14/01/2026
#ಶಾಲಾಕಾಲೇಜು_ಪಠ್ಯಪುಸ್ತಕಗಳಲ್ಲಿ_ರಕ್ತದಾನ_ಪಠ್ಯ_ವಿಷಯವಾಗಲಿ
#ಪಠ್ಯ #ರಕ್ತದಾನದಮಹತ್ವಪ್ರಯೋಜನ #ಅಭಿಯಾನ #ರಕ್ತದಾನಶ್ರೇಷ್ಠದಾನ
ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದುದು ಎಂಬ ಮಾತಿದೆ. ಜಾತಿ-ಧರ್ಮಗಳ ಸಂಕೋಲೆ ಮೀರಿದ, ಕೃತಕ ಉತ್ಪಾದನೆ/ಸೃಷ್ಠಿಯೇ ಅಸಾಧ್ಯವಾದ ಹಾಗೂ ಮಾನವೀಯತೆ, ಮಾನವೀಯ ಹೃದಯ ಮಿಡಿತಕ್ಕೆ ಸಾಕ್ಷಿಯಾದುದೂ ಕೂಡ ರಕ್ತದಾನ.
ಕುಟುಂಬದ ಹಿರಿಯ/ಕಿರಿಯ ಜೀವವೋ, ಜವಾಬ್ದಾರಿ ಹೊತ್ತ ಪ್ರಮುಖ ಜೀವವೋ ಹಾಗೂ ಪ್ರೀತಿ ಪಾತ್ರರ ಜೀವವೋ ಒಟ್ಟಿನಲ್ಲಿ ಯಾವುದೋ ಕುಟುಂಬದ, ಯಾವುದೋ ಧರ್ಮ-ಜಾತಿಯ ಕಟ್ಟುಪಾಡುಗಳ ಎಲ್ಲೆ ಮೀರಿದ ಅಮೂಲ್ಯ ಜೀವಗಳ ಉಳಿವಿಗಾಗಿ ಮತ್ತೊಬ್ಬ ಮಾನವೀಯ ಹೃದಯದ ವ್ಯಕ್ತಿಯೂ ನಿಷ್ಕಲ್ಮಶ ಮನಸ್ಸಿನಿಂದ ರಕ್ತದಾನದ ಮೂಲಕ ಸ್ಪಂದಿಸುವುದು ಬಹಳ ದೊಡ್ಡ ಗುಣ.
ರಕ್ತದ ದಾನದಿಂದ ಜೀವವೊಂದರ ಉಳಿವು ಮಾತ್ರವಲ್ಲದೇ ರಕ್ತದಾನ ಮಾಡುವ ವ್ಯಕ್ತಿಯ ಆರೋಗ್ಯದಲ್ಲೂ ಗಮನಾರ್ಹ ಚೇತರಿಕೆ ಕಾಣದಲಿದೆ. ಹಲವಾರು ರೋಗಗಳನ್ನು ನಿಯಂತ್ರಿಸುವಂತಹ ಸಾಕಷ್ಟು ಬದಲಾವಣೆಗಳಿಗೂ ರಕ್ತದಾನ ಸಹಕಾರಿ. ಆದರೆ, ರಕ್ತದಾನದ ಮಹತ್ವ, ಅನಿವಾರ್ಯತೆ ಮತ್ತು ಅದರಿಂದಾಗುವ ಪ್ರಯೋಜನಗಳು, ಆರೋಗ್ಯದಲ್ಲಿನ ಚೇತರಿಕೆ ಬಗ್ಗೆ ಅರಿವು ಮೂಡಿಸುವ ಪರಿಣಾಮಕಾರಿ ಕಾರ್ಯಗಳು ಅಷ್ಟಾಗಿ ಆಗುತ್ತಿಲ್ಲ.
