ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ
ಹನೂರು ತಾಲ್ಲೂಕು ||
ಚಾಮರಾಜನಗರ ಜಿಲ್ಲೆ
ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟ 🚫🚯🚭
Instagram :
https://www.instagram.com/male_mahadeswara__hills?igsh=ZWU3N2hveHRrYWw=
youtube :
https://youtube.com/?si=Y2j4md5aCFw6Pw2w ಕನ್ನಡ ನಾಡಿನ ಜಾನಪದ ಸಾಹಿತ್ಯದಲ್ಲಿ ಕಂಸಾಳೆ ಪದಗಳಿಗೆ ಅದರದ್ದೇ ಆದ ಸ್ಥಾನವಿದೆ. ಇಡೀ ವಿಶ್ವದಲ್ಲೇ ಕಲೇವಲ ಎಂಬ ಪೋಲಾಂಡ್ ದೇಶದ ಮೌಖಿಕ ಕಾವ್ಯವು ಅತಿ ದೊಡ್ಡ ಮಹಾಕಾವ್ಯ. ಅದು ಬಿಟ್ಟರೆ
ಎರಡನೆಯದು ನಮ್ಮ ಮಾದೇಶ್ವರನ ಕಾವ್ಯ. ಮೌಖಿಕ ಕಾವ್ಯ ಎಂದರೆ ಅದು ಬಾಯಿಂದ ಬಾಯಿಗೆ ಸಾಗಿಬಂದ ಕಾವ್ಯ, ಬರೆದಿಟ್ಟ ಕಾವ್ಯವಲ್ಲ. ಅಂದರೆ ಮಾತಿನ ಮೂಲಕ ರಚನೆಯಾದ ಕಾವ್ಯ.
ನಮ್ಮ ಮಾದೇಶ್ವರನ ಕಾವ್ಯಕ್ಕೆ ಕಂಸಾಳೆ ಕಾವ್ಯ ಎಂದೂ ಹೇಳಬಹುದು ಕಾರಣ ಮಾದೇಶ್ವರನ ಕಥೆ ಮಾಡುವಾಗ ಕಂಸಾಳೆ ದಂಬಡಿ ತಂಬೂರಿ ಮುಂತಾದ ಉಪಕರಣಗಳನ್ನು ಬಳಸಿ ಮಾದೇಶ್ವರನ ಕಥೆ ಮಾಡಲಾಗುತ್ತದೆ. ಇದರಲ್ಲಿ ಕಂಸಾಳೆ ಬಟ್ಟಲು ಮುಖ್ಯ ಉಪಕರಣ. ಮಾದೇಶ್ವರನ ಕಥೆ ಅಥವಾ ಕಾವ್ಯ ಇದು ಏಳು ಹಗಲು ಏಳು ರಾತ್ರಿ ಕಾವ್ಯ ಎಂದು ನಾನು ಕೇಳಿದ್ದೇನೆ. ಇದರಲ್ಲಿ ಅನೇಕ ಸಾಲುಗಳು ಬರುತ್ತವೆ. ಅವುಗಳಲ್ಲಿ ಮುಖ್ಯವಾದವು - ಮಾದೇಶ್ವರ ಹುಟ್ಟಿ ಬೆಳೆದ ಸಾಲು, ಸಂಕಮ್ಮನ ಸಾಲು, ಬೇವಟ್ಟಿ ಕಾಳಮ್ಮನ ಸಾಲು, ಇಕ್ಕೇರಿ ದೇವಮ್ಮನ ಸಾಲು, ಆಲಂಬಾಡಿ ಜುಂಜೆಗೌಡನ ಸಾಲು, ಸರಗೂರಯ್ಯನ ಸಾಲು ಮುಖ್ಯವಾದವು.
ಇಂತಹ ಕಾವ್ಯಗಳು ಕೇಳುಗರಲ್ಲಿ ಆಸಕ್ತಿ, ಕುತೂಹಲ, ಹಾಸ್ಯ, ಭಕ್ತಿ ಭಾವಗಳನ್ನು ಮೂಡಿಸುತ್ತವೆ. ಕೇಳಲು ಇಂಪಾಗಿರುತ್ತದೆ. ಹಿಂದೆ ಯಾರಾದರೂ ಮೃತರಾದರೆ ಅವರ ತಿಥಿಯ ದಿನ ಇಂತಹ ಕಂಸಾಳೆ ಕಥೆಗಳನ್ನೋ ಅಥವಾ ಹರಿಕಥೆಗಳನ್ನೋ ಮಾಡಿಸುತ್ತಿದ್ದರು. ಈಗ ಕ್ರಮೇಣ ಇಂತಹ ಆಚರಣೆಗಳು ಕಡಿಮೆಯಾಗಿವೆ.
ಮಾದೇಶ್ವರನ ಬಗ್ಗೆ ನಾವು ತಿಳಿಯಬೇಕಾದರೆ ನಮಗೆ ಕಂಸಾಳೆ ಕಥೆಗಳಲ್ಲಿ ಸಿಗುವಷ್ಟು ಮಾಹಿತಿ ಬೇರೆಲ್ಲೂ ಸಿಗುವುದಿಲ್ಲ. ಆದರೆ ಇದರ ಮೇಲಿನ ಆಸಕ್ತಿ ಇಂದಿನ ಯುವಜನಾಂಗದಲ್ಲಿ ಕಾಣುತ್ತಿಲ್ಲ ಎಂಬುದು ವಿಷಾದನೀಯ.
