Infant Jesus Church Bantwal

Infant Jesus Church Bantwal A Historical Church Of Bantwal, which is located at Modankap. It ages around 300 odd years. Welcome to its Official Page.

Infant Jesus Church, Modankap is also a three hundred year old church which is the main church of the Bantwal deanery headed by the Vicar Var.

18/11/2019

ಈ ಭೂಮಿ ಬಣ್ಣದ ಬುಗುರಿ, ಜೋರಾಗ್ತಿರ‍್ಗಿದ್ರೆ ಹೇಗಿರ‍್ತದಂತೀರಿ?

[ತಿಳಿರುತೋರಣ * * ಶ್ರೀವತ್ಸ ಜೋಶಿ]

ಅದನ್ನೊಂದು ‘ರೆ’ ಪ್ರಪಂಚ ಅಂತಂದುಕೊಳ್ಳೋಣ. ‘ಆದ್ರೆ ಹೋದ್ರೆ ಅಜ್ಜಿಗ್ ಮೀಸೆ ಬಂದ್ರೆ ಎತ್ತು ಕರು ಹಾಕಿದ್ರೆ ಕೋಣ ಹಾಲು ಕೊಟ್ಟ್ರೆ...’ ಎಂದು ಚಿಕ್ಕಂದಿನಲ್ಲಿ ಹೇಳ್ತಿದ್ದೆವಲ್ಲ? ಈಗ ಬೇಕಿದ್ದರೆ ‘ರಾಹುಲ್ ಗಾಂಧಿಗೆ ಮದ್ವೆ ಆದ್ರೆ’ ಅಂತನೂ ಸೇರಿಸಿಕೊಳ್ಳಬಹುದು. ಅದೆಲ್ಲ ಆಗೋದಿಲ್ಲವೆಂದು ಗೊತ್ತು, ಆದರೂ ಅಕಸ್ಮಾತ್ ಹಾಗೆ ಆದರೆ? ಅಂಥದೇ ಒಂದು ಆಲೋಚನೆಯಿದು- ನಮ್ಮ ಭೂಮಿ ಸಡನ್ನಾಗಿ ಮೂಡ್ ಚೇಂಜ್ ಮಾಡ್ಕೊಂಡು ಈಗಿನದಕ್ಕಿಂತ ಹೆಚ್ಚು ಸ್ಪೀಡಾಗಿ ತಿರುಗತೊಡಗಿದರೆ!? ಹೆಚ್ಚು ಅಂದರೆ ಹೆಚ್ಚೇನಲ್ಲ, ಈಗಿನದಕ್ಕಿಂತ ಗಂಟೆಗೆ ಒಂದು ಮೈಲಿಯಷ್ಟೇ ಹೆಚ್ಚು ಅಂತಿಟ್ಕೊಳ್ಳೋಣ. ಏನಾಗಬಹುದು? ಯೋಚಿಸುವ ಮುನ್ನ ಈ ಪ್ರಾಥಮಿಕ ಮಾಹಿತಿಯನ್ನೊಮ್ಮೆ ಮನನ ಮಾಡಿಕೊಳ್ಳಿ: ಭೂಮಿಗೆ ಎರಡು ರೀತಿಯ ಚಲನೆಗಳಿವೆ. ಒಂದನೆಯದು ಸೂರ್ಯನ ಸುತ್ತ ಪ್ರದಕ್ಷಿಣೆ. ಇದಕ್ಕೆ ಭೂಮಿ 365 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಇದನ್ನೇ ನಾವು ಒಂದು ವರ್ಷ ಎನ್ನುತ್ತೇವೆ. ಎರಡನೆಯದು, ಭೂಮಿ ತನ್ನ ಅಕ್ಷದಲ್ಲಿ ತನ್ನ ಸುತ್ತಲೇ ತಿರುಗುವುದು. ಇದಕ್ಕೆ ಭೂಮಿ 24 ಗಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದನ್ನೇ ನಾವು ಒಂದು ದಿನ ಎನ್ನುತ್ತೇವೆ. ಈ ಎರಡು ವಿಧದ ಚಲನೆಗಳು ಹೇಗೆಂದರೆ- ದೇವಸ್ಥಾನಗಳಲ್ಲಿ ಉರುಳುಸೇವೆ ಸಲ್ಲಿಸುವವರು ತಮ್ಮ ಅಕ್ಷದ ಸುತ್ತಲೂ ಸುತ್ತುತ್ತ, ಹಾಗೆಯೇ ಉರುಳುತ್ತ ಸಾಗಿ ಗರ್ಭಗುಡಿಗೂ ಸುತ್ತು ಬರುತ್ತಾರಲ್ಲ, ಆ ರೀತಿ. ಆ ದೃಷ್ಟಿಯಲ್ಲಿ ನೋಡಿದರೆ ಭೂಮಿಯದು ಸೂರ್ಯನ ಸುತ್ತ ಉರುಳುಸೇವೆಯೇ. ಇರಲಿ, ಭೂಮಿಯು ಈ ಎರಡೂ ಚಲನೆಗಳ ವೇಗವನ್ನು ಹೆಚ್ಚಿಸಿಕೊಂಡರೆ ಏನಾಗಬಹುದು? ಎಂಬುದು ಸದ್ಯದ ಹುಚ್ಚು ಆಲೋಚನೆ.

ಇದು ನಿಜಕ್ಕೂ ಹುಚ್ಚಲ್ವಾ? ಅಮೆರಿಕದಲ್ಲಿ ಟ್ರಂಪಣ್ಣನ ಇಂಪೀಚ್‌ಮೆಂಟು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಮುಖದ ಗಂಟು, ನೌಕರರಿಗೆ ಸಂಬಳದಲ್ಲಿ ಹೆಚ್ಚಳ ಬರೀ ವನ್ ಪರ್ಸೆಂಟು, ಮೋದಿದ್ವೇಷಿಗಳಾಗ್ತಿದ್ದಾರೆ ಇನ್ನೂ ಇನ್ನೂ ಇರ್ರೆಲವೆಂಟು... ಹೀಗೆ ಒಬ್ಬೊಬ್ಬರಿಗೂ ಎದುರಿಸಬೇಕಾದ ಸಮಸ್ಯೆಗಳೇ ಬೆಟ್ಟದಷ್ಟುಂಟು. ಅವು ಸಾಕಾಗದಿದ್ದರೆ- ಎಲ್‌ಕೆಜಿಗೆ ಮಗುವನ್ನು ಸೇರಿಸಲು ಎಷ್ಟು ಲಕ್ಷ ಕೂಡಿಡಬೇಕಾಗಿದೆ ಎಂದು ಬೆಂಗಳೂರಿನ ಗೃಹಿಣಿಯೊಬ್ಬಳಿಗೆ ಚಿಂತೆ. ಗ್ಲೋಬಲ್ ವಾರ್ಮಿಂಗ್ ಹೆಚ್ಚಿದೆಯೆಂದು ಗ್ರೇಟಾ ಥನ್‌ಬರ್ಗ್ ಆದಿಯಾಗಿ ಎಲ್ಲರೂ ತುತ್ತೂರಿಯೂದುತ್ತಿದ್ದರೂ ಈ ಬಾರಿಯ ಭೀಕರ ಚಳಿ ಮತ್ತು ಹಿಮಪಾತಗಳನ್ನು ತಡೆದುಕೊಳ್ಳೋದು ಹೇಗಪ್ಪಾ ಎಂದು ಅಮೆರಿಕನ್ನಡಿತಿಯೊಬ್ಬಳಿಗೆ ನಿಟ್ಟುಸಿರು. ಯಾರಿಗೆ ಬೇಕಾಗಿದೆ ‘ಭೂಮಿಯ ಸ್ಪೀಡ್ ಹೆಚ್ಚಾದ್ರೆ ಏನಾದೀತು’ ಎಂಬ ಇಲ್ಲದ ಸಮಸ್ಯೆ? ಹಾಗೆ ಆಗೋದೂ ಇಲ್ಲ, ಒಂದೊಮ್ಮೆ ಆದರೂ ಆಗ ನಾವ್ಯಾರೂ ಉಳಿಯೋದೂ ಇಲ್ಲ. ಮತ್ತ್ಯಾಕೆ ಮಂಡೆಬೆಚ್ಚ?

ಹಾಗಲ್ಲ. ಈ ರೀತಿಯ ಹುಚ್ಚು ಚಿಂತನೆಗಳೂ ನಮ್ಮ ಅರಿವನ್ನು ವಿಸ್ತರಿಸಬಲ್ಲವು. ಆಲೋಚನಾಶಕ್ತಿಯನ್ನು ಹರಿತಗೊಳಿಸಬಲ್ಲವು. ಸಾಮಾನ್ಯ ಜ್ಞಾನ ಹೆಚ್ಚಿಸಬಲ್ಲವು. ಉದಾಹರಣೆಗೆ- ಭೂಮಿಯು ತನ್ನ ಅಕ್ಷದಲ್ಲಿ ತನ್ನ ಸುತ್ತಲೇ ತಿರುಗುತ್ತಿರುವ ವೇಗ, ಈಗ ಎಷ್ಟಿದೆ? ಇದರ ಉತ್ತರವು ನೀವು ಭೂಮಿಯ ಮೇಲೆ ಎಲ್ಲಿದ್ದೀರೆಂಬುದನ್ನು ಅವಲಂಬಿಸಿದೆ. ಭೂಮಧ್ಯ ರೇಖೆಯ ಮೇಲಿರುವ ಜಾಗದಲ್ಲಾದರೆ ಗಂಟೆಗೆ ಸುಮಾರು 1037 ಮೈಲು ವೇಗ. ಧ್ರುವ ಪ್ರದೇಶದತ್ತ ಹೋದಂತೆಲ್ಲ ಇದು ಕಡಿಮೆಯಾಗುತ್ತದೆ. ಸುಲಭವಾಗಿ ಅರ್ಥವಾಗಬೇಕಾದರೆ- ಭೂಮಧ್ಯರೇಖೆಗೆ ಹತ್ತಿರದಲ್ಲಿರುವ ಶ್ರೀಲಂಕಾದಲ್ಲಿ ತುಂಬ ಫಾಸ್ಟು. ಉತ್ತರ ಧ್ರುವಕ್ಕೆ ಹತ್ತಿರದಲ್ಲಿರುವ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಲೋ. ಆ ಕಡೆ ದಕ್ಷಿಣ ಧ್ರುವಕ್ಕೆ ಹತ್ತಿರದಲ್ಲಿರುವ ಸಿಡ್ನಿಯಲ್ಲೂ ಸ್ಲೋ. ಇಲ್ಲಿ ಇನ್ನೊಂದು ವಿಚಾರ ಗಮನಿಸಬೇಕಾದ್ದು ಇದೆ- ಭೂಮಧ್ಯರೇಖೆಗೆ ಹತ್ತಿರದ ಪ್ರದೇಶಗಳಲ್ಲಿ ಹಗಲು-ರಾತ್ರಿ ಹೆಚ್ಚೂಕಡಿಮೆ ಸಮಪ್ರಮಾಣದಲ್ಲಿ ಇರುವುದು, ದೂರದ ಪ್ರದೇಶಗಳಲ್ಲಿ ಹಗಲು-ರಾತ್ರಿ ಅನುಪಾತ ಏರುಪೇರಾಗುವುದು ಇದೇ ಕಾರಣದಿಂದ.