ಹೀಗಾಗಿ ಶಾಲಾ-ಕಾಲೇಜು ಹಂತದಲ್ಲೇ ಮಕ್ಕಳು, ವಿದ್ಯಾರ್ಥಿಗಳು, ಯುವಜನರಿಗೆ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ರಕ್ತದಾನದ ಬಗ್ಗೆ ಪ್ರೇರಣದಾಯಕ ಅಂಶಗಳನ್ನು ಶಾಲಾ-ಕಾಲೇಜು ಪಠ್ಯದಲ್ಲೇ ಸೇರಿಸುವುದು ಅನಿವಾರ್ಯವಾಗಿದೆ. ಭವಿಷ್ಯದ ಪ್ರಜೆಗಳಾದ ಶಾಲಾ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ರಕ್ತದಾನ ಕುರಿತು ಅರಿವು ಮೂಡಿಸಿದರೆ ಅವರು ವಯಸ್ಕರಾದಾಗ ಖಂಡಿತಾ ರಕ್ತದಾನಿಯಾಗುತ್ತಾರೆ!
ರಕ್ತದಾನವೂ ಶ್ರೇಷ್ಠವಾದ ದಾನವೆಂಬ ಅಭಿಪ್ರಾಯಕ್ಕೆ ಸರ್ವರ ಒಪ್ಪಿಗೆಯಿದ್ದರೂ ಕೂಡ ರಕ್ತದಾನ ಮಾಡುವುದರಿಂದ ದೈಹಿಕವಾಗಿ, ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿಬಿಡುತ್ತದೆ ಎಂಬ ಭಯ, ಆತಂಕವು ಎಷ್ಟೋ ಜನರನ್ನು ರಕ್ತದಾನದಿಂದ ಹಿಂಜರಿಯುವಂತೆ ಮಾಡುತ್ತಿವೆ. ಈ ಭಯ, ಆತಂಕ, ಗೊಂದಲ, ಅನುಮಾನವನ್ನು ಹೊಗಲಾಡಿಸುವ ಕಾರ್ಯವನ್ನು ಪಠ್ಯಪುಸ್ತಕದ ಮೂಲಕ ಶಾಲಾ-ಕಾಲೇಜು ಹಂತದಲ್ಲೇ ಮಾಡಿದರೆ ಎಷ್ಟೊ ಅಮೂಲ್ಯ ಜೀವಗಳು ಉಳಿಯುತ್ತವೆ.
ಭಾರತವು ವೈಜ್ಞಾನಿಕವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ಕೂಡ ರಕ್ತದಾನದ ಮಹತ್ವದ ಕುರಿತು ತಳಮಟ್ಟದಿಂದಲೇ ಜನ ಸಮುದಾಯಗಳಿಗೆ ಅರಿವು ಮೂಡಿಸಲು ವಿಫಲವಾಗಿದೆಯೇ ಎಂಬ ಅನುಮಾನ ಕಾಡುತ್ತದೆ. ಒಪ್ಪಿತವಲ್ಲದ ಭಯ, ಮಿಥ್ಯ ಆರೋಪಗಳಿಂದ ಅವಶ್ಯಕತೆಗನುಗುಣವಾಗಿ ರಕ್ತ ಸಿಗದೇ ಅದೆಷ್ಟೋ ಜೀವಗಳು ಕಮರಿ ಹೋಗುತ್ತಿವೆ. ಹೀಗಾಗಿ ರಕ್ತದಾನದ ಮಹತ್ವ, ಅದರಿಂದಾಗುವ ಆರೋಗ್ಯದ ಬದಲಾವಣೆಗಳು, ಮಿಥ್ಯಾಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಾಲಾ-ಕಾಲೇಜು ಹಂತಗಳಲ್ಲೇ ಆಗಬೇಕಿದೆ.
ಈ ನಿಟ್ಟಿನಲ್ಲಿ ಕಲಿಕಾ ಪಠ್ಯ ಪುಸ್ತಕಗಳಲ್ಲಿ ಕಡ್ಡಾಯವಾಗಿ ರಕ್ತದಾನದ ಮಹತ್ವ, ಪ್ರಯೋಜನಗಳ ಕುರಿತ, ಸುಳ್ಳು ಆರೋಪ, ಅಭಿಪ್ರಾಯಗಳಿಗೆ ತಜ್ಞರ ಸಲಹೆ- ಅಭಿಪ್ರಾಯಗಳ ಮೂಲಕ ಜನರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಬೇಕಾಗಿದೆ...
ಸರ್ಕಾರಗಳು ಮಾಡಬೇಕಿರುವುದೇನೂ?....
