂಕಾರದಲ್ಲಿ ಲೀನವಾಯಿತು. ಷಟ್ಚಕ್ರಗಳ ಅಂತರಾಳದಲ್ಲಿ ಅನಾಹತ ನಾದ ಜಾಗೃತವಾಗತೊಡಗಿತು. ದೇಹ ಎಂಬ ಭಾವನೆ ಕರಗಿತು. ಕೇವಲ ನಾದ ಮಾತ್ರ ಉಳಿಯಿತು. ಅದು ಹೊರಗಿಂದ ಕೇಳಿಬರುತ್ತಿರಲಿಲ್ಲ; ಅದು ಆತ್ಮದ ಗರ್ಭದಿಂದಲೇ ಉದ್ಭವಿಸುತ್ತಿತ್ತು.

ಬ್ರಹ್ಮಚಾರಿಯ ಮುಗುಳುನಗೆ ಕರೆಯಿತು.....

ಧ್ಯಾನದಿಂದ ಹೊರಬಂದು ಆಶ್ರಮದ ಆವರಣದಲ್ಲಿ ನಿಧಾನವಾಗಿ ನಡೆಯತೊಡಗಿದೆನು. ಆಗ ಮೊದಲಿಗೆ ನನ್ನ ಕಣ್ಣಿಗೆ ಬಿದ್ದದ್ದು ಒಂದು ಸಂಗೀತಶಾಲೆ. ಅದರ ಬಾಗಿಲು ಅರ್ಧ ತೆರೆದಿತ್ತು. ಒಳಗಿನಿಂದ ಮೃದುವಾದ ತಂಬೂರಿಯ ನಾದ ಹರಿದುಬರುತ್ತಿತ್ತು. ಆ ನಾದವೇ ನನ್ನನ್ನು ಒಳಗೆ ಕರೆಯುತ್ತಿರುವಂತೆ ಅನಿಸಿತು.ಒಳಗೆ ಇಣುಕಿ ನೋಡಿದೆ.

ಅಲ್ಲಿ ಒಬ್ಬ ಬ್ರಹ್ಮಚಾರಿ ಮುಗುಳುನಗೆಯಿಂದ ನನ್ನನ್ನು ಬರಮಾಡಿಕೊಂಡರು. ಅವರ ಮುಖದಲ್ಲಿ ಸೇವೆಯ ಶಾಂತಿ, ಕಣ್ಣುಗಳಲ್ಲಿ ಗುರುಭಕ್ತಿಯ ಕಿರಣ ಹೊಳೆಯುತ್ತಿತ್ತು.
“ಬನ್ನಿ ಸ್ವಾಮೀಜಿ” ಎಂದು ವಿನಯದಿಂದ ಒಳಗೆ ಕರೆದುಕೊಂಡು ಹೋದರು. ಆ ಸಂಗೀತಶಾಲೆಯ ಗೋಡೆಯ ಮೇಲೆ ಒಂದು ದೊಡ್ಡ ಚಿತ್ರ ತೂಗುಹಾಕಲಾಗಿತ್ತು. ಆ ಚಿತ್ರವನ್ನು ಕಂಡ ಕ್ಷಣವೇ ನನ್ನ ಹೃದಯ ಬಡಿತವೇ ಬದಲಾಗಿತು.
ಅದೇ ವಿಶಾಲ ಹಣೆ. ಅದೇ ಕರುಣೆಯ ಪ್ರಕಾಶದಿಂದ ಹೊಳೆಯುವ ಕಣ್ಣುಗಳು. ಅದೇ ಮೌನದ ಮುಗುಳುನಗೆ.
ಕ್ಷಣಮಾತ್ರದಲ್ಲಿ ಗಚ್ಚಿನಮಠದ ಆ ಮಹಾಶಿವರಾತ್ರಿ ನನ್ನೊಳಗೆ ಮಿಂಚಿನಂತೆ ಜೀವಂತವಾಯಿತು.

ಕಣ್ಣಲ್ಲಿ ವಿಸ್ಮಯ ತುಂಬಿಕೊಂಡು ಕೇಳಿದೆನು: “ಇವರು ಯಾರು?” ಆ ಬ್ರಹ್ಮಚಾರಿ ಅಪಾರ ಭಕ್ತಿಯಿಂದ ಕೈಮುಗಿದು ಉತ್ತರಿಸಿದರು: “ಇವರು ನನ್ನ ಗುರುಗಳಾದ ಪರಮಪೂಜ್ಯ ಸ್ವಾಮಿ ನಾದಬ್ರಹ್ಮಾನಂದಜೀ ಮಹಾರಾಜರು. ನಾನು ಬ್ರಹ್ಮಚಾರಿ ಸದಾನಂದ. ಇಲ್ಲಿ ಸಂಗೀತಸೇವೆಯನ್ನು ಸಲ್ಲಿಸುತ್ತಿದ್ದೇನೆ.”