ಸರಿ, ಈಗ ಸ್ಪೀಡ್ ಹೆಚ್ಚಿಸುವ ವಿಷಯಕ್ಕೆ ಬರೋಣ. ಭೂಮಿಯು ತನ್ನ ತಿರುಗುವಿಕೆಯ ವೇಗವನ್ನು ಗಂಟೆಗೆ ಒಂದು ಮೈಲಿಯಷ್ಟು ಹೆಚ್ಚಿಸಿಕೊಂಡರೂ ಭೂಮಧ್ಯರೇಖೆಯ ಆಸುಪಾಸಿನ ಸಮುದ್ರಗಳಲ್ಲಿ ನೀರಿನ ಮಟ್ಟ ಕೆಲವು ಇಂಚುಗಳಷ್ಟು ಹೆಚ್ಚುತ್ತದೆ. ಧ್ರುವ ಪ್ರದೇಶಗಳಿಂದ ನೀರು ಆ ಕಡೆಗೆ ನುಗ್ಗುವುದೇ ಇದಕ್ಕೆ ಕಾರಣ. ಇದು ನಮಗೆ ಗೊತ್ತಾಗಲಿಕ್ಕೆ ಕೆಲವು ವರ್ಷಗಳೇ ಬೇಕಾಗಬಹುದು. ಅದಕ್ಕಿಂತ, ತತ್‌ಕ್ಷಣ ನಮ್ಮ ಗಮನಕ್ಕೆ ಬರಬಹುದಾದ್ದೆಂದರೆ ನಾವು ಅಂತರಿಕ್ಷದಲ್ಲಿ ಸ್ಥಾಪಿಸಿರುವ ಕೃತಕ ಉಪಗ್ರಹಗಳು ಗಲಿಬಿಲಿಗೊಳ್ಳುವವು. ಅವುಗಳನ್ನು ಭೂಮಿಗೆ ನಿರ್ದಿಷ್ಟ ದೂರದಲ್ಲಿ, ಭೂಮಿಯಷ್ಟೇ ವೇಗದಲ್ಲಿ ಸುತ್ತುವಂತೆ ಇರಿಸಿರುತ್ತೇವಲ್ವಾ? ಭೂಮಿಯ ಮೇಲಿನ ನಿರ್ದಿಷ್ಟ ಪ್ರದೇಶವೊಂದನ್ನೇ ಸದಾ ‘ನೋಡುತ್ತ’ ಇರುವುದು ಉಪಗ್ರಹಕ್ಕೆ ಸಾಧ್ಯವಾಗುವುದು ಇದರಿಂದಲೇ. ಹಾಗಿರುವಾಗ ಭೂಮಿ ಅಚಾನಕ್ಕಾಗಿ ಸ್ಪೀಡ್ ಹೆಚ್ಚಿಸಿದರೆ ಎಲ್ಲ ಅಯೋಮಯ! ಉಪಗ್ರಹದಿಂದಾಗಿ ಸಾಧ್ಯವಾಗುವ ದೂರಸಂಪರ್ಕ, ಟೆಲಿವಿಷನ್ ಪ್ರಸಾರ, ಮಿಲಿಟರಿ ಬೇಹುಗಾರಿಕೆ ಎಲ್ಲದಕ್ಕೂ ಅಡಚಣೆ. ಕೆಲವು ಸ್ಮಾರ್ಟ್ ಉಪಗ್ರಹಗಳಲ್ಲಿ ಇಂಧನವೂ ಇರುವುದರಿಂದ ಅವು ತಮ್ಮ ವೇಗವನ್ನೂ ಹೆಚ್ಚಿಸಿಕೊಂಡು ಸರಿದೂಗಿಸಬಲ್ಲವು. ಆದರೆ ಹೆಚ್ಚಿನವುಗಳಿಗೆ ಆ ಸಾಮರ್ಥ್ಯವಿಲ್ಲ. ಅವು ನಿಷ್ಪ್ರಯೋಜಕವೆನಿಸಿ ಹೊಸದಾಗಿ ಉಪಗ್ರಹಗಳನ್ನು ನಿರ್ಮಿಸಬೇಕಾಗುವುದು. ನಿಜ, ಇದೇನೂ ಪ್ರಳಯವಾಗಿ ಪ್ರಪಂಚವೇ ಮುಳುಗಿದಂತೆ ಅಲ್ಲ. ಆದರೆ, ಒಂದೆರಡು ಗಂಟೆ ಕಾಲ ಫೇಸ್‌ಬುಕ್ ವಾಟ್ಸಪ್ಪುಗಳಿಂದ ದೂರವಿದ್ದರೆ, ಇ-ಬಂಧುಮಿತ್ರರ ದರ್ಶನವಾಗದಿದ್ದರೆ, ಚಡಪಡಿಸಿ ಅಲ್ಲೋಲಕಲ್ಲೋಲ ಎನಿಸುವವರಿಗೆ ಇದೂ ಒಂದು ಪ್ರಳಯವೇ.

ಭೂಮಿ ತಿರುಗುವಿಕೆಯ ವೇಗ ಗಂಟೆಗೆ ಒಂದು ಮೈಲು ಹೆಚ್ಚಾದರೇನೇ ಇಷ್ಟು ರಾದ್ಧಾಂತ. ವೇಗ ಇನ್ನಷ್ಟು ಹೆಚ್ಚಿದರೆ? ವೇಗ ಹೆಚ್ಚದೆಯೂ ನಮಗೆ ಗೊತ್ತಿರಬೇಕಾದ ಇನ್ನೊಂದು ವಿಚಾರವೆಂದರೆ ಧ್ರುವ ಪ್ರದೇಶದಲ್ಲಿದ್ದಾಗ ನಮ್ಮ ತೂಕ 70 ಕೆಜಿ.ಯಷ್ಟು ಇದೆಯಾದರೆ ಭೂಮಧ್ಯರೇಖೆಯ ಆಸುಪಾಸಿನ ಸ್ಥಳಗಳಲ್ಲಿ ನೋಡಿಕೊಂಡರೆ ಒಂದರ್ಧ ಕೆಜಿ.ಯಾದರೂ ಕಡಿಮೆ ಇರುತ್ತದೆ. ಭೂಮಿ ತಿರುಗುವಾಗಿನ ಸೆಂಟ್ರಿಫ್ಯೂಗಲ್ ಫೋರ್ಸ್‌ನಿಂದಾಗಿ ಈ ವ್ಯತ್ಯಾಸ. ಅಂದಮೇಲೆ, ತೂಕ ಕಡಿಮೆ ಮಾಡಿಕೊಳ್ಳಲಿಕ್ಕೆ ಎಂಥೆಂಥ ಡಯಟ್‌ಗಳನ್ನೂ ವ್ಯಾಯಾಮಗಳನ್ನೂ ಮಾಡುವವರಿಗೆ ಭೂಮಿಯ ತಿರುಗುವಿಕೆ ವೇಗ ಹೆಚ್ಚುವುದು ಒಂದು ವರದಾನವಿದ್ದಂತೆ. ಆರಾಮಾಗಿ ನಿಂತಲ್ಲೇ ವೆಯ್ಟ್‌ಲಾಸ್! ಒಂದು ವೇಳೆ ಭೂಮಿಯು ಈಗಿನದಕ್ಕಿಂತ ಹತ್ತುಪಟ್ಟು ವೇಗದಲ್ಲಿ- ಅಂದರೆ ಗಂಟೆಗೆ 17641 ಮೈಲುಗಳಷ್ಟು- ತಿರುಗಿದರೆ ಗುರುತ್ವಾಕರ್ಷಣೆಗಿಂತ ಸೆಂಟ್ರಿಫ್ಯೂಗಲ್ ಫೋರ್ಸ್ ಹೆಚ್ಚಾಗುವುದರಿಂದ ಅತಿ ಬೊಜ್ಜಿನ ದಢೂತಿಗಳೂ, ಭೂಮಿಭಾರ ಎನಿಸಿಕೊಂಡವರೂ ಸೊನ್ನೆ ತೂಕದವರಾಗುತ್ತಾರೆ. ಮಿಟುಕಲಾಡಿ ಲಲನೆಯರಂತೂ ತರಗೆಲೆಯಂತೆ ಹಾರಾಡತೊಡಗುತ್ತಾರೆ (ಮೊದಲೇ ಅವರ ಹಾರಾಟಕ್ಕೇನೂ ಕಮ್ಮಿಯಿಲ್ಲ). ಆದರೆ ಇದೆಲ್ಲ ಜೀವಂತ ಉಳಿದಿದ್ದರೆ ಮಾತ್ರ ಎಂದು ಇನ್ನೊಂದು ಬ್ರ್ಯಾಕೆಟ್‌ನಲ್ಲಿ ಓದಿಕೊಳ್ಳಿ.