1.ಶಾಲಾ-ಕಾಲೇಜು ಪಠ್ಯಪುಸ್ತಕಗಳಲ್ಲಿ ರಕ್ತದಾನದ ಮಹತ್ವ, ಪ್ರಯೋಜನಗಳ ಕುರಿತ ಪಠ್ಯ ಅಳವಡಿಕೆಗೆ ಅಗತ್ಯ ಕ್ರಮ ವಹಿಸಬೇಕು.
2.ರಕ್ತದಾನ ಕುರಿತಾದ ಸುಳ್ಳು ಅಭಿಪ್ರಾಯಗಳಿಗೆ ತಜ್ಞರ ಸಲಹೆ-ಅಭಿಪ್ರಾಯಗಳ ಮೂಲಕ ಜನರಲ್ಲಿ ಭಯ, ಹಿಂಜರಿಕೆ ಹೋಗಲಾಡಿಸಬೇಕು.
3.ಆಯಾ ಜಿಲ್ಲಾಡಳಿತದಿಂದ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿ/ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುವ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರಕಾರಿ ಕಚೇರಿಗಳಲ್ಲಿ ಆಯಾ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ರಕ್ತನಿಧಿ ಕೇಂದ್ರಗಳ ಅಗತ್ಯಕ್ಕನುಗುಣವಾಗಿ ಕಡ್ಡಾಯವಾಗಿ ರಕ್ತದಾನ ಶಿಬಿರ ಆಯೋಜಿಸುವಂತೆ ಆದೇಶಿಸಬೇಕು.
4.ರಾಷ್ಟೀಯ ಸೇವಾ ಯೋಜನೆ(ಎನ್ಎಸ್ಎ), ಎನ್ಸಿಸಿ ರೀತಿಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ವಿದ್ಯಾರ್ಥಿಗಳಿಗೂ ಹೆಚ್ಚುವರಿ ಶೈಕ್ಷಣಿಕ ಕೃಪಾಂಕಗಳನ್ನು ನೀಡಬೇಕು.
5.ಖಾಸಗಿ ಕಾರ್ಖಾನೆ, ಕಂಪನಿಗಳಲ್ಲೂ ಕಡ್ಡಾಯ ರಕ್ತದಾನ ಶಿಬಿರ ಆಯೋಜನೆಗೆ ಆದೇಶ ನೀಡುವುದು.
ಅಮೂಲ್ಯ ಜೀವಗಳ ಉಳಿವು, ಜನರ ಉತ್ತಮ ಆರೋಗ್ಯಕ್ಕಾಗಿ ರಕ್ತವನ್ನು ದಾನ ಮಾಡುವ, ಅಗತ್ಯ ತುರ್ತು ಸಂದರ್ಭಗಳಲ್ಲಿ ಅನಾರೋಗ್ಯ ಪೀಡಿತರು, ಅಪಘಾತದಲ್ಲಿ ಗಾಯಗೊಂಡವರಿಗೆ ರಕ್ತವನ್ನು ನೀಡುವ ವಿಚಾರದಲ್ಲಿ ಇಂದಿಗೂ ಬಹುತೇಕ ಜನರ ಮನಸ್ಸಿನಲ್ಲಿ ತಪ್ಪು ಭಾವನೆಗಳು ಉಳಿದುಕೊಂಡಿವೆ. ಅವುಗಳನ್ನು ಹೊಗಲಾಡಿಸಲು ಇರುವ ಏಕೈಕ ಮಾರ್ಗವೆಂದರೆ ಅದು ರಕ್ತದಾನದ ಕುರಿತ ಪಠ್ಯಕ್ರಮವನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವುದಾಗಿದೆ. ಈ ಸಂಬಂಧ ಅಗತ್ಯ ಕ್ರಮ ವಹಿಸಬೇಕಾಗಿರುವುದು ಆಡಳಿತ ನಡೆಸುವ ಸರ್ಕಾರಗಳ ಜವಬ್ದಾರಿಯಾಗಿದೆ....
...ಶ್ರೀಶ್ರೀಶ್ರೀ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿರವರು, ಪೀಠಾಧ್ಯಕ್ಷರು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ-ಕೆಂಗೇರಿ....