ಆ ಮಾತು ಕೇಳಿದ ಕ್ಷಣದಲ್ಲಿ ನನ್ನೊಳಗೆ ಒಂದು ಅನಿರ್ವಚನೀಯ ಕಂಪನ ಉಂಟಾಯಿತು. ವರ್ಷಗಳ ಹಿಂದೆ ಗಚ್ಚಿನಮಠದಲ್ಲಿ ಕ್ಷಣಮಾತ್ರ ದರ್ಶನ ನೀಡಿದ ಆ ಮಹಾಯೋಗಿ ಇಲ್ಲಿಯೂ ನಾದರೂಪವಾಗಿ ಜೀವಂತವಾಗಿದ್ದಾರೆ ಎಂಬ ಅನುಭವ ಮೂಡಿತು. ಅಷ್ಟರಲ್ಲೇ ಸಂಗೀತಶಾಲೆಯ ಬಾಗಿಲಲ್ಲಿ ಮತ್ತೊಂದು ದಿವ್ಯಸಾನ್ನಿಧ್ಯ ಕಾಣಿಸಿತು.

ಇಳಿವಯಸ್ಸಿನ ಹಣ್ಣುಹಣ್ಣಾದ ಸನ್ಯಾಸಿಗಳು ನಿಧಾನವಾಗಿ ಒಳಗೆ ಪ್ರವೇಶಿಸಿದರು. ಅವರ ನಡೆ ಮೃದುವಾಗಿತ್ತು; ಆದರೆ ಅವರ ಸಾನ್ನಿಧ್ಯವೇ ಸಂಪೂರ್ಣ ವಾತಾವರಣವನ್ನು ಪ್ರಕಾಶಮಯಗೊಳಿಸಿತು. ಅವರ ಪಾದಗಳಿಗೆ ಸಾಷ್ಟಾಂಗ ನಮಸ್ಕರಿಸಿದೆನು.
ಅವರೇ ಆಶ್ರಮಾಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಚಿದಾನಂದ ಸರಸ್ವತಿಯವರು.ಅವರು ಅಪಾರ ವಾತ್ಸಲ್ಯದಿಂದ ನನ್ನನ್ನು ಎಬ್ಬಿಸಿ ವಿಚಾರಿಸಿದರು:”ಎಲ್ಲಿಂದ ಬಂದಿದ್ದೀರಿ?”
“ಕರ್ನಾಟಕದಿಂದ-ಯೋಗಸಾಧನೆಗಾಗಿ ಬಂದಿದ್ದೇನೆ,” ಎಂದೆ. ಅಷ್ಟೇ. ಅವರ ಮುಖದಲ್ಲಿ ಮಗುವಿನಂತ ಆನಂದ ಅರಳಿತು. ಕೂಡಲೇ ಅವರು ಕನ್ನಡದಲ್ಲೇ ಮಾತನಾಡಲು ಆರಂಭಿಸಿದರು. ಆ ಕ್ಷಣದಲ್ಲಿ ಅನ್ಯಭೂಮಿಯಲ್ಲಿದ್ದ ನಾನು ತಾಯಿನಾಡಿನ ಮಡಿಲಿಗೆ ಮರಳಿದ ಭಾವನೆ ಅನುಭವಿಸಿದೆನು. ಅವರ ಪ್ರತಿಯೊಂದು ಮಾತೂ ಕೇವಲ ಸಂಭಾಷಣೆ ಆಗಿರಲಿಲ್ಲ; ಅದು ಆತ್ಮವನ್ನು ಸ್ಪರ್ಶಿಸುವ ಮಂತ್ರಧಾರೆ.