ಇನ್ನೊಂದು ಪರಿಣಾಮ, ಭೂಮಿಯ ವೇಗ ಹೆಚ್ಚಾದರೆ ನಮ್ಮ ಒಂದು ದಿನದ ಅವಧಿ ಕಡಿಮೆ ಆಗುವುದು. ಇಲ್ಲೂ ಅಷ್ಟೇ. ಗಂಟೆಗೆ ಒಂದು ಮೈಲಿಯಷ್ಟು ಮಾತ್ರ ವೇಗವೃದ್ಧಿ ಆದದ್ದಾದರೆ ದಿನದ ಅವಧಿ ಸುಮಾರು ಒಂದೂವರೆ ನಿಮಿಷದಷ್ಟು ಮಾತ್ರ ಕಡಿಮೆಯಾದೀತು. ಅದು ಅಷ್ಟೇನೂ ನಮ್ಮ ಗಮನಕ್ಕೆ ಬರಲಿಕ್ಕಿಲ್ಲ. ಗಂಟೆಗೆ 100 ಮೈಲುಗಳಷ್ಟು ವೇಗ ಹೆಚ್ಚಾದರೆ? ಆಗ ದಿನದ ಅವಧಿ 22 ಗಂಟೆಗಳು. ಗಡಿಯಾರವನ್ನು ಪ್ರತಿದಿನವೂ ಅಡ್ಜಸ್ಟ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ವರ್ಷಕ್ಕೊಮ್ಮೆ ಗಡಿಯಾರವನ್ನು ಮಾರ್ಚ್‌ನಲ್ಲಿ ಒಂದು ಗಂಟೆ ಮುಂದೂಡುವ, ನವೆಂಬರ್‌ನಲ್ಲಿ ಹಿಂದೆ ತರುವ ‘ಡೇ ಲೈಟ್ ಸೇವಿಂಗ್’ ಕ್ರಮ ಅಮೆರಿಕವೂ ಸೇರಿದಂತೆ ಪ್ರಪಂಚದ ಹಲವು ದೇಶಗಳವರಿಗೆ ಗೊತ್ತಿದ್ದದ್ದೇ. ಆದರೆ ಇದು ವರ್ಷಕ್ಕೊಮ್ಮೆ ಅಲ್ಲ, ಪ್ರತಿದಿನವೂ ಗಡಿಯಾರಗಳನ್ನು ಎರಡು ಗಂಟೆ ಮುಂದೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ರೈಲು-ವಿಮಾನಗಳ ಆಗಮನ ನಿರ್ಗಮನ ಸಮಯ, ಶಾಲೆ-ಕಾಲೇಜುಗಳ ಆರಂಭದ ಸಮಯ, ಕೊನೆಗೆ ಟಿವಿಯಲ್ಲಿ ‘ಮಗಳು ಜಾನಕಿ’ಯ ಪ್ರಸಾರ ಸಮಯಗಳೆಲ್ಲ ಟೋಟಲ್ ಕನ್‌ಫ್ಯೂಷನ್. ನಮಗಷ್ಟೇ ಅಲ್ಲ ಗಿಡ-ಮರ ಪ್ರಾಣಿ-ಪಕ್ಷಿಗಳಿಗೂ ಗೊಂದಲವೋ ಗೊಂದಲ. ನೆನಪಿಡಿ: ಭೂಮಿ ಸಡನ್ನಾಗಿ ವೇಗ ಹೆಚ್ಚಿಸಿದರೆ ಮಾತ್ರ ಇದೆಲ್ಲ ಆಗುವುದು. ಮಿಲಿಯಗಟ್ಟಲೆ ವರ್ಷಗಳಲ್ಲಿ ನಿಧಾನವಾಗಿ ವೇಗ ಹೆಚ್ಚಿಸಿಕೊಂಡರೆ ನಮಗೇನೂ ಗೊತ್ತೇ ಆಗುವುದಿಲ್ಲ.

ಮತ್ತೊಂದು ಭೀಕರ ಪರಿಣಾಮ, ಭೂಮಂಡಲದ ಸುತ್ತಲಿನ ಗಾಳಿಯ ವೇಗ ಹೆಚ್ಚುವುದು. ಅಂದರೆ ಚಂಡಮಾರುತಗಳೆಲ್ಲ ಆಗ ‘ಪ್ರಚಂಡ’ಮಾರುತ ಎನಿಸುವವು. ಯಾಕೆ ಹೀಗೆ? ಇದಕ್ಕೂ ಭೂಮಧ್ಯರೇಖೆಯ ಬಳಿ ಭೂಮಿಯ ತಿರುಗುವಿಕೆ ವೇಗ ಹೆಚ್ಚು ಇರುವುದೇ ಕಾರಣ. ಒಂದೊಮ್ಮೆ ಭೂಮಿ ತನ್ನ ಅಕ್ಷದ ಸುತ್ತ ತಿರುಗುವುದೇ ಇಲ್ಲ ಎಂದು ಊಹಿಸಿ. ಆಗ, ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಬೀಸುವ ಚುಂಬಕ ಗಾಳಿಯು ಉದ್ದಕ್ಕೆ ಒಂದು ಸರಳ ರೇಖೆಯಲ್ಲಿ ಇರುತ್ತದೆ. ಆದರೆ ನಮ್ಮ ಭೂಮಿ ಬುಗುರಿಯಂತೆ ತಿರುಗುತ್ತಲೇ ಇರುತ್ತದಾದ್ದರಿಂದ ಗಾಳಿ ಬೀಸುವಿಕೆಗೆ ತೊಡಕಾಗುತ್ತದೆ. ಇದಕ್ಕೆ ‘ಕೋರಿಯೊಲಿಸ್ ಎಫೆಕ್ಟ್’ ಎಂದು ಹೆಸರು. ಗಾಳಿಯು ಭೂಗೋಲದ ಪಶ್ಚಿಮದಿಂದ ಪೂರ್ವಕ್ಕೆ ಬೀಸುತ್ತದೆ. ಇಲ್ಲೊಂದು ಸಾಮಾನ್ಯ ಜ್ಞಾನದ ಅಂಶ. ಗಾಳಿಯು ಪಶ್ಚಿಮದಿಂದ ಪೂರ್ವಕ್ಕೆ ಬೀಸುವುದು ವಿಮಾನಗಳ ಚಲನೆಗೆ ಅನುಕೂಲ/ಪ್ರತಿಕೂಲ ಆಗುತ್ತದೆ- ಹೇಗೆಂದರೆ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಲುಫ್ತಾನ್ಸಾ ವಿಮಾನವು ಪಶ್ಚಿಮದಿಂದ ಪೂರ್ವಕ್ಕೆ ಗಾಳಿಯ ದಿಕ್ಕಿನಲ್ಲೇ ಸಾಗುವುದರಿಂದ ಬೇಗ ತಲುಪುತ್ತದೆ. ಬೆಂಗಳೂರಿನಿಂದ ಫ್ರಾಂಕ್‌ಫರ್ಟ್‌ಗೆ (ಪೂರ್ವದಿಂದ ಪಶ್ಚಿಮಕ್ಕೆ, ಗಾಳಿಯ ದಿಕ್ಕಿಗೆ ವಿರುದ್ಧವಾದ್ದರಿಂದ) ತಲುಪಲು ಒಂದರ್ಧ ಗಂಟೆಯಾದರೂ ಹೆಚ್ಚು ಸಮಯ ಬೇಕಾಗುತ್ತದೆ. ಅಂತೂ ಭೂಮಿ ತಿರುಗುವ ವೇಗ ಹೆಚ್ಚಿದರೆ ಗಾಳಿಯ ವೇಗವೂ ಹೆಚ್ಚುತ್ತದೆ. ಚಂಡಮಾರುತ ಎದ್ದರೆ, ಅದರ ಸುಳಿ ಅಥವಾ ‘ಕಣ್ಣು’ ಸುತ್ತುವ ವೇಗವೂ ಹೆಚ್ಚಾಗಿ ಪ್ರಚಂಡಮಾರುತ ಆಗುತ್ತದೆ. ಆಸ್ತಿಪಾಸ್ತಿ ಹಾನಿ, ಸಾವು-ನೋವು ನಷ್ಟಗಳ ಪ್ರಮಾಣ ಹೆಚ್ಚುತ್ತದೆಂದು ಬೇರೆ ಹೇಳಬೇಕಿಲ್ಲ.

ಭೂಮಿ ತಿರುಗುವ ವೇಗ ಹೆಚ್ಚಾದರೆ ಭೂಮಧ್ಯರೇಖೆಯ ಆಸುಪಾಸಿನಲ್ಲಿ ಸಮುದ್ರಗಳ ಮಟ್ಟ ಒಂದಿಷ್ಟು ಇಂಚುಗಳಷ್ಟು ಹೆಚ್ಚುತ್ತದೆಂದು ಆಗಲೇ ತಿಳಿದುಕೊಂಡೆವಷ್ಟೆ? ಅದು ಗಂಟೆಗೆ ಒಂದು ಮೈಲು ವೇಗ ಹೆಚ್ಚಳದ ಮಾತಾಯ್ತು. ಗಂಟೆಗೆ 100 ಮೈಲು ವೇಗ ಹೆಚ್ಚಳವಾದರೆ ನೀರಿನ ಮಟ್ಟ ಇನ್ನೂ ಏರಿ ಬಹಳಷ್ಟು ಭೂಭಾಗಗಳು ಮುಳುಗಿ ಹೋಗುವವು. ಅಮೆಜಾನ್ ಅರಣ್ಯ ಪ್ರದೇಶದಿಂದ ಹಿಡಿದು ಆಸ್ಟ್ರೇಲಿಯಾದ ಮರುಭೂಮಿಗಳೆಲ್ಲ ಸುಮಾರು 30ರಿಂದ 65 ಅಡಿಗಳಷ್ಟು ಆಳಕ್ಕೆ ಇಳಿಯುವವು. ಭೂಮಿ ತಿರುಗುವ ವೇಗ ಗಂಟೆಗೆ 1000 ಮೈಲು ಹೆಚ್ಚಳವಾದರಂತೂ ನಿಜಕ್ಕೂ ಪ್ರಳಯಸದೃಶ ಎನಿಸಬಹುದು. ಸೆಂಟ್ರಿಫ್ಯೂಗಲ್ ಫೋರ್ಸ್‌ನಿಂದಾಗಿ ಸಮುದ್ರಗಳಲ್ಲಿ ನೂರಾರು ಅಡಿ ಉಬ್ಬರ ಕಂಡುಬಂದು ಭೂಮಿಯ ಮೇಲಿನ ಎತ್ತರೆತ್ತರದ ಪರ್ವತಗಳೂ ನೀರಿನಿಂದ ಆವೃತ್ತವಾಗುವವು. ಹೆಚ್ಚೆಂದರೆ ಕಿಲಿಮಾಂಜರೊ ಪರ್ವತ ಮತ್ತು ನಮ್ಮ ಮೌಂಟ್ ಎವರೆಸ್ಟ್‌ನಂಥವು ಒಂಚೂರು ನೆತ್ತಿಯನ್ನು ತೋರಿಸುತ್ತ ನಿಂತಿರಬಹುದು ಅಷ್ಟೇ.