ನಮ್ಮ ಪುರಾಣಗಳಲ್ಲಿ ನಾವು ಯಾವುದೇ ಪುಣ್ಯಕ್ಷೇತ್ರಗಳಿಗೆ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದರೆ ನಾವು ಆ ಸ್ಥಳದ ಮಹಾತ್ಮೆ ತಿಳಿಯಬೇಕು ಇದರಿಂದ ನಮಗೆ ಹೆಚ್ಚಿನ ಫಲ ದೊರೆಯುತ್ತದೆ ಎಂದು ಹೇಳಲಾಗಿದೆ. ಅದೇ ರೀತಿ ನಾವು ನಮ್ಮ ಮಾದೇಶ್ವರನ ಬೆಟ್ಟಕ್ಕೆ ಭೇಟಿ ನೀಡಿದರೆ ನಾವು ನಮಗೆ ಗೊತ್ತಿಲ್ಲದ ಮಾಹಿತಿ ಸಂಗ್ರಹಿಸಬೇಕು. ಮಾದೇಶ್ವರನ ಕಾವ್ಯ ನಮ್ಮ ಕನ್ನಡ ನಾಡಿನ ಜಾನಪದ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದೆ.
ಈ ಕಾವ್ಯವು ಸಾವಿರಾರು ಜಾನಪದ ಗೀತೆಗಳಿಗೆ ತಾಯಿಬೇರಾಗಿದೆ. ಆದರೆ ನಮ್ಮ ದುರಾದೃಷ್ಟಕ್ಕೆ ಇಂದಿನ ಕೆಲವು ಯುವಜನಾಂಗ ಮಾದೇಶ್ವರನ ಬೆಟ್ಟಕ್ಕೆ ಕೇವಲ ಸೆಲ್ಫಿ ಫೋಟೋ ತೆಗೆದುಕೊಳ್ಳಲು, ಅಥವಾ ಕೇವಲ ಮನರಂಜನೆಗೋಸ್ಕರ ಅಥವಾ ಎಂಜಾಯ್ ಮಾಡಲಿಕ್ಕೆ ಬರುತ್ತಾರೇ ವಿನಃ ಮಾದಪ್ಪನ ಮೇಲಿನ ಆಸಕ್ತಿ ಕೆಲವರಿಗೆ ಬೇಕಿಲ್ಲ. ಬರೀ ಸ್ನಾನ ಮಾಡಿ ಸರತಿಯಲ್ಲಿ ನಿಂತು ಸ್ವಾಮಿಯ ದರ್ಶನ ಮಾಡಿ ಕೆಲವು ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಎಷ್ಟು ಲೈಕ್ ಎಷ್ಟು ಕಮೆಂಟ್ ಬರುತ್ತವೆ ಎಂದು ತಿಳಿದುಕೊಂಡು ಖುಷಿ ಪಡುತ್ತಾರೆ.
ನಾವು ನಮ್ಮ ಸಂಸ್ಕೃತಿ ಪರಂಪರೆಗಳನ್ನು ರಕ್ಷಿಸಬೇಕು. ಮಾದಪ್ಪನ ಕಥೆ ಮಾಡುವ ನೀಲಗಾರರಿಗೆ ಪ್ರೋತ್ಸಾಹ ನೀಡಬೇಕು. ಮಾದೇಶ್ವರನ ಕಥೆಗಳು ಯೂಟ್ಯೂಬ್ನಲ್ಲಿ ಸಿಗುತ್ತದೆ. ಕೆಲವರು ಇಂತಹ ಪುಣ್ಯಕಥೆಗಳನ್ನು ಅಪ್ಲೋಡ್ ಮಾಡಿದ್ದಾರೆ. ಅವುಗಳನ್ನು ಕೇಳಿ ಆನಂದಿಸಿ. ಅವುಗಳಲ್ಲಿ ಸಿಗುವ ಮಾಹಿತಿ ಸಂಗ್ರಹಿಸಿ. ಪುಣ್ಯಕಥೆಗಳ ಸಂಗ್ರಹದಿಂದ ನಿಜಕ್ಕೂ ಪುಣ್ಯ ದೊರೆಯಲಿದೆ.
ಒಂದಂತೂ ಸತ್ಯ, ಎಲ್ಲಿಯವರೆಗೆ ಮಾದೇಶ್ವರನ ಕಥೆಗಳು ಇರುತ್ತವೆಯೋ ಅಲ್ಲಿಯವರೆಗೂ ಮಹದೇಶ್ವರ ಇರುತ್ತಾನೆ. ಯಾವಾಗ ಇಂತಹ ಕಥೆಗಳು ಮರೆಯಾಗುತ್ತವೆಯೋ ಅಂದೇ ಮಹದೇಶ್ವರ ಮರೆಯಾಗುತ್ತಾನೆ.