ನಂತರ ಅವರು ಆ ಸಂಗೀತಶಾಲೆಯತ್ತ ತೋರಿಸಿ ಹೇಳಿದರು: “ಇದು ‘ಸ್ವಾಮಿ ನಾದಬ್ರಹ್ಮಾನಂದಜೀ ಸಂಗೀತಶಾಲೆ.’ ಈ ಆಶ್ರಮದ ನಾದಹೃದಯ.”
ಅದಾದ ಬಳಿಕ ಸ್ವಾಮಿ ನಾದಬ್ರಹ್ಮಾನಂದಜೀಯವರ ದಿವ್ಯಜೀವನದ ಅನೇಕ ಪುಟಗಳನ್ನು ನನ್ನ ಮುಂದೆ ತೆರೆದಿಟ್ಟರು. ಅವರ ಸಂಗೀತಸಾಧನೆ, ಹಾರ್ಮೋನಿಯಂ ಮತ್ತು ತಬಲಾವಾದನದಲ್ಲಿ ಪಡೆದ ಅಪೂರ್ವ ಸಿದ್ಧಿ, ನಾದಯೋಗದ ಮೂಲಕ ಸಾಧಿಸಿದ ಆಧ್ಯಾತ್ಮಿಕ ಪರಮಾವಸ್ಥೆ, ಸ್ವಾಮಿ ಶಿವಾನಂದ ಮಹಾರಾಜರೊಂದಿಗಿನ ಅವರ ದಿವ್ಯ ಒಡನಾಟ-ಇವೆಲ್ಲವನ್ನು ಪೂಜ್ಯ ಚಿದಾನಂದಜೀ ಮಹಾರಾಜರು ಭಾವಪರವಶರಾಗಿ ವಿವರಿಸುತ್ತಿದ್ದರು.
ಅವರು ಮಾತನಾಡುತ್ತಿದ್ದಂತೆ ನನ್ನ ಮನಸ್ಸು ಮತ್ತೆ ಗಚ್ಚಿನಮಠದ ಆ ಮೊದಲ ಮಹಾಶಿವರಾತ್ರಿಯೊಳಗೆ ಜಾರಿತು.ದೀಪಗಳ ಜ್ಯೋತಿ-ಮಂತ್ರಗಳ ಘೋಷ-ಮೌನಯೋಗಿಗಳ ಕರುಣೆ-ತಬಲೆಯ ನಾದ ಮತ್ತು ನನ್ನ ಶಿರದ ಮೇಲೆ ಇಳಿದ ಆ ಹಸ್ತಮಸ್ತಕ ಸಂಯೋಗ
ಇಂದಿಗೂ ಅನಿಸುತ್ತದೆ. ಆ ದಿನ ಅವರು ನನ್ನ ತಲೆಯ ಮೇಲೆ ಹಸ್ತವಿಟ್ಟದ್ದು ಕೇವಲ ಆಶೀರ್ವಾದಕ್ಕಾಗಿ ಅಲ್ಲ; ನನ್ನೊಳಗಿನ ನಾದವನ್ನು ಜಾಗೃತಗೊಳಿಸಲು.

ಇಂದಿಗೂ ಅವರ ಹಸ್ತಸ್ಪರ್ಶದ ಪರಿಮಳ ನನ್ನ ಶಿರದ ಮೇಲೆ ಉಳಿದಂತಿದೆ. ಅವರ ಕಣ್ಣುಗಳ ದಿವ್ಯತೆ ನನ್ನ ಧ್ಯಾನದ ನಿಶ್ಶಬ್ದದಲ್ಲಿ ಮಿಂಚುತ್ತದೆ. ಅವರ ತಬಲೆಯ ನಾದ ನನ್ನ ಉಸಿರಿನೊಳಗೆ ಓಂಕಾರದಂತೆ ಪ್ರತಿಧ್ವನಿಸುತ್ತದೆ.
ಕೆಲವೊಮ್ಮೆ ಗಾಢಧ್ಯಾನದಲ್ಲಿ ಕುಳಿತಾಗ ಆ ಮಹಾಶಿವರಾತ್ರಿಯ ಇಡೀ ರಾತ್ರಿಯೇ ಮತ್ತೆ ನನ್ನೊಳಗೆ ಜೀವಂತವಾಗುತ್ತದೆ. ದೀಪಗಳ ಕಂಗೊಳ, ವಚನಗಳ ಜ್ಯೋತಿ, ಗುರುಗಳ ಕರುಣೆ, ನಾದಯೋಗಿಯ ತಬಲಾ, ಮತ್ತು ಮೌನವಾಗಿ ನನ್ನ ಬದುಕಿನ ದಿಕ್ಕನ್ನೇ ಶಾಶ್ವತವಾಗಿ ಬದಲಿಸಿದ ಆ ದಿವ್ಯ ಹಸ್ತಮಸ್ತಕ ಸಂಯೋಗ.

ನಿಮಗೂ ಆ ನಾದಯೋಗಿ ಸ್ವಾಮಿ ನಾದಬ್ರಹ್ಮಾನಂದ ಮಹಾರಾಜರ ವಿಸ್ಮಯಕಾರಿ ಜೀವನಚರಿತ್ರೆ ತಿಳಿದುಕೊಳ್ಳುವ ತವಕವಿದೆ ಎಂಬ ಭಾವನೆ ನಮ್ಮದಾಗಿದೆ. ಸೂಕ್ತ ಸಮಯದಲ್ಲಿ ಆ ಮಹಾಯೋಗಿಯ ದಿವ್ಯ ಜೀವನವೃತ್ತಾಂತವನ್ನು ನಿಮ್ಮ ಮುಂದೆ ವಿನಯಪೂರ್ವಕವಾಗಿ ಅರ್ಪಿಸುತ್ತೇನೆ.

ಶರಣು ಶರಣಾರ್ಥಿಗಳೊಂದಿಗೆ,

ಹರಗುರು ಚರಣ ಸೇವೆಯಲ್ಲಿ
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ
ಜಗದ್ಗುರು ಪೀಠ (ಹರಪೀಠ) ಹರಿಹರ.

Address

311, Shivamogga Road, Hanagawadi Post
Harihar
577601

Alerts

Be the first to know and let us send you an email when Panchamasali Jagadguru Peetha,Harihar posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Panchamasali Jagadguru Peetha,Harihar:

Share