ಈ ಹೆಚ್ಚುವರಿ ನೀರು ಬರುವುದೆಲ್ಲಿಂದ? ಧ್ರುವಪ್ರದೇಶದ ಸಮುದ್ರಗಳಿಂದ. ಹಾಗಾಗಿ ಅಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಭೂಮಧ್ಯರೇಖೆಯ ಬಳಿ ಭೂಮಿಯ ತಿರುಗುವಿಕೆ ವೇಗ ಹೆಚ್ಚಾದಾಗ ಗುರುತ್ವಾಕರ್ಷಣ ಕಡಿಮೆಯಾಗುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚುತ್ತದೆ. ದಟ್ಟ ಮೋಡಗಳು ಮತ್ತು ಮಂಜು ಕವಿದಂತೆ ಭಾಸವಾಗುತ್ತದೆ. ನಿರಂತರ ಮಳೆ ಸುರಿಯುತ್ತದೆ. ತಿರುಗುವಿಕೆಯ ವೇಗ ಗಂಟೆಗೆ 17000 ಮೈಲುಗಳಷ್ಟಾದರೆ ಇನ್ನೊಂದು ವಿಚಿತ್ರ ವಿದ್ಯಮಾನ ಜರುಗುತ್ತದೆ. ಗುರುತ್ವಾಕರ್ಷಣ ಶಕ್ತಿಗಿಂತ ಸೆಂಟ್ರಿಫ್ಯೂಗಲ್ ಫೋರ್ಸ್ ಹೆಚ್ಚಾಗುವುದರಿಂದ ಮಳೆ ಹನಿಗಳು ಆಕಾಶದಿಂದ ಭೂಮಿಗೆ ಬೀಳುವ ಬದಲಿಗೆ, ಭೂಮಿಯಿಂದ ಆಕಾಶಕ್ಕೆ ಚಿಮ್ಮುತ್ತವೆ! ಅಂತಹ ಮಳೆಯಲ್ಲಿ ಒದ್ದೆಯಾಗದಂತೆ ಛತ್ರಿ ಯಾವ ನಮೂನೆಯದಿರಬೇಕು, ಅದನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನೀವೇ ಊಹಿಸಿ. ಬದುಕುಳಿದಿದ್ದರೆ ಮಾತ್ರ ಎಂದು ಬ್ರ್ಯಾಕೆಟ್‌ನಲ್ಲಿ ಸೇರಿಸುವುದನ್ನು ಮರೆಯಬೇಡಿ. ವೇಗ ಮತ್ತಷ್ಟು ಹೆಚ್ಚಿದರೆ- ಗಂಟೆಗೆ 24000 ಮೈಲುಗಳಷ್ಟಾದರೆ- ಕ್ರಮೇಣ ನಮ್ಮ ಭೂಮಿ ಗೋಲಾಕಾರವಿರುವುದು ಚಪ್ಪಟೆಯಾಗುತ್ತದೆ. ಹೀಗೆ ಅದು ಆಕಾರ ಬದಲಾಯಿಸುವಾಗ ಅಲ್ಲಲ್ಲಿ ಅತಿ ಭಯಂಕರ ಭೂಕಂಪಗಳಾಗಬೇಕಾಗುತ್ತದೆ. ಜೀವಿಗಳು ಬದುಕುಳಿದಿದ್ದರೆ ಭೂಕಂಪಗಳು ಅವನ್ನೆಲ್ಲ ನುಂಗಿ ನೊಣೆಯುತ್ತವೆ.

ಇಷ್ಟೆಲ್ಲ ಭಯಾನಕ ಚಿತ್ರಣವನ್ನು ಕೊಟ್ಟದ್ದು ಹೀಗೇ ಆಗುತ್ತದೆ ಎಂದಲ್ಲ. ಅಲ್ಲದೇ ಆಗಲೇ ಹೇಳಿದಂತೆ ಸಡನ್ನಾಗಿ ವೇಗ ಹೆಚ್ಚಿದರೆ ಮಾತ್ರ ಇವೆಲ್ಲ ದುಷ್ಪರಿಣಾಮಗಳ ಸಂಭವ. ಮಿಲಿಯಗಟ್ಟಲೆ ವರ್ಷಗಳಲ್ಲಿ, ಅಂದರೆ ‘ಓವರ್ ಎ ಪಿರಿಯಡ್ ಆಫ್ ಟೈಮ್’ ಎಂಬಂತೆ ವೇಗ ಬದಲಾವಣೆಯಾದರೆ ಇಂಥ ತೊಂದರೆಗಳಿಲ್ಲ. ಅಷ್ಟಾಗಿ, ಭೂಮಿ ತಿರುಗುವ ವೇಗ ಅಲ್ಪಸ್ವಲ್ಪ ಹೆಚ್ಚೂಕಡಿಮೆ ಆಗುತ್ತಲೇ ಇರುತ್ತದೆ. ಚಿಕ್ಕಪುಟ್ಟ ಭೂಕಂಪಗಳು, ಸುನಾಮಿ, ಹಿಮಪಾತ ಮುಂತಾದ ಪ್ರಾಕೃತಿಕ ಘಟನೆಗಳೆಲ್ಲ ಭೂಮಿಯ ವೇಗದ ಮೇಲೆ ಪರಿಣಾಮ ಬೀರುತ್ತಿರುತ್ತವೆ. ಭೂಕಂಪದಿಂದ ಸ್ವಲ್ಪ ಭೂಭಾಗ ಒಳಕ್ಕೆ ಹೋದರೆ ಒಟ್ಟಾರೆ ಭೂಗೋಲದ ವ್ಯಾಸ ಕಡಿಮೆಯಾಗುವುದರಿಂದ ತಿರುಗುವ ವೇಗ ಮಿಲಿ ಸೆಕೆಂಡುಗಳಷ್ಟು ಹೆಚ್ಚಾಗುವುದು, ಬಲವಾದ ಗಾಳಿ ಬೀಸಿದಾಗ ಭೂಮಿಯ ವೇಗ ಮಿಲಿ ಸೆಕೆಂಡುಗಳಷ್ಟು ಕಡಿಮೆಯಾಗುವುದು- ಇದೆಲ್ಲ ಆಗುತ್ತಲೇ ಇರುತ್ತದೆ. ನಮ್ಮ ಗಮನಕ್ಕೆ ಬರುವುದಿಲ್ಲ ಅಷ್ಟೇ.

ಇನ್ನೂ ಒಂದು ಸ್ವಾರಸ್ಯಕರ ವಿಚಾರವೆಂದರೆ, ಸುಮಾರು ನಾಲ್ನೂರೈವತ್ತು ಕೋಟಿ ವರ್ಷಗಳ ಹಿಂದೆ ಭೂಮಿಗೆ ಯಾವುದೋ ವಸ್ತು ಬಂದು ಅಪ್ಪಳಿಸಿದಾಗ ಒಂದು ತುಂಡು ಸಿಡಿದು ಅದೇ ಚಂದ್ರನಾಗಿ ಭೂಮಿಯ ಸುತ್ತ ಸುತ್ತತೊಡಗಿದ್ದು ಎನ್ನುತ್ತಾರೆ ವಿಜ್ಞಾನಿಗಳು. ಅದಕ್ಕೆ ಮುಂಚೆ ಬಹುಶಃ ಭೂಮಿಯ ಆಕಾರ ಒಂದು ಚಪ್ಪಟೆ ಫುಟ್‌ಬಾಲ್‌ನಂತೆ ಇತ್ತು. ತಿರುಗುವ ವೇಗ ತುಂಬ ಹೆಚ್ಚಿತ್ತು. ಆಗ ಭೂಮಿಯ ಮೇಲೆ ಹಗಲು ರಾತ್ರಿಯ ಅವಧಿ ಹೆಚ್ಚೆಂದರೆ ನಾಲ್ಕು ಗಂಟೆಗಳಷ್ಟೇ ಇರುತ್ತಿತ್ತು. ಆದರೆ ಚಂದ್ರ ಜನ್ಮತಾಳಿದ ಬಳಿಕ ಪರಿಸ್ಥಿತಿ ಸುಧಾರಿಸಿತು. ಭೂಮಿ ತಿರುಗುವ ವೇಗ ಕ್ರಮೇಣ ಕಡಿಮೆಯಾಗತೊಡಗಿತು. ಪ್ರತಿ ಒಂದು ಕೋಟಿ ವರ್ಷಗಳಲ್ಲಿ ಸುಮಾರು ಗಂಟೆಗೆ ನಾಲ್ಕು ಮೈಲುಗಳಷ್ಟು ವೇಗ ಕಡಿಮೆಯಾಗುತ್ತ ಬಂತು. ಭೂಮಿಯ ಮೇಲೆ ಚಂದ್ರನ ಗುರುತ್ವಾಕರ್ಷಣ ಬಲವಿರುವುದು ಕೂಡ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಚಂದ್ರನಿರುವಷ್ಟೂ ಕಾಲ ಭೂಮಿಯ ವೇಗ ಹೆಚ್ಚುವ ಯಾವುದೇ ಸಾಧ್ಯತೆಗಳಿಲ್ಲ. ಇನ್ನೆಲ್ಲಿಯಾದರೂ ಹೊಸದೊಂದು ವಸ್ತು ಬಂದು ಭೂಮಿಯನ್ನೂ ಚಂದ್ರನನ್ನೂ ಅಪ್ಪಳಿಸಿದರೆ ಆಗ ಗೋವಿಂದಾ!

ಹಾಗೆಲ್ಲ ಆಗಬಾರದು ಎಂದೇ ‘ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ| ದೇಶೋಽಯಂ ಕ್ಷೋಭರಹಿತಃ ಸಜ್ಜನಾಃ ಸಂತು ನಿರ್ಭಯಾಃ’ (ಕಾಲಕಾಲಕ್ಕೆ ಮಳೆಯಾಗಲಿ. ಪೃಥ್ವಿಯು ಸಸ್ಯಶ್ಯಾಮಲೆಯಾಗಿರಲಿ. ದೇಶದಲ್ಲಿ ಕ್ಷೋಭೆ ಇಲ್ಲದಿರಲಿ. ಸಜ್ಜನರು ನಿರ್ಭಯದಿಂದ ಇರುವಂತಾಗಲಿ) ಎಂದು ನಮ್ಮ ಋಷಿಮುನಿಗಳ ವಿಶಾಲವಾದ ಚಿಂತನೆ ಇರುವುದು. ಭೂಮಿ ಬಣ್ಣದ ಬುಗುರಿಯಾಗಿದ್ದರೂ ಚಾಟಿ ಶಿವನ ಕೈಯಲ್ಲಿರುವುದರಿಂದ ಸಮಾಧಾನ. ಇದೊಂದು ಸುಂದರ ನಗರಿ, ಸಕಲ ಜೀವಿಗಳೂ ಇದರ ಮೇಟಿ (ವಾರೀಸುದಾರರು) ಎಂದು ತಿಳಿದುಕೊಂಡು ಸಹಬಾಳ್ವೆ ನಡೆಸಿದರೆ ಲೋಕಕಲ್ಯಾಣ.

