19/11/2025
ಆತ್ಮೀಯ ಭಗವದ್ಭಕ್ತರೇ,
ವೇದದಲ್ಲಿ ಗಣಪತಿ ಹಾಗೂ ವಿಶ್ವಂಭರನ ಕುರಿತಾಗಿ ಮಾತೊಂದಿದೆ, ಬಲಮುರಿ ವಿಶ್ವಂಭರ ಮಹಾಗಣಪತಿ ನ ಋತೇ ತ್ವತ್ಕ್ರಿಯತೇ ಕಿಂಚನಾರೇ...... ಎಂಬುದಾಗಿ. “ಹೇ ಗಣಪತಿಯೇ , ಹೇ ವಿಶ್ವವನ್ನು ಭರಿಸಿದ ವಿಶ್ವಂಭರನೇ ನಿನ್ನ ಹೊರತಾಗಿ ಈ ಜೀವವೂ ಇಲ್ಲ, ಜೀವನವೂ ಇಲ್ಲ! ಬದುಕಿನ ಚಿಕ್ಕ ಕ್ರಿಯೆಯಿಂದಾರಂಭಿಸಿ ಮಹತ್ಸಾಧನೆಯ ವರೆಗಿನ ನನ್ನೆಲ್ಲಾ ಕ್ರಿಯಾಕಲಾಪಕ್ಕೆ ನಿನ್ನ ಬಲದ ಬೆಂಬಲ ನನಗದು ಸರ್ವದಾ ಅಪೇಕ್ಷಣೀಯ. ಆದ್ದರಿಂದ ನನ್ನೊಳಗಿದ್ದು ಸರ್ವವನ್ನೂ ನೀನೇ ನಡೆಸು.” ಎಂಬುದಾಗಿ ಋಷಿಯು ಆ ಸ್ವಾಮಿಯಲ್ಲಿ ಪ್ರಾರ್ಥಿಸುತ್ತಿದ್ದಾರೆಂದರೆ... ಗಣಪತಿಯ ಆರಾಧನೆಯು ನಮಗೆಷ್ಟು ಅನಿವಾರ್ಯವೆಂಬುದು ವೇದ್ಯವಾಗುವ ಸಂಗತಿ. ನಿತ್ಯಾರಾಧನೆಯನ್ನು ನಡೆಸುವವರೂ ನೈಮಿತ್ತಿಕವಾಗಿ ಪ್ರಾಪ್ತವಾಗುವ ಸುಕಾಲದಲ್ಲಿ ಆ ಸ್ವಾಮಿಯ ಆರಾಧನೆಯನ್ನು ನಡೆಸಿ ಧನ್ಯರಾಗಬಹುದು. ಅಂತಹ ಸುಸಂದರ್ಭವು ಗಣಪತಿಯ ಆರಾಧನೆಗೆ ಪ್ರೋಕ್ತವಾದುದು ಮಹಾಚತುರ್ಥಿಯ ದಿನ. ಅಂದರೆ *24 ನವೆಂಬರ್ 2025 ಸೋಮವಾರ*.
ಆ ದಿನ ಶ್ರೀಕ್ಷೇತ್ರ ಹಾದಿಗಲ್ಲು ಅಭಯಲಕ್ಷ್ಮೀನರಸಿಂಹ ದೇವಾಲಯದಲ್ಲಿ ಪರಿವಾರ ರೂಪದಲ್ಲಿ ಬಿಜಯ ಮಾಡಿರುವ, *ವರದಹಳ್ಳಿಯ ಅವಧೂತ ಶ್ರೀ ಶ್ರೀಧರ ಭಗವಾನ ಪ್ರದತ್ತ ಶ್ರೀ ಬಲಮುರಿ ವಿಶ್ವಂಭರ ಮಹಾಗಣಪತಿ ದೇವರ* ಸಂಪ್ರೀತಿಪೂರ್ವಕ ಲೋಕಕಲ್ಯಾಣಾರ್ಥವಾಗಿ* ಭಕ್ತಜನರಿಗೆ ಸಕಲವನ್ನೂ ಕರುಣಿಸುವ *ವರಗಣಪತಿ ಹೋಮ,** ಮನಃಸಂಕಲ್ಪಿತ ಸರ್ವಕಾರ್ಯಗಳು ಕ್ಷಿಪ್ರವಾಗಿ ನೇರವೇರಲು *ಕ್ಷಿಪ್ರಗಣಪತಿಯಾಗ,* * ಸಾಂಸಾರಿಕ ಸಂಕಷ್ಟ ಸರಣಿಯನ್ನು ದೂರೀಕರಿಸಲು *ಸಂಕಷ್ಟಹರಗಣಪತಿಯಾಗ,* * ಚತುರ್ವಿಧ ಪುರುಷಾರ್ಥದಂತೆ ಚತುರ್ವಿಧ ಮಹಾಫಲಭಾಗಿಯಾಗಲು *ಅಥರ್ವಶೀರ್ಷಯಾಗ,* ಹಾಗೂ ಮಹೈಶ್ವರ್ಯ ಪ್ರಾಪ್ತಿಯಾಗಲು *ಮಹಾಗಣಪತಿ ಯಾಗ* ವನ್ನು ನಡೆಸುವುದೆಂದು ಸಂಕಲ್ಪಿಸಿದ್ದೇವೆ. ಶ್ರೀ ಕ್ಷೇತ್ರದ ಪರಮಭಕ್ತರಾದ ತಾವು ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನುಮನಧನಪೂರ್ವಕವಾಗಿ ಭಾಗವಹಿಸಿ ಶ್ರೀ ಮಹಾಗಣಪತಿಯ ಅನುಗ್ರಹ ಭಾಜನರಾಗಬೇಕಾಗಿ ಕೋರಿಕೆ.
- ಧರ್ಮದರ್ಶಿ ಹಾದಿಗಲ್ಲು ಲಕ್ಷ್ಮೀನಾರಾಯಣ ಸಂಪರ್ಕ : 9663702615