* * *

17/11/2019

ಅಕ್ಕನ ಓದಿಗೋಸ್ಕರ ದಣಿವರಿಯದೆ ದುಡಿದ ತಂಗಿ

[ತಿಳಿರುತೋರಣ * 10Nov2019 * ಶ್ರೀವತ್ಸ ಜೋಶಿ]

ಅಕ್ಕ ಓದಿ ವಿದ್ಯಾವಂತಳಾಗಬೇಕು, ಡಾಕ್ಟರ್ ಆಗಬೇಕೆಂಬ ಆಕೆಯ ಕನಸು ನನಸಾಗಬೇಕು. ಅದಕ್ಕೋಸ್ಕರ ತನಗೆ ಎಷ್ಟು ಕಷ್ಟ ಬಂದರೂ ಚಿಂತೆಯಿಲ್ಲ ತಾನವಳಿಗೆ ನೆರವಾಗಬೇಕು ಎಂದು ತ್ಯಾಗಜೀವಿಯಾದ ತಂಗಿಯೊಬ್ಬಳ ಕಥೆಯಿದು. ಆರೇಳು ದಶಕಗಳ ಹಿಂದೆ ಮುಂಬಯಿ ಆಡಳಿತದ ಕನ್ನಡ ಪ್ರದೇಶದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದ ‘ಸಾಹಿತ್ಯವಿಹಾರ’ ಎಂಬ ಕನ್ನಡ ಪುಸ್ತಕದಲ್ಲಿ ನನಗಿದು ಸಿಕ್ಕಿತು. ಶ್ರಮಜೀವಿ ಮಹಾನ್ ತಂಗಿಯ ಪ್ರೇರಣಾದಾಯಿ ಶ್ರೇಷ್ಠ ವ್ಯಕ್ತಿತ್ವವನ್ನು ಅರಿಯಲಿಕ್ಕಂತೂ ಹೌದೇಹೌದು, ಜೊತೆಗೇ ನಮ್ಮ ಕಸ್ತೂರಿಕನ್ನಡ ಭಾಷೆಯ ಸೊಗಡನ್ನು, ಸುಂದರ ನಿರೂಪಣ ಶಕ್ತಿಯನ್ನು, ಆಗಿನ ಕಾಲದ ಪಠ್ಯಪುಸ್ತಕಗಳು ಎಷ್ಟು ಮೌಲ್ಯಯುತವಾಗಿದ್ದವೆಂದು ಸವಿಯಲಿಕ್ಕೂ ಇಂತಹ ಪಾಠಗಳನ್ನು ನಾವು ಆಗೊಮ್ಮೆ ಈಗೊಮ್ಮೆ ಮೆಲುಕು ಹಾಕಬೇಕು. ಈಗ ಸುದ್ದಿಮಾಧ್ಯಮಗಳಿಂದಾಗಿ ಗಬ್ಬೆದ್ದುಹೋಗಿರುವ ನಮ್ಮ ಚಿತ್ತಭಿತ್ತಿಯನ್ನು ಈ ರೀತಿಯ ಗಂಗಾಜಲ ಪ್ರೋಕ್ಷಣೆಯಿಂದ ಶುದ್ಧಗೊಳಿಸುತ್ತಿರಬೇಕು. ನನಗಂತೂ ಹಾಗೆ ಅನಿಸುತ್ತದೆ. ಓದಿ ಮುಗಿಸಿದ ಮೇಲೆ ಬಹುಶಃ ನಿಮಗೂ ಹಾಗೆಯೇ ಅನಿಸಬಹುದು.

‘1886ನೆಯ ಜನವರಿ ಮೊದಲ ದಿನ. ಹದಿನೆಂಟು ವರ್ಷದ ಮೇನ್ಯಳು ಮುದುಕ ತಂದೆಯನ್ನು ಹಿಂದೆ ಬಿಟ್ಟು, ಕೊರೆಯುವ ಚಳಿಯಲ್ಲಿ ತನ್ನ ಕೆಲಸಕ್ಕೋಸ್ಕರ ಹೊರಟಳು. ದೃಢ ಮನಸ್ಸಿನಿಂದ ತಂದೆಯನ್ನು ಬೀಳ್ಕೊಂಡು ರೈಲುಗಾಡಿ ಏರಿದಳು. ಒತ್ತಿ ಬರುತ್ತಿದ್ದ ಅಳುವನ್ನು ತಡೆದುಕೊಂಡು ತಂದೆಯನ್ನು ನೋಡಿ ಮೃದುವಾಗಿ ನಕ್ಕಳು. ಗಾಡಿ ಹೊರಟು ತಂದೆಯ ಆಕೃತಿ ಮರೆಯಾದ ಕೂಡಲೆ, ಮೇನ್ಯಳಿಗೆ ದುಃಖ ನಿರಾಶೆಗಳು ಹೃದಯವನ್ನೆಲ್ಲ ತುಂಬಿದವು. ಹುಚ್ಚುಹುಚ್ಚು ಭಾವನೆಗಳೆಲ್ಲ ಅವಳನ್ನು ಹೆದರಿಸಿ ನಡುಗಿಸಿದವು. ಈಗ ಸಿಕ್ಕಿರುವ ಹೊಸ ಮನೆಯೂ ಹಿಂದಿನ ಮನೆಗಳಂತೆ ಆದರೆ? ತಾನು ಇಲ್ಲದಾಗ ತಂದೆ ಖಾಯಿಲೆ ಬಿದ್ದರೆ? ತಿರುಗಿ ತನ್ನ ಮುದಿ ತಂದೆಯನ್ನು ನೋಡುವುದಕ್ಕೆ ಆಗದೆ ಹೋದರೆ? ಅಳು ಉಕ್ಕಿ‌ಉಕ್ಕಿ ಬಂತು. ಕಣ್ಣೊರೆಸಿಕೊಂಡಷ್ಟೂ ಒತ್ತಿ‌ಒತ್ತಿ ಬರುತ್ತಿತ್ತು. ಪ್ರಯಾಣದ ಆಯಾಸದಿಂದಲೂ ಮನಸ್ಸಿನ ಉದ್ವೇಗದಿಂದಲೂ ಜರ್ಜರಿತಳಾಗಿ ಮೇನ್ಯ ಹಳ್ಳಿಯ ಮನೆಯನ್ನು ತಲುಪಿದಳು. ಮನೆಯ ಯಜಮಾನ ಯಜಮಾನಿಯರು ತುಂಬ ಶ್ರೀಮಂತರಲ್ಲದಿದ್ದರೂ ಒಳ್ಳೆಯ ಜನ. ಮನೆಯಲ್ಲಿ ಮಕ್ಕಳ ಒಂದು ತಂಡವೇ ಇತ್ತು. ಮೂರು ಹಿರಿಯ ಗಂಡು ಮಕ್ಕಳು ಹೊರಗೆ ಓದುತ್ತಿದ್ದರು. ಹಿರಿಯ ಹುಡುಗಿ ಬ್ರೊಂಕಾ, ಮೇನ್ಯಳ ಸಮವಯಸ್ಸಿನವಳು. ಅವರಿಬ್ಬರಲ್ಲೂ ಸ್ನೇಹ ಬೆಳೆದುಬಂದಿತು.

ಒಂದು ದಿನ ಬೀದಿಯಲ್ಲಿ ಕೊಳಕಾದ ರೈತರ ಹುಡುಗರ ಒಂದು ಗುಂಪನ್ನು ನೋಡಿದಾಗ, ಮೇನ್ಯಳಿಗೆ ಒಂದು ಯೋಚನೆ ಹೊಳೆಯಿತು. ತಮ್ಮ ಸ್ವಂತ ಭಾಷೆಯನ್ನು ಓದಲು, ಬರೆಯಲು ತಿಳಿಯದ ಈ ಪೋಲಿಷ್ ಹುಡುಗರಿಗೆ ಓದು ಕಲಿಸೋಣವೆಂದು ಅವಳು ಬ್ರೊಂಕಳೊಡನೆ ಪ್ರಸ್ತಾವಿಸಿದಳು. ಇದು ಸರ್ಕಾರಕ್ಕೆ ತಿಳಿದರೆ ಸೈಬೀರಿಯಾದ ಮಂಜನ್ನು ಕಾಣಬೇಕಾದೀತೆಂದು ತಿಳಿದಿದ್ದರೂ ಬ್ರೊಂಕಾ ಇದಕ್ಕೆ ಒಪ್ಪಿಕೊಂಡಳು. ಇವರಿಬ್ಬರೂ ಸೇರಿ ಹತ್ತು-ಹದಿನೈದು ಹುಡುಗರಿಗೆ ಪೋಲಿಷ್ ಭಾಷೆಯನ್ನು ಓದಲು ಕಲಿಸಿಕೊಟ್ಟರು. ದಿನ ಕಳೆಯುತ್ತ ಹೋದಂತೆ ಮೇನ್ಯಳ ಹೃದಯದ ಕಳವಳ ಹೆಚ್ಚುತ್ತ ಬಂದಿತು. ತಾನು ಇಲ್ಲಿ ಗವರ್ನೆಸ್ ಆಗಿ ದುಡಿಯುತ್ತಿರುವ ಸಮಯದಲ್ಲೇ ಸಾವಿರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಸೇರಿ ಓದುತ್ತಿರುವರಲ್ಲವೇ? ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಇವುಗಳಲ್ಲಿ ಪ್ರೌಢವಾದ ಭಾಷಣಗಳನ್ನು ಕೇಳುತ್ತಿರುವ ಅವರ ಭಾಗ್ಯ ಎಷ್ಟಿರಬಹುದು? ಪ್ಯಾರಿಸ್‌ಗೆ ಹೋಗಿ ಓದಬೇಕೆಂಬುದು ತನ್ನ ಮನಸ್ಸನ್ನು ಎಡೆಬಿಡದೆ ಕೊರೆಯುತ್ತಿದ್ದ ಆಸೆ.

ಈ ಹಳ್ಳಿಯ ವಾಸ, ಈ ದುಡಿತ, ಬಾಳಿನ ನೀರಸವಾದ ಈ ವ್ಯವಹಾರ, ಇವೆಲ್ಲವುಗಳಿಂದ ಒಂದೇ ಸಲ ತಪ್ಪಿಸಿಕೊಂಡು ತನ್ನ ಮನಸ್ಸನ್ನು ಸೆಳೆದು ಮೋಹಿಸುತ್ತಿದ್ದ ವಿಶ್ವವಿದ್ಯಾಲಯವನ್ನು ತನ್ನ ಬಾಳಿನಲ್ಲಿ ಎಂದಾದರೂ ಒಂದು ದಿನ ಕಾಣುವುದು ಸಾಧ್ಯವೇ? ಈ ಚಿಂತೆಗಳೆಲ್ಲ ಮೇನ್ಯಳ ಮನಸ್ಸನ್ನು ಕೊರೆಯುತ್ತಿದ್ದಂತೆಯೇ, ತನ್ನ ಬಾಳಿನ ದುಃಖಪೂರಿತ ಪರಿಸ್ಥಿತಿ ಅವಳಿಗೆ ಸ್ಪಷ್ಟವಾಗಿ ಹೊಳೆದು ತೋರುತ್ತಿತ್ತು. ವಾರ್ಸಾದಲ್ಲಿ ಮುದುಕ ತಂದೆ ತನಗಾಗಿ ಕಾಯುತ್ತಿದ್ದಾನೆ. ಪ್ಯಾರಿಸ್‌ನಲ್ಲಿ ಅಕ್ಕ ಬ್ರೋನ್ಯ ಬಡತನದಿಂದ ತೊಳಲುತ್ತಿದ್ದಾಳೆ. ಅವಳಿನ್ನೂ ವರ್ಷಾನುಗಟ್ಟಲೆ ಓದಬೇಕು. ತಾನು ದುಡಿದು ಹಣ ರಾಶಿ ಹಾಕುತ್ತೇನೆಂಬ ತನ್ನ ಭಾವನೆಯನ್ನು ನೆನಸಿಕೊಂಡರೆ ಅವಳಿಗೇ ನಗು ಬರುತ್ತಿತ್ತು. ಇಂತಹ ಸಮಯದಲ್ಲಿ ಹಳ್ಳಿಯಿಂದ ತಪ್ಪಿಸಿಕೊಂಡು ಹೋಗುವುದು ಎಂದಿಗಾದರೂ ಸಾಧ್ಯವೇ? ಗವರ್ನೆಸ್ ಆಗಿ ಹೊಟ್ಟೆ ಹೊರೆಯುವುದಕ್ಕಿಂತ ಹೆಚ್ಚಾಗಿ ಬಾಳಿನಲ್ಲಿ ಇನ್ನೇನೂ ಸಾಧಿಸುವುದಕ್ಕೆ ಸಾಧ್ಯವಿರಲಿಲ್ಲ. ಇಂತಹ ಚಿಂತೆಗಳು ಕಾಡುತ್ತಿದ್ದಾಗ ಮೇನ್ಯ ದುಃಖದಿಂದ ಕುಸಿದು ಹೋಗುತ್ತಿದ್ದಳು.

ಮೇನ್ಯ ಸಂಪಾದಿಸುವ ಹಣಕ್ಕೋಸ್ಕರ ಬಿಡುವಿಲ್ಲದೆ ದಿನವಿಡೀ ದುಡಿಯಬೇಕಾಗುತ್ತಿತ್ತು. ಹುಡುಗರಿಗೆ ಪಾಠ ಹೇಳಿಕೊಡುವುದಂತೂ ಮೈ ಪರಚಿಕೊಳ್ಳುವಂತಹ ಕೆಲಸ. ಮರಳಿನಲ್ಲಿ ಮನೆ ಕಟ್ಟಿದ ಹಾಗೆ. ಒಂದು ವಿಷಯ ಕಲಿಯುವ ಹೊತ್ತಿಗೆ ಹಿಂದಿನ ದಿನದ ಪಾಠ ಅವರು ಪೂರ್ತಿಯಾಗಿ ಮರೆತುಬಿಡುತ್ತಿದ್ದರು. ಮೇನ್ಯಳಿಗೆ ಅಸಾಧ್ಯ ವೇದನೆಯಾಗುತ್ತಿತ್ತು. ಇಷ್ಟೆಲ್ಲ ನೋವು ಮನಸ್ಸನ್ನು ಹಿಂಡುತ್ತಿರುವಾಗಲೇ ಅವಳ ಹೃದಯಕ್ಕೆ ಬರೆ ಕೊಡುವ ಇನ್ನೊಂದು ಘಟನೆಯೂ ನಡೆಯಿತು. ಮನೆಯ ಹಿರಿಯ ಮಗ ಕ್ಯಾಸಿಮಿರ್, ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದವನು ಮನೆಗೆ ಬಂದಿದ್ದ. ಮನೆಯಲ್ಲಿ ಸುಂದರವಾದ ಅಸಾಧಾರಣವಾದ ಹುಡುಗಿಯೊಬ್ಬಳು ಗವರ್ನೆಸ್ ಕೆಲಸದಲ್ಲಿರುವುದನ್ನು ಕಂಡು ಅವಳನ್ನು ಮೆಚ್ಚಿಕೊಂಡ. ತನ್ನ ಶಕ್ತಿಪೂರ್ಣವಾದ ಧ್ಯೇಯ ಅಭಿಪ್ರಾಯಗಳ ಕೆಳಗೆ ದುರ್ಬಲವಾದ ಹೆಣ್ಣು ಹೃದಯವನ್ನು ಅಡಗಿಸಿಕೊಂಡಿದ್ದ ಮೇನ್ಯ, ಅವನನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಳು. ಈ ಮದುವೆಗೆ ಅಡ್ಡಿಯೇನೂ ಇಲ್ಲವೆಂದು ಇಬ್ಬರಿಗೂ ನಂಬಿಕೆ ಇತ್ತು. ಮನೆಯಲ್ಲಿ ಸೇವೆ ಮಾಡುವವಳಾದರೂ ಮೇನ್ಯಳನ್ನು ಮನೆಯವರೆಲ್ಲ ಗೌರವದಿಂದಲೇ ಕಾಣುತ್ತಿದ್ದರು. ಕ್ಯಾಸಿಮಿರ್ ತಂದೆತಾಯಿಗಳ ಮುಂದೆ ಧೈರ್ಯದಿಂದ ಈ ವಿಷಯ ಪ್ರಸ್ತಾವಿಸಿದ. ಎಲ್ಲರೂ ನಿರೀಕ್ಷಿಸಬಹುದಾದಕ್ಕಿಂತ ಹೆಚ್ಚಿನದೇನೂ ನಡೆಯಲಿಲ್ಲ. ತಂದೆ ಕೋಪದಿಂದ ಉರಿದುಬಿದ್ದ. ತಾಯಿ ಮೂರ್ಛೆ ಹೋಗುವುದೊಂದು ಬಾಕಿ. ಐಶ್ವರ್ಯವಂತರ ಹುಡುಗಿಯನ್ನು ಮದುವೆಯಾಗಬಹುದಾದ ತಮ್ಮ ಹಿರಿಯ ಹುಡುಗ ಹೀಗೆ ಮದುವೆಯಾಗುವುದೇ? ಒಂದು ಕಾಸಿಗೆ ಗತಿಯಿಲ್ಲದ, ಇತರರ ಮನೆಯಲ್ಲಿ ದುಡಿಯುವ, ಹುಡುಗಿಯನ್ನು ಶ್ರೀಮಂತರು ಮದುವೆಯಾಗಬಹುದೇ? ಎಷ್ಟೋ ಬೋಧನೆ ಬೈಗುಳಗಳಾದ ಮೇಲೆ ಕ್ಯಾಸಿಮಿರ್ ಆ ಸುದ್ದಿಯನ್ನೇ ಬಿಟ್ಟ. ತಮ್ಮ ಹೆಮ್ಮೆಗೋಸ್ಕರ ಮನೆಯ ಕೆಲಸದವಳಿಗೆ ಯಜಮಾನ ಯಜಮಾನಿಯರು ತೋರಿಸುತ್ತಿದ್ದ ಆದರ ಕರುಣೆಗಳು ಆವಿಯಾಗಿ ಹೋದವು.

ಈ ದುಃಖದ ನೋವಿನಿಂದ ಮೇನ್ಯ ಹಿಂಡಿಹೋದಳು. ಅವಳ ಹೃದಯ ಕಿಡಿಕಾರಿತು. ತನಗಿಂತ ಎಷ್ಟೋ ವಿಧದಲ್ಲಿ ಕೀಳಾದವರಿಂದ ಹೀಗೆ ಅವಮಾನಗೊಂಡದ್ದನ್ನು ಸಹಿಸಲಾರದೆ ಅವಳು ಕುಗ್ಗಿಹೋದಳು. ಇಂತಹ ಸಂಕಟಕ್ಕೆ ಇನ್ನೆಂದೂ ಸಿಕ್ಕುವದಿಲ್ಲೆಂದು ಪ್ರತಿಜ್ಞೆ ಮಾಡಿಕೊಂಡಳು. ಈ ಒಣ ಶ್ರೀಮಂತರ ಮನೆಯಿಂದ ತಪ್ಪಿಸಿಕೊಂಡು ಹೋಗಬೇಕೆಂದು ಅವಳ ಮನಸ್ಸು ಹಾತೊರೆಯಿತು. ಆದರೆ ತಂದೆಗೋಸ್ಕರ, ಅಕ್ಕನಿಗೋಸ್ಕರ ಮೇನ್ಯ ಎಲ್ಲವನ್ನೂ ಉಸಿರೆತ್ತದೆ ನುಂಗಿದಳು. ಮುದುಕ ತಂದೆಗೆ ಇಲ್ಲದ ಈ ಹಿಂಸೆಯನ್ನು ಹಚ್ಚಿಡುವುದರಿಂದ ಏನು ಪ್ರಯೋಜನ? ಇಂತಹ ಹೆಚ್ಚು ಸಂಬಳದ ಕೆಲಸ ಬಿಟ್ಟುಬಿಟ್ಟರೆ ತನ್ನನ್ನೇ ನಂಬಿರುವ ಅಕ್ಕನ ಪಾಡೇನಾಗಬೇಕು? ಇದನ್ನೆಲ್ಲ ನೆನೆದು ಮೇನ್ಯ ತನ್ನನ್ನು ಕಾಡಿಸುತ್ತಿದ್ದ ಚಿಂತೆ ಕೋಪಗಳನ್ನೆಲ್ಲ ತನ್ನದಲ್ಲವೇನೋ ಎಂಬಂತೆ ಒದ್ದು ಕೊಡವಿಬಿಟ್ಟಳು. ಆದ ತಲ್ಲಣವನ್ನೆಲ್ಲ ಬಚ್ಚಿಟ್ಟುಕೊಂಡಳು. ಆದರೂ ಎಷ್ಟು ಪ್ರಯತ್ನಪಟ್ಟರೂ ಈ ಸಂಕಟಗಳಿಂದ ಅವಳು ತತ್ತರಿಸಿದ್ದಳು. ಕೆಲವೊಮ್ಮೆ ತನ್ನ ಚಿಕ್ಕಮ್ಮನ ಮಗಳು ಹೇನ್ರಿಯಟ್ಟಳಿಗೆ ಕಾಗದ ಬರೆದು ತನ್ನ ದುಃಖ ತೋಡಿಕೊಳ್ಳುವಳು. ‘ಆದಷ್ಟು ಪ್ರಯತ್ನಪಟ್ಟು ಯಶಸ್ವಿಯಾಗಲು ನೋಡುತ್ತೇನೆ. ಆಗದೆ ಹೋದರೆ, ನೀಚವಾದ ಪ್ರಪಂಚವನ್ನು ಒಂದೇ ಸಲ ಬಿಟ್ಟು ಹೊರಟು ಹೋಗುತ್ತೇನೆ’ ಎಂದು ಕೂಡ ಒಮ್ಮೆ ಒಂದು ಪತ್ರದಲ್ಲಿ ಆಕೆ ಬರೆದುಕೊಂಡಿದ್ದಳು. ಇಂತಹ ನಿರಾಶೆಗೆ ಮೇನ್ಯ ಎಳೆಯತನದಿಂದಲೂ ಮೈಯೊಡ್ಡಿ ನಿಂತಿದ್ದ ಬಡತನವೊಂದೇ ಕಾರಣವಲ್ಲ. ಆ ಬಡತನ ಮನೆಯವರನ್ನೆಲ್ಲ ಕಾಡಿಸುತ್ತಿತ್ತು. ಸಂಪಾದಿಸಿದ ದುಡ್ಡನ್ನೆಲ್ಲ ಅಕ್ಕನಿಗೆ ಕಳುಹಿಸಿಕೊಟ್ಟ ಮೇಲೆ ಮೇನ್ಯಳ ಹತ್ತಿರ ಸ್ವಂತಕ್ಕೋಸ್ಕರ ಕಾಸುಳಿಯುವುದೇ ಕಷ್ಟವಾಗುತ್ತಿತ್ತು.

ಒಮ್ಮೆ ತನ್ನ ಅಣ್ಣನಿಗೆ ಹೀಗೆ ಪತ್ರ ಬರೆದಿದ್ದಳು: ‘ಪ್ರಿಯ ಜೊಸೈಯೊ, ಈ ಕಾಗದದ ಮೇಲೆ ನನ್ನ ಬಳಿಯಿರುವ ಕೊನೆಯ ಸ್ಟಾಂಪನ್ನು ಹಚ್ಚುತ್ತಿದ್ದೇನೆ. ಈಗ ನನ್ನ ಬಳಿ ಒಂದೇ‌ಒಂದು ಪೆನ್ನಿ ಕೂಡ ಇಲ್ಲದಿರುವುದರಿಂದ ಅಕಸ್ಮಾತ್ ಎಲ್ಲಾದರೂ ಒಂದು ಸ್ಟಾಂಪು ನನಗೆ ಸಿಕ್ಕಿದ ಹೊರತು ರಜದ ತನಕ ಬಹುಶಃ ನಿನಗೆ ಕಾಗದ ಬರೆಯಲಾಗುವುದಿಲ್ಲ. ನಿನಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಿಕ್ಕೆಂದೇ ಈ ಪತ್ರ. ಹಾರೈಸುವುದಕ್ಕೆ ತಡವಾದರೆ ಕಾಸಾಗಲಿ ಸ್ಟಾಂಪಾಗಲಿ ಇಲ್ಲದ ಸಂಕಟದಿಂದ ಮನಸ್ಸಿಗೆ ಹಿಂಸೆಯೇನೋ ಆಗುತ್ತದೆ. ಆದರೂ ಅದಕ್ಕೋಸ್ಕರ ಯಾರಲ್ಲಿಯೂ ಬೇಡುವುದನ್ನು ನಾನಿನ್ನೂ ಕಲಿತಿಲ್ಲ. ವಾರ್ಸಾಕ್ಕೆ ಒಮ್ಮೆ ಹೋಗಿಬರಬೇಕೆಂದು ನನ್ನ ಮನಸ್ಸು ಹಾತೊರೆಯುತ್ತಿದೆ. ಹೊರಗಿನ ನನ್ನ ಉಡುಪು ಹಳೆಯದಾಗಿ ಹರಿದುಹೋಗಿರುವುದನ್ನು ನಾನು ಅಷ್ಟೇನೂ ಹಚ್ಚಿಕೊಳ್ಳುವುದಿಲ್ಲ. ಆದರೆ ಒಳಗಿನ ಆತ್ಮ ಕೂಡ ನವೆದು ಸಣ್ಣಾಗಿ ಹೋಗಿದೆ. ಬ್ರೋನ್ಯ ನನಗೆ ಕಾಗದ ಬರೆದು ಎಷ್ಟೋ ದಿನಗಳಾಗಿ ಹೋಯಿತು. ಅವಳ ಬಳಿಯೂ ಸ್ಟಾಂಪು ಇಲ್ಲ ಎಂದೇ ಕಾಣುತ್ತದೆ.’

ಮನಸ್ಸನ್ನು ಹಿಂಡಿಹಾಕುತ್ತಿದ್ದ ಈ ನೋವು ಹಿಂಸೆಗಳನ್ನೆಲ್ಲ ಮೇನ್ಯ ತನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡು ತನ್ನ ಮನೆಯವರ ಶ್ರೇಯಸ್ಸನ್ನು ಕೋರುವುದರಲ್ಲೇ ತೊಡಗಿದಳು. ಎಷ್ಟು ಕಷ್ಟಗಳು ಮುತ್ತಿ ಕಾಡಿದರೂ ಮೇನ್ಯ ತಾನೂ ಓದುವುದನ್ನು ಮಾತ್ರ ಬಿಡಲಿಲ್ಲ. ವಿಶ್ವವಿದ್ಯಾಲಯದಲ್ಲಿ ಓದುವುದು ಸಾಗದೆ ಹೋಗಿ ಕೆಲಸ ಮಾಡುವವರ ಮನೆಯಲ್ಲಿ ಅವಮಾನ ಸಹಿಸಿಕೊಂಡು, ಬಾಳೇ ಹದಗೆಟ್ಟಿತೆಂದು ನಿರಾಶೆಯಲ್ಲಿ ಕಂಗೆಟ್ಟಿದ್ದ ಅಂತಹ ಸ್ಥಿತಿಯಲ್ಲಿ ಅವಳನ್ನು ಓದಲು ಪ್ರಚೋದಿಸಿದ ಆ ಶಕ್ತಿ ಅಗಾಧವಾದ ಮಹಾಶಕ್ತಿಯೇ. ಮೇನ್ಯಳಿಗೆ ಅದೇನೂ ಹೆಚ್ಚೆಂದು ತೋರುತ್ತಿರಲಿಲ್ಲ. ಓದು ಜ್ಞಾನಾರ್ಜನೆ ಅವಳ ಬಾಳಿಗೆ ಅಂಟಿಬಂದಿದ್ದವು. ಸರ್ವದಾ ಮನಸ್ಸನ್ನು ಹಿಂಡುತ್ತಿದ್ದ ಚಿಂತೆಗಳಿದ್ದರೂ ಪ್ರಯತ್ನ ಮಾಡಿ ಬಾಳನ್ನೂ ಬುದ್ಧಿಯನ್ನೂ ಬೇರೆ ಕಡೆಗೆ ತಿರುಗಿಸಿಕೊಳ್ಳುತ್ತಿದ್ದಳು.’

ಯಾರು ಈ ಮೇನ್ಯಾ? ಪೋಲಂಡ್‌ನ ಒಂದು ಸಾಮಾನ್ಯ ಮನೆತನದಲ್ಲಿ 1867ರಲ್ಲಿ ಶಿಕ್ಷಕ ದಂಪತಿಗೆ ಐದು ಮಕ್ಕಳಲ್ಲಿ ಕಿರಿಯವಳಾಗಿ ಹುಟ್ಟಿದ ಹೆಣ್ಣುಮಗಳು. ಬ್ರೋನ್ಯ ಹಿರಿಯವಳು. ಮೇನ್ಯ ಹನ್ನೊಂದು ವರ್ಷದವಳಿರುವಾಗ ತಾಯಿ ಕ್ಷಯರೋಗಕ್ಕೆ ತುತ್ತಾದಳು. ಬ್ರೋನ್ಯಳೇ ಎಲ್ಲರಿಗೂ ತಾಯಿಯಾಗಬೇಕಾಯಿತು. ಆಕೆಗೋ ಪ್ಯಾರಿಸ್‌ಗೆ ಹೋಗಿ ವೈದ್ಯಕೀಯ ಓದಬೇಕೆಂಬ ಆಸೆ. ಅವಳ ಅಂತಃಕರಣದ ತಳಮಳವನ್ನು ಕಂಡು ಮೇನ್ಯಳಿಗೆ ಸಹಿಸದಾಯಿತು. ಕೊನೆಗೆ ಅಕ್ಕನ ವಿದ್ಯಾಭ್ಯಾಸಕ್ಕಾಗಿ ತಾನೇ ತ್ಯಾಗಮಾಡಲು ಸಿದ್ಧಳಾದಳು. ಬ್ರೋನ್ಯಳನ್ನು ಹೇಗಾದರೂ ಒಪ್ಪಿಸಿ ಪ್ಯಾರಿಸ್‌ಗೆ ಕಳಿಸಿದಳು. ತಾನು ಹೆಚ್ಚಿನ ಸಂಬಳದ ಒಂದು ಕೆಲಸಕ್ಕಾಗಿ, ಮನಸ್ಸಿಲ್ಲದಿದ್ದರೂ ಒಂದು ಹಳ್ಳಿಗೆ ಹೋಗಲು ನಿಶ್ಚಯಿಸಿದಳು. ಹೈಸ್ಕೂಲ್‌ನಲ್ಲಿ ಇಡೀ ಶಾಲೆಗೇ ಮೊದಲ ಸ್ಥಾನದಲ್ಲಿ ತೇರ್ಗಡೆಯಾಗಿದ್ದವಳು, ಉನ್ನತ ವಿದ್ಯಾಭ್ಯಾಸ ಮಾಡಬೇಕೆಂದು ಹಾತೊರೆಯುತ್ತಿದ್ದವಳು, ಇಂತಹ ಗಟ್ಟಿ ನಿರ್ಧಾರವನ್ನು ಕೈಗೊಂಡಳೆಂದರೆ ಮೇನ್ಯಾ ನಿಜಕ್ಕೂ ತ್ಯಾಗಜೀವಿಯೇ. ರಷ್ಯಾದ ಹಿಡಿತದಲ್ಲಿದ್ದ ಪೋಲಂಡ್‌ನಲ್ಲಿ ಹೆಣ್ಮಕ್ಕಳಿಗೆ ಉನ್ನತ ಶಿಕ್ಷಣವೆಂದರೆ ಕಾನೂನುಬಾಹಿರ ಆಗಿದ್ದ ದಿನಗಳವು. ಕದ್ದುಮುಚ್ಚಿ ಹೆಣ್ಮಕ್ಕಳನ್ನೂ ಸೇರಿಸಿಕೊಳ್ಳುತ್ತಿದ್ದ, ಅಧಿಕಾರಿಗಳ ಕೆಂಗಣ್ಣಿಗೆ ಸಿಗದಂತೆ ಆಗಿಂದಾಗ್ಗೆ ಜಾಗ ಬದಲಿಸುತ್ತಿದ್ದ ‘ಫ್ಲೈಯಿಂಗ್ ಯುನಿವರ್ಸಿಟಿ’ಯಲ್ಲಿ ಒಂದಿಷ್ಟು ಓದು ಕೈಗೂಡಿತು. ಆಮೇಲೆ ಪ್ಯಾರಿಸ್‌ಗೆ ಹೋಗಿ ಅಕ್ಕನ ಜೊತೆಸೇರಿ ಓದನ್ನು ಮುಂದುವರೆಸುವುದು ಮೇನ್ಯಾಗೆ ಸಾಧ್ಯವಾಯಿತು. ತನಗಾಗಿ ಇಷ್ಟೆಲ್ಲ ತ್ಯಾಗ ಮಾಡಿದ್ದ ತಂಗಿಯನ್ನು ಕರೆಸಿ ಆಕೆಗೆ ನೆರವಾಗುವುದು ಬ್ರೋನ್ಯಳ ನೈತಿಕ ಕರ್ತವ್ಯವೂ ಆಗಿತ್ತು. ಮೇನ್ಯಳ ಶಿಕ್ಷಣ ಮುಗಿಯುವ ಹೊತ್ತಿಗೆ ಬ್ರೋನ್ಯ ವೈದ್ಯೆಯಾಗಿದ್ದಳು. ಪ್ರಸೂತಿತಜ್ಞೆಯಾಗಿ ವೃತ್ತಿ ಆರಂಭಿಸಿದ್ದಳು.

ಮೇನ್ಯಾ ಎಂದು ಹೆಸರಿದ್ದವಳು ಮೇರಿ ಕ್ಯೂರಿ ಆದಳು. ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮೊದಲು 1903ರಲ್ಲಿ ತನ್ನ ಪತಿ ಪೀರ್ರೇ ಕ್ಯೂರಿಯೊಂದಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪಡೆದಳು. ಆ ಪುರಸ್ಕಾರಕ್ಕೆ ಭಾಜನಳಾದ ಮೊತ್ತಮೊದಲ ಮಹಿಳೆ ಎನಿಸಿಕೊಂಡಳು. ಎಂಟು ವರ್ಷಗಳ ಬಳಿಕ 1911ರಲ್ಲಿ ರಸಾಯನ ಶಾಸ್ತ್ರದಲ್ಲೂ ನೊಬೆಲ್ ಗಳಿಸಿ ‘ಎರಡು ಬೇರೆ ಬೇರೆ ಕ್ಷೇತ್ರಗಳಲ್ಲಿ ನೊಬೆಲ್ ಗಳಿಸಿದ ಏಕೈಕ ವ್ಯಕ್ತಿ’ ಎಂದು ಖ್ಯಾತಳಾದಳು. ರೇಡಿಯಮ್ ಮತ್ತು ಪೊಲೊನಿಯಮ್ ಎಂಬ ಎರಡು ಧಾತುಗಳನ್ನು ಆವರ್ತ ಕೋಷ್ಟಕಕ್ಕೆ ಸೇರಿಸಿದ ಕೀರ್ತಿ ಗಳಿಸಿದಳು. ಎರಡನೆಯದಕ್ಕೆ ಹಾಗೆ ಹೆಸರಿಟ್ಟದ್ದು ಪೋಲಂಡ್ ದೇಶದ ಹೆಸರಿಗೆ ಗೌರವಸೂಚಕವಾಗಿಯೇ. ಹಾಗೆ ನೋಡಿದರೆ ಪೋಲಂಡ್ ದೇಶದಲ್ಲಿದ್ದಷ್ಟು ದಿನಗಳೂ ಮೇರಿಯದು ದುರ್ಭರ ಜೀವನ. ಸ್ವಲ್ಪವಾದರೂ ಉಸಿರಾಡುವಂತಾದದ್ದು ಪ್ಯಾರಿಸ್‌ಗೆ ಹೋದ ಮೇಲೆಯೇ. ಆದರೂ ಮೇರಿಗೆ ತಾಯ್ನಾಡಿನ ಮೇಲಿನ ಪ್ರೀತ್ಯಾದರ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ.

1914ರಲ್ಲಿ, ಮೊದಲ ಪ್ರಪಂಚ ಯುದ್ಧದ ವೇಳೆ ಫ್ರಾನ್ಸ್ ಸರಕಾರವು ಸೇನೆಯ ಖರ್ಚಿಗಾಗಿ ಸಾರ್ವಜನಿಕರಿಂದ ಧನಕನಕ ನೆರವು ಬಯಸಿತು. ಮೇರಿ ತನ್ನೆರಡು ನೊಬೆಲ್ ಪದಕಗಳ ಚಿನ್ನ ಕರಗಿಸಿ ದಾನ ಮಾಡಲಿಕ್ಕೆ ಹೊರಟಳು! ಅಧಿಕಾರಿಗಳು ಒಪ್ಪದಿದ್ದಾಗ, ಪ್ರಶಸ್ತಿಯೊಂದಿಗೆ ಬಂದಿದ್ದ ದುಡ್ಡನ್ನಾದರೂ ಕೊಡುತ್ತೇನೆಂದಳು. ಇಂಥವಳೆದುರು ನಮ್ಮಲ್ಲಿನ ‘ಅವಾರ್ಡ್ ವಾಪ್ಸಿ’ ಡ್ರಾಮಾಬಾಜಿಯವರನ್ನು, ದುಡ್ಡನ್ನೆಲ್ಲ ತಾವೇ ಇಟ್ಟುಕೊಂಡು ಗೆದ್ದಲು ಹಿಡಿದ ಫಲಕ-ಪ್ರಶಸ್ತಿ ಪತ್ರಗಳನ್ನು ಹಿಂದಿರುಗಿಸುವ ನಾಟಕವಾಡುವವರನ್ನು, ತೋರಿಕೆಗಾಗಿ ಚೆಕ್ ಬರೆದುಕೊಟ್ಟು ಆಮೇಲೆ ನಗದುಗೊಳಿಸದಂತೆ ಕೇಳಿಕೊಳ್ಳುವ ದುರುಳ ಭಂಡರನ್ನು, ಅದ್ಯಾವ ಪಾತಾಳಮಟ್ಟದಲ್ಲಿ ನೋಡಬೇಕೋ! ಯುದ್ಧದಲ್ಲಿ ಗಾಯಗೊಂಡ ಸೈನಿಕರ ಚಿಕಿತ್ಸೆಗೆ ಅನುಕೂಲವಾಗುವಂತೆ ಮೊಬೈಲ್ ಎಕ್ಸ್-ರೇ ಘಟಕಗಳನ್ನು ಆರಂಭಿಸಿದ ಮೇರಿ, ತಾನೇ ಡ್ರೈವಿಂಗ್ ಕಲಿತು ಯುದ್ಧಭೂಮಿಯಲ್ಲಿ ಸಂಚರಿಸಿ ಸೈನಿಕರ ನೆರವಿಗೆ ಧಾವಿಸುತ್ತಿದ್ದಳು. ಮಿಲಿಟರಿ ವೈದ್ಯರೂ ಆಕೆಯ ಉತ್ಸಾಹಕ್ಕೆ ಮಣಿಯಲೇಬೇಕಾಯಿತು.

ರೇಡಿಯಮ್‌ಗೆ ಸತತವಾಗಿ ಮೈಯೊಡ್ಡಿದ್ದರಿಂದ ಮೇರಿ ಕ್ಯೂರಿ 1934ರಲ್ಲಿ ಅಪ್ಲಾಸ್ಟಿಕ್ ಎನೀಮಿಯಾ ಎಂಬ ಕಾಯಿಲೆಗೆ ತುತ್ತಾಗಿ ಅಸುನೀಗಿದಳು. ಅವಳ ಟಿಪ್ಪಣಿ ಪುಸ್ತಕದ ಪುಟಗಳ ಮೇಲೆ ಈಗಲೂ ರೇಡಿಯಮ್ ಕಣಗಳಿವೆಯಂತೆ. ಇನ್ನೂ ಸಾವಿರಾರು ವರ್ಷ ಅವು ರೇಡಿಯೊ‌ಆಕ್ಟಿವ್ ಆಗಿ ಇರುತ್ತವಂತೆ! ಅಂದರೆ- ಕಬ್ಬಿನ ಜಲ್ಲೆಯಂತೆ ಬಾಳನ್ನು ಹಿಂಡಿಸಿಕೊಂಡವಳು, ಗಂಧದ ಕೊರಡಿನಂತೆ ತೇಯಿಸಿಕೊಂಡವಳು, ತಾನೇ ಉರಿದರೂ ಇತರರಿಗೆ ಬೆಳಕು ಕೊಡುವಂಥ ದೀಪವಾದಳು ಮೇರಿ ಕ್ಯೂರಿ.
* * *

https://youtu.be/QU-kptRr3ys
17/02/2018

https://youtu.be/QU-kptRr3ys

Valentine's day special video tockies production media presents Direction & editing-Niketh mb Music Dpt- Shashank Camera work-Rakesh Editing ...

The best​ of allGift around anyChristmas treeThe presence of A happy familyAll wrapped upIn each other Happy Merry Chris...
25/12/2017

The best​ of all
Gift around any
Christmas tree
The presence of
A happy family
All wrapped up
In each other

Happy Merry Christmas wishes from
media
https://www.facebook.com/vibmediagroup/

07/05/2017
Like and share and support to team
29/04/2017

Like and share and support to team

Address

Bantwall
574219

Website

Alerts

Be the first to know and let us send you an email when Infant Jesus Church Bantwal posts news and promotions. Your email address will not be used for any other purpose, and you can unsubscribe at any time